ಒಲ್ಲದ ಗರ್ಭ ತೆಗೆಸಿದ ಅತ್ಯಾಚಾರ ಸಂತ್ರಸ್ತೆಗೆ ನವಜೀವ!
ಅಹ್ಮದಾಬಾದ್, ಆಗಸ್ಟ್ 01 : ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಹದಿನಾಲ್ಕು ವರ್ಷದ ಬಾಲಕಿಗೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಅಹ್ಮದಾಬಾದಿನಲ್ಲಿ ಶುಕ್ರವಾರ ರಾತ್ರಿ ಯಶಸ್ವಿಯಾಗಿ ಗರ್ಭಪಾತ ಮಾಡಿಸಲಾಗಿದೆ. ಒಲ್ಲದ ಗರ್ಭ ತೆಗೆಸಿದ್ದರಿಂದ ಬಾಲಕಿಗೆ ಹೊಸಜೀವ ಸಿಕ್ಕಂತಾಗಿದೆ.
25 ವಾರಗಳ ಗರ್ಭವತಿಯಾಗಿದ್ದ ಬಾಲಕಿ ತನಗೆ ಈ ಮಗು ಬೇಡವೆಂದು ಕೋರ್ಟ್ ಮೆಟ್ಟಿಲೇರಿದ್ದಳು. ಆದರೆ, ಗುಜರಾತಿನ ಕೆಳ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ಗರ್ಭಪಾತ ಮಾಡಿಸಲು ಅನುಮತಿ ನೀಡುವುದಿಲ್ಲ ಎಂದು ತೀರ್ಪಿದ್ದವು. ಸುಪ್ರೀಂ ಕೋರ್ಟ್ ಈ ಎರಡೂ ತೀರ್ಪನ್ನು ಹೊಡೆದುಹಾಕಿ ಗರ್ಭಪಾತಕ್ಕೆ ಅವಕಾಶ ಮಾಡಿಕೊಟ್ಟಿತು.
"ಐವರು ನುರಿತ ವೈದ್ಯರ ತಂಡ ಅತ್ಯಂತ ಯಶಸ್ವಿಯಾಗಿ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯ 25 ವಾರಗಳ ಬಸಿರನ್ನು ಶುಕ್ರವಾರ ರಾತ್ರಿ ಕೊನೆಗಾಣಿಸಲಾಗಿದೆ. ಬಾಲಕಿ ಆರೋಗ್ಯವಾಗಿದ್ದಾಳೆ" ಎಂದು ಸಿವಿಲ್ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಎಂಎಂ ಪ್ರಭಾಕರ್ ಅವರು ಹೇಳಿಕೆ ನೀಡಿದ್ದಾರೆ. [ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಕಾಪಾಡಿದ ಇನ್ ಸ್ಪೆಕ್ಟರ್ ಗೆ ಸಲಾಂ]
ದಿ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರಿಗ್ನನ್ಸಿ ಆಕ್ಟ್ 1971ರ ಪ್ರಕಾರ, 20 ವಾರಗಳು ಮೀರಿದ ಗರ್ಭವನ್ನು ಕೊನೆಗಾಣಿಸಲು ಅವಕಾಶವಿಲ್ಲ. ಆದರೆ, 25 ವಾರಗಳ ಬಸಿರನ್ನು ಕೊನೆಗಾಣಿಸಲು ಅವಕಾಶ ನೀಡಿ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಇದು, ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರ ಒಲ್ಲದ ಗರ್ಭವನ್ನು ತೆಗೆಸಲು ಈ ತೀರ್ಪು ವರದಾನವಾಗಲಿದೆ.
ವಿಷಾದನೀಯ ಸಂಗತಿಯೆಂದರೆ, ಜತಿನ್ ಮೆಹ್ತಾ ಎಂಬ ವೈದ್ಯನೊಬ್ಬ ಹತ್ತನೇ ಕ್ಲಾಸು ಓದುತ್ತಿರುವ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ಥೈರಾಯಿಡ್ (ಗಳಗಂಡ) ತೊಂದರೆಯಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆಗೆಂದು ಮೆಹ್ತಾ ಬಳಿ ಹೋಗಿದ್ದಾಗ, ವೈದ್ಯನೇ ಆಕೆಯ ಮೇಲೆ ಅತ್ಯಾಚಾರವೆಸಗಿ ಗರ್ಭವತಿಯನ್ನಾಗಿ ಮಾಡಿದ್ದ. [ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?]
"ನಾನು ನಿನ್ನ ಸ್ಥಾನದಲ್ಲಿದ್ದರೆ ನಾನು ನಿನ್ನ ಹಾಗೆಯೇ ಚಿಂತಿಸುತ್ತಿದ್ದೆ. ಆದರೆ, ಕಾನೂನಿನಲ್ಲಿ ಅವಕಾಶ ಇಲ್ಲವಲ್ಲಮ್ಮ" ಎಂದು ಯಾಕೂಬ್ ಮೆಮನ್ ಗಲ್ಲು ಶಿಕ್ಷೆಗೆ ತಡೆಕೋರಲು ನಿರಾಕರಿಸಿದ್ದ ನ್ಯಾಯಮೂರ್ತಿ ಎಆರ್ ದಾವೆ ಅವರು ಬಾಲಕಿಗೆ ಹೇಳಿದ್ದರು. ಆದರೆ ಕೊನೆಗೆ, ಬಾಲಕಿ ಜೀವಕ್ಕೆ ಅಪಾಯವಿಲ್ಲದಿದ್ದರೆ ಮುಂದಿನ ನಿರ್ಧಾರ ತೆಗೆದುಕೊಳ್ಳಲು ವೈದ್ಯರಿಗೇ ಬಿಡುವುದಾಗಿ ತೀರ್ಪು ನೀಡಿದ್ದರು.