ಕೇರಳದಲ್ಲಿ ಮದ್ಯಪಾನ ನಿಷೇಧಕ್ಕೆ 'ಸುಪ್ರೀಂ' ಬ್ರೇಕ್
ತಿರುವನಂತಪುರಂ, ಸೆ.10: ಕೇರಳದಲ್ಲಿ ಮದ್ಯಪಾನ ನಿಷೇಧಕ್ಕೆ ಮುಂದಾಗಿರುವ ಉಮ್ಮನ್ ಚಾಂಡಿ ಸರ್ಕಾರಕ್ಕೆ ಹಿಂದೇಟು ಉಂಟಾಗಿದೆ. ಸದ್ಯಕ್ಕೆ ಯಾವುದೇ ಬಾರ್ ಲೈಸನ್ಸ್ ರದ್ದು ಮಾಡಬೇಡಿ ಎಂದು ಚಾಂಡಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ.
ಪಂಚತಾರಾ ಹೊಟೇಲ್ ಹೊರತುಪಡಿಸಿ ಎಲ್ಲೆಡೆ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಚಾಂಡಿ ಸರ್ಕಾರ ಮುಂದಾಗಿತ್ತು. ಈ ಕ್ರಮದಿಂದ ರಾಜ್ಯದ ಬಹುತೇಕ ಕಡೆ ಸಾಮಾನ್ಯ ಜನತೆ ಹರ್ಷ ವ್ಯಕ್ತಪಡಿಸಿದ್ದರು. ಅದರೆ, ಸುಮಾರು 700ಕ್ಕೂ ಅಧಿಕ ಮದ್ಯ ಮಳಿಗೆ ಮಾಲೀಕರು ಸರ್ಕಾರದ ನಿಲುವನ್ನು ಖಂಡಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಕೇರಳ ರಾಜ್ಯವೇ ದೇಶದ ಅತಿ ಹೆಚ್ಚು ಜನ ಕುಡಿತದ ಚಟಕ್ಕೆ ಬಲಿಯಾಗುವವರನ್ನು ಹೊಂದಿದೆ ಎಂಬ ಅಪಕೀರ್ತಿಯಿಂದ ತಪ್ಪಿಸಿಕೊಳ್ಳಲು ಯುಡಿಎಫ್ ಸರ್ಕಾರ ಮದ್ಯ ನಿಷೇಧಕ್ಕೆ ಮುಂದಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜನತೆ, 'ತಿಂಗಳಿಗೆ 30,000 ಸಂಬಳ ಪಡೆಯುವ ನನ್ನ ಗಂಡ ಕುಡಿತಕ್ಕೆ ದಾಸನಾಗಿ ಕೊನೆಗೆ ಉದ್ಯೋಗವನ್ನು ತ್ಯಜಿಸಿ ಬೀದಿಗೆ ಬಿದ್ದಂತಹ ಕುಟುಂಬದ ಘಟನೆಗಳು ರಾಜ್ಯದಲ್ಲಿ ನಾನಾ ಕಡೆ ನಡೆದಿವೆ ಹೀಗಾಗಿ ಇದು ಸ್ವಾಗತಾರ್ಹ ಬೆಳವಣಿಗೆ ಎಂದಿದ್ದರು.

ಸರ್ಕಾರ ಈಗಾಗಲೇ ಚಿಲ್ಲರೆ ಮದ್ಯ ಮಾರಾಟವನ್ನು ನಿಷೇಧಿಸಿರುವುದರಿಂದ ಅಪರಾಧ ಕೃತ್ಯಗಳು ಕೂಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮದ್ಯ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸೆ.12ರಿಂದ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮಾತ್ರ ಮದ್ಯ ಪೂರೈಕೆ ಮಾಡಲು ಅನುಮತಿ ಇದೆ. ಸರ್ಕಾರಿ ಸ್ವಾಮ್ಯದ 383 ರೀಟೈಲ್ ಮದ್ಯದ ಅಂಗಡಿ ಸೇರಿದಂತೆ 700ಕ್ಕೂ ಅಧಿಕ ಮದ್ಯ ಮಳಿಗೆಗಳನ್ನು ಬಂದ್ ಮಾಡಲು ಸರ್ಕಾರ ಮುಂದಾಗಿದೆ. ಅಕ್ಟೋಬರ್ 2 ರಿಂದ ಭಾನುವಾರದಂದು ಕೇರಳದಲ್ಲಿ ಎಲ್ಲೂ ಕೂಡಾ ಮದ್ಯ ಸರಬರಾಜು ಆಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಕೇರಳ ಸರ್ಕಾರ ಮುಂದಾಗಿದೆ.
ಕೇರಳ ಸರ್ಕಾರದ ನಿರ್ಧಾರದ ಬಗ್ಗೆ ತಿಳಿದುಕೊಂಡ ಪ್ರವಾಸಿಗರು ಕೇರಳಕ್ಕೆ ಹೋಗದಿರಲು ನಿರ್ಧರಿಸಿದ್ದಾರಂತೆ. ಹಾಲಿಡೇಐಕ್ಯೂ.ಕಾಮ್ ನಡೆಸಿದ ಸಮೀಕ್ಷೆ ಪ್ರಕಾರ ಶೇ 58ಕ್ಕೂ ಅಧಿಕ ದೇಶಿ ಹಾಗೂ ವಿದೇಶಿ ಪ್ರವಾಸಿಗರು ಕೇರಳ ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದು, ಕೇರಳ ಬಿಟ್ಟು ಬೇರೆ ರಾಜ್ಯಕ್ಕೆ ತೆರಳುವುದಾಗಿ ಹೇಳಿದ್ದಾರೆ. ಮದ್ಯ ಮಾರಾಟದಿಂದ ಕೇರಳ ರಾಜ್ಯ ಸುಮಾರು 1 ಬಿಲಿಯನ್ ಡಾಲರ್ ನಷ್ಟು ಆದಾಯ ಬರುತ್ತಿದೆ. ಈಗ ಸುಪ್ರೀಂಕೋರ್ಟ್ ನೀಡಿರುವ ಆದೇಶ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಆದರೆ, ಪ್ರಕರಣದ ವಿಚಾರಣೆ ಇನ್ನೂ ಬಾಕಿಯಿದೆ.












Click it and Unblock the Notifications