ನಾಟಕಕ್ಕೆ ತೆರೆ; ದೆಹಲಿ ಗದ್ದುಗೆ ಯಾರ ಮಡಿಲಿಗೆ?

ದೆಹಲಿಯಲ್ಲಿ ಸರ್ಕಾರ ರಚನೆ ಸಂಬಂಧ ಅನೇಕ ತಿಂಗಳುಗಳಿಂದ ನಡೆಯುತ್ತಿದ್ದ ನಾಟಕಕ್ಕೆ ತೆರೆಬಿದ್ದಿದೆ. ದೆಹಲಿ ವಿಧಾನಸಭೆ ವಿಸರ್ಜಿಸಬೇಕು ಹಾಗೂ ಚುನಾವಣೆ ನಡೆಸಬೇಕೆಂದು ಕೇಂದ್ರ ಸಚಿವ ಸಂಪುಟದಿಂದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಶಿಫಾರಸ್ಸು ಬಂದಿರುವ ಹಿನ್ನೆಲೆಯಲ್ಲಿ ಮತ್ತೆ ಚುನಾವಣೆ ನಡೆಯುವುದು ಖಚಿತವಾಗಿದೆ.

ಅಸ್ತಿತ್ವಕ್ಕಾಗಿ ಆಪ್ ಹೋರಾಟ: ದಿಲ್ಲಿಯಲ್ಲಿ ಅನಿರೀಕ್ಷಿತವಾಗಿ ಅಧಿಕಾರಕ್ಕೆ ಬಂದು, ಅಧಿಕಾರವನ್ನೂ ಹಿಡಿದಿದ್ದ ಆಮ್ ಆದ್ಮಿ ಪಕ್ಷ ನಂತರ ರಾಜಕೀಯ ತಂತ್ರಗಾರಿಕೆ ಹಾಗೂ ನಾಯಕತ್ವ ಕೊರತೆಯಿಂದ ಸವಾಲುಗಳನ್ನು ಎದುರಿಸುವಲ್ಲಿ ವಿಫಲವಾಯಿತು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅಧಿಕಾರಕ್ಕಾಗಿ ಕಚ್ಚಾಟ ಆರಂಭವಾಗಿದ್ದಲ್ಲದೆ, ಸರ್ಕಾರವೇ ಪ್ರತಿಭಟನೆಗಿಳಿದಿದ್ದು ಅಪಹಾಸ್ಯಕ್ಕೀಡಾಯಿತು. ಸರ್ಕಾರ ಹಾಗೂ ಪೊಲೀಸರ ಮಧ್ಯೆ ಸಂಘರ್ಷ ಉಂಟಾಗಿ ಜನರು ಗೊಂದಲಕ್ಕೀಡಾದರು. ಅಪಾರ ನಿರೀಕ್ಷೆ ಹುಟ್ಟಿಸಿದ್ದ ಸರ್ಕಾರ ಕೇವಲ 49 ದಿನಗಳಲ್ಲಿ ಅಧಿಕಾರದಿಂದ ಕೆಳಕ್ಕಿಳಿಯಿತು. ಮುಂದೆ ಲೋಕಸಭೆ ಚುನಾವಣೆ ಆಸೆಯೂ ಕೈಗೂಡಲಿಲ್ಲ.

05-kejriwal-song

ನರೇಂದ್ರ ಮೋದಿ ಎದುರು ಹೀನಾಯ ಸೋಲನುಭವಿಸಿದ ನಂತರ ದೆಹಲಿಯಲ್ಲಿ ಮತ್ತೆ ಸರ್ಕಾರ ರಚಿಸಲು ನಡೆಸಿದ ಯತ್ನ ಕೊನೆಗೂಡಲಿಲ್ಲ. ಜತೆಗೆ ಆಪ್ ನ ಅನೇಕ ನಾಯಕರು ಪಕ್ಷ ಬಿಟ್ಟು ಹೊರನಡೆದರು. ಇದರಿಂದ ಆಪ್ ವರ್ಚಸ್ಸು ದಿನೇ ದಿನೇ ಕಡಿಮೆಯಾಗತೊಡಗಿತು. ಅರವಿಂದ ಕೇಜ್ರಿವಾಲ್ ನಿರಂಕುಶ ಪ್ರವೃತ್ತಿ ಅನುಸರಿಸುತ್ತಿದ್ದಾರೆ ಹಾಗೂ ಪಕ್ಷದೊಳಗೆ ಪ್ರಜಾಪ್ರಭುತ್ವ ಇಲ್ಲ ಎಂದು ಕಾರ್ಯಕರ್ತರು ತಿರುಗಿಬಿದ್ದರು. ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ದೆಹಲಿಯಲ್ಲಿ ಆಪ್ ಒಂದೂ ಸ್ಥಾನ ಗೆಲ್ಲಲಾಗಲಿಲ್ಲ. ಒಂದು ವರ್ಷದ ಹಿಂದೆ ಆಪ್ ಕಾರ್ಯಕರ್ತರಲ್ಲಿದ್ದ ಉತ್ಸಾಹ ಹಾಗೂ ಭರವಸೆ ಇಂದು ಕಂಡುಬರುತ್ತಿಲ್ಲ. ಆದ್ದರಿಂದ ಮತ್ತೆ ಜನರಲ್ಲಿಗೆ ಮತ ಕೇಳಲು ಹೋದರೆ ಜನರ ಪ್ರಶ್ನೆಗಳಿಗೆ ಏನು ಉತ್ತರ ನೀಡಬಲ್ಲರು ಎಂಬುದು ಪ್ರಶ್ನೆಯಾಗಿದೆ.

ಕಾಂಗ್ರೆಸ್ ಪಾತ್ರವೇನು?: ಕಳೆದ ಚುನಾವಣೆಯಲ್ಲಿ ತೃತೀಯ ಸ್ಥಾನಕ್ಕೆ ದೂಡಲ್ಪಟ್ಟು ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್, ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿತ್ತು. ಆದರೆ, ಈ ಬಾರಿ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವುದು, ನರೇಂದ್ರ ಮೋದಿ ಅಲೆ ಹೆಚ್ಚುತ್ತಿರುವುದು ಹಾಗೂ ವಿವಿಧ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದು ಕಾಂಗ್ರೆಸ್ ನ ಜಂಘಾಬಲವನ್ನು ಉಡುಗಿಸಿದೆ. ದೆಹಲಿಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳಿಗಿಂತ ಭಿನ್ನವಾಗಿಲ್ಲ. ಸ್ಥಳೀಯ ಮುಖಂಡರು ವಿಶ್ವಾಸ ಕಳೆದುಕೊಂಡಿದ್ದಾರೆ ಹಾಗೂ ರಾಷ್ಟ್ರೀಯ ಮುಖಂಡರು ನೆಪ ಮಾತ್ರಕ್ಕೆ ಭೇಟಿ ನೀಡಿ ಜಾರಿಕೊಳ್ಳುತ್ತಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಹ ರಾಜ್ಯ ರಾಜಕೀಯದಿಂದ ದೂರವುಳಿಯುವ ಮಾತನಾಡುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.

ಬಿಜೆಪಿ ನಾಯಕ ಯಾರು?: ನಿರಂತರ ಗೆಲುವಿನಿಂದ ಬೀಗುತ್ತಿರುವ ಬಿಜೆಪಿಗೆ ದೆಹಲಿ ಸುಲಭದ ತುತ್ತೇನೂ ಆಗುವುದಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹ ಹಾಗೂ ಜನಪ್ರಿಯ ವ್ಯಕ್ತಿಯನ್ನು ಗುರುತಿಸುವಲ್ಲಿ ವಿಫಲವಾಗಿರುವುದು ಪಕ್ಷದಲ್ಲಿರುವ ಗೊಂದಲಕ್ಕೆ ಸಾಕ್ಷಿಯಾಗಿದೆ. ಪಲ್ಸ್ ಪೋಲಿಯೋ ಖ್ಯಾತಿಯ ಡಾ. ಹರ್ಷವರ್ಧನ ಕೇಂದ್ರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಂತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆಯೇ ಚುನಾವಣೆಗೆ ಇಳಿಯುವ ಸಂಭವನೀಯತೆ ಹೆಚ್ಚಾಗಿದೆ.

ಫೆಬ್ರವರಿಯಲ್ಲಿ ದೆಹಲಿ ಚುನಾವಣೆ ನಡೆಯುವ ನಿರೀಕ್ಷೆ ಇದ್ದು, ಹಿಂದೆಯೇ ಜಮ್ಮು ಕಾಶ್ಮೀರ ಹಾಗೂ ಜಾರ್ಖಂಡ್ ಚುನಾವಣೆ ಬರಲಿರುವ ಕಾರಣ ಬಿಜೆಪಿಗೆ ಚುನಾವಣೆ ತಯಾರಿ ತರಾತುರಿಯಲ್ಲಿ ಆಗಬೇಕಾಗಿದೆ. ನರೇಂದ್ರ ಮೋದಿ ಅಲೆಯನ್ನೇ ನೆಚ್ಚಿಕೊಂಡಿರುವ ಬಿಜೆಪಿಗೆ ಸೋಲುಣಿಸುವಲ್ಲಿ ಕಾಂಗ್ರೆಸ್ ಹಾಗೂ ಆಪ್ ಸಫಲವಾಗಲಿವೆಯೇ ಎಂಬುದು ಕುತೂಹಲಕಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+