ಸ್ವಾತಂತ್ರ ದಿನಾಚರಣೆ, ವಿಡಿಯೋ ಮೂಲಕ ಉಗ್ರ ಝಾಕೀರ್ ಬೆದರಿಕೆ
ಶ್ರೀನಗರ, ಆ.09 : 'ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮಕ್ಕೆ ಹೆಣ್ಣು ಮಕ್ಕಳನ್ನು ಬಲವಂತವಾಗಿ ಕಳುಹಿಸಬಾರದು' ಎಂದು ಉಗ್ರ ಝಾಕೀರ್ ಮುಸಾ ಕಾಶ್ಮೀರ ಕಣಿವೆಯ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾನೆ.
ಕುಖ್ಯಾತ ಭಯೋತ್ಪಾದಕ ಝಾಕೀರ್ ಮುಸಾ ಹಿಬ್ ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯಲ್ಲಿದ್ದ. ಆದರೆ, ಕೆಲವು ಭಿನ್ನಾಭಿಪ್ರಾಯಗಳಿಂದ ಸಂಘಟನೆಯಿಂದ ಹೊರಬಂದಿದ್ದು, ಹೊಸ ಸಂಘಟನೆ ಸ್ಥಾಪನೆ ಮಾಡುವ ಸಿದ್ಧತೆಯಲ್ಲಿದ್ದಾನೆ. ಸದ್ಯ, ಅಲ್ ಖೈದಾಗೆ ಬೆಂಬಲ ನೀಡುತ್ತಿದ್ದಾನೆ.

ಸ್ವಾತಂತ್ರ ದಿನಾಚರಣೆ ಹತ್ತಿರವಾಗುತ್ತಿರುವಾಗ ಹೇಳಿಕೆ ನೀಡಿರುವ ಝಾಕೀರ್, ಶ್ರೀನಗರದ ಭಕ್ಷಿ ಕ್ರೀಡಾಂಗಣದಲ್ಲಿ ನಡೆಯುವ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮಕ್ಕೆ ಹೆಣ್ಣು ಮಕ್ಕಳನ್ನು ಕೆಲವು ಸಂಸ್ಥೆಗಳ ಪ್ರಾಶುಂಪಾಲರು ಬಲವಂತವಾಗಿ ಕಳುಹಿಸುತ್ತಿದ್ದಾರೆ ಎಂದು ಹೇಳಿದ್ದಾನೆ.
ಸುಮಾರು ನಾಲ್ಕು ನಿಮಿಷಗಳ ವಿಡಿಯೋ ಕ್ಲಿಪ್ ನಲ್ಲಿ ಝಾಕೀರ್ ಈ ಕುರಿತು ಮಾತನಾಡಿದ್ದಾನೆ. ಕೆಲವು ಪ್ರಾಂಶುಪಾಲರು ಹೆಣ್ಣು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿದ್ದರೆ ಶಾಲೆಯಿಂದ ತೆಗೆದು ಹಾಕುವುದಾಗಿ ಬೆದರಿಸುತ್ತಿದ್ದಾರೆ ಎಂದು ತಿಳಿಸಿದ್ದಾನೆ.
'ನಮ್ಮ ಸಹೋದರಿಯರು ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಬಲವಂತ ಮಾಡುವುದನ್ನು ಬಿಟ್ಟು, ಪ್ರಾಂಶುಪಾಲರು ತಮ್ಮ ಮಗಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲಿ' ಎಂದು ವಿಡಿಯೋದಲ್ಲಿ ಕಿಡಿ ಕಾರಿದ್ದಾನೆ.
'ಅಬು ದುಜನಾ ಹುತಾತ್ಮನಾದ ಬಳಿಕ ಭಾರತೀಯ ಮಾಧ್ಯಮಗಳು ಆತ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಎಂದು ಸುದ್ದಿ ಪ್ರಸಾರ ಮಾಡುತ್ತಿವೆ. ಇಂತಹ ಆರೋಪಗಳು ಸತ್ಯಕ್ಕೆ ದೂರವಾದವು. ದುಜನಾ ಇಲ್ಲಿನ ಜನರಿಗಾಗಿ ಹೋರಾಟಕ್ಕೆ ಇಳಿದಿದ್ದ' ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
'ಭಾರತೀಯ ಯೋಧರು ಕಣಿವೆಯಲ್ಲಿ ಉಗ್ರರ ಜೊತೆ ಹೋರಾಡಲು ಹಿಂಜರಿಯುತ್ತಿದ್ದಾರೆ. ಭಾರತೀಯ ಸೇನೆ ತನ್ನ ಬಳಿ ಧೈರ್ಯವಂತ ಸೈನಿಕರಿದ್ದಾರೆ ಎಂದು ಹೇಳುತ್ತಿದೆ. ಆದರೆ, ಉಗ್ರರು ಸಿಂಹಗಳಂತೆ ಹೋರಾಟ ಮಾಡುತ್ತಾರೆ' ಎಂದು ಝಾಕೀರ್ ಸೇನೆಯನ್ನು ಅವಹೇಳನ ಮಾಡಿದ್ದಾನೆ.












Click it and Unblock the Notifications