Chhattisgarh Election: ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ? ಇಲ್ಲಿದೆ ಗ್ರೌಂಡ್ ರಿಪೋರ್ಟ್!
ಪಂಚ ರಾಜ್ಯ ಚುನಾವಣೆ ಕಾವು ಏರುತ್ತಿದ್ದು ಲೋಕಸಭೆ ಚುನಾವಣೆಗೂ ಮೊದಲು ಎಲ್ಲಾ ಪಕ್ಷಗಳು ಇಲ್ಲಿ ತಮ್ಮ ಬಲ ಪ್ರದರ್ಶನಕ್ಕೆ ಸಜ್ಜಾಗಿವೆ. ಒಂದ್ಕಡೆ ಇದು ಬಿಜೆಪಿ ನಾಯಕರಿಗೆ ಅಗ್ನಿಪರೀಕ್ಷೆ ಎಂಬ ಸ್ಥಿತಿ ಇದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಪಂಚ ರಾಜ್ಯಗಳ ಚುನಾವಣೆ ಅಳಿವು & ಉಳಿವಿನ ಪ್ರಶ್ನೆಯಾಗಿದೆ. ಇಷ್ಟೆಲ್ಲಾ ಅನಿವಾರ್ಯತೆಯ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಹೊರತುಪಡಿಸಿ ಬೇರೆ ಪಕ್ಷಗಳು ಕೂಡ ಭರ್ಜರಿ ಫೈಟ್ ಶುರು ಮಾಡಿವೆ.
ಈಗ ಚುನಾವಣೆ ನಡೆಯುತ್ತಿರುವುದು ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ಗಢ ಮತ್ತು ಮಿಜೋರಾಂ ರಾಜ್ಯಗಳಿಗೆ. ಈ ಪೈಕಿ ಉಳಿದ 4 ರಾಜ್ಯಗಳ ಚುನಾವಣೆ ಅಷ್ಟೊಂದು ಗಮನ ಸೆಳೆಯುತ್ತಿಲ್ಲ ಎನ್ನಬಹುದು. ಆದ್ರೆ ಛತ್ತೀಸ್ಗಢ ಮಾತ್ರ ಇಡೀ ದೇಶದ ಗಮನವನ್ನ ಸೆಳೆಯುತ್ತಿದೆ. ಇದಕ್ಕೆಲ್ಲಾ ಕಾರಣ ಛತ್ತೀಸ್ಗಢ ರಾಜ್ಯದಲ್ಲಿ ಈಗಿರುವ ಪರಿಸ್ಥಿತಿ. ಪದೇ ಪದೆ ನಕ್ಸಲ್ ದಾಳಿಗೆ ತುತ್ತಾಗಿ ಸುದ್ದಿಯಲ್ಲಿ ಇರುವ ರಾಜ್ಯದಲ್ಲಿ ಬಿಜೆಪಿ ಈಗ ಭರ್ಜರಿ ಗೆಲುವನ್ನ ದಾಖಲಿಸಲು ಎಲ್ಲಾ ರೀತಿಯ ತಂತ್ರ ರೂಪಿಸುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಛತ್ತೀಸ್ಗಢದ ಅಖಾಡದಲ್ಲಿ ಅಧಿಕಾರ ಉಳಿಸಿಕೊಳ್ಳಲು ರಣತಂತ್ರ ರೂಪಿಸುತ್ತಿದೆ.

ಯಾರಿಗೆ ಗೆಲುವು? ಯಾರಿಗೆ ಸೋಲು?
ಅಷ್ಟಕ್ಕೂ ಇತ್ತೀಚೆಗೆ ಬಂದಿರುವ ಬಹುತೆಕ ಸಮೀಕ್ಷೆಗಳು ಛತ್ತೀಸ್ಗಢ ರಾಜ್ಯದಲ್ಲಿ ಕಾಂಗ್ರೆಸ್ ಮುಂದೆ ಇದೆ ಎನ್ನುತ್ತಿವೆ. ಹಾಗೇ ಛತ್ತೀಸ್ಗಢ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿದು, ಬಹುಮತದ ಸರ್ಕಾರ ರಚಿಸುವುದು ಗ್ಯಾರಂಟಿ ಎನ್ನುತ್ತಿವೆ ಸಮೀಕ್ಷೆಗಳು. ಆದರೆ ಈ ಎಲ್ಲಾ ನಿರೀಕ್ಷೆಗಳಿಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ದೊಡ್ಡ ಪೆಟ್ಟು ಕೊಟ್ಟು ಅಖಾಡಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಗೇ ಬಿಜೆಪಿ ಗೆಲುವಿಗೆ ಹೊಸ ಉತ್ಸಾಹ ನೀಡಿ, ಚುನಾವಣೆಯ ನಿರೀಕ್ಷೆಯನ್ನೇ ಬದಲಾಗುವಂತೆ ಮಾಡುತ್ತಿದೆ.
ಗೆಲ್ಲುತ್ತಾ ಕಮಲ ಪಾಳಯ?
ಛತ್ತೀಸ್ಗಢ ಜನರಿಗೆ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ್ರೆ 500 ರೂ.ಗೆ ಸಿಲಿಂಡರ್ ಕೊಡುವ ಭರವಸೆ ಸೇರಿದಂತೆ ಹಲವು ವಾಗ್ದಾನ ನೀಡಲಾಗಿದೆ. ನಿನ್ನೆ ಬಿಜೆಪಿ ವರಿಷ್ಠರಾದ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು, ಛತ್ತೀಸ್ಗಢ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಇದೇ ಪ್ರಣಾಳಿಕೆ ಹಲವು ಭರವಸೆ ನೀಡಿ, ಚುನಾವಣೆಯಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಇದೀಗ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಪ್ರತಿ ವಿವಾಹಿತ ಮಹಿಳೆಗೆ ವಾರ್ಷಿಕ 12 ಸಾವಿರ ನೀಡುವುದಾಗಿ ಬಿಜೆಪಿ ಘೋಷಿಸಿದೆ.

ಛತ್ತೀಸ್ಗಢ ರೈತರಿಗೂ ಬಂಪರ್?
ಇದರ ಜೊತೆಗೆ ಪ್ರತಿ ಎಕರೆಗೆ 21 ಕ್ವಿಂಟಾಲ್ ಭತ್ತ ಖರೀದಿ ಮಾಡುವುದರೊಂದಿಗೆ, ಕ್ವಿಂಟಲ್ಗೆ 3,100 ರೂಪಾಯಿ ಬೆಂಬಲ ಬೆಲೆಯ ನೀಡುವ ಭರವಸೆ ನೀಡಲಾಗಿದೆ. ಜೊತೆಗೆ 2 ವರ್ಷದಲ್ಲಿ 1 ಲಕ್ಷ ಖಾಲಿ ಹುದ್ದೆ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗುವುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿ 18 ಲಕ್ಷ ಮನೆ ನಿರ್ಮಿಸಲಾಗುವುದು ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಈ ಕಾರಣಕ್ಕೆ, ಛತ್ತೀಸ್ಗಢದ ಚುನಾವಣೆಯಲ್ಲಿ ಸಮೀಕ್ಷೆಗಳ ಲೆಕ್ಕಾಚಾರ ಹುಸಿ ಮಾಡಲು ಬಿಜೆಪಿ ಸಜ್ಜಾಗಿದೆ.
ಕಾಂಗ್ರೆಸ್ ಪಕ್ಷದ ಬಲ ಹೇಗಿದೆ?
ಛತ್ತೀಸ್ಗಢ ರಾಜ್ಯದಲ್ಲಿ ಬಿಜೆಪಿಗೆ ಸುಲಭದ ಗೆಲುವು ಸಿಗುವ ಸಾಧ್ಯತೆ ಕಡಿಮೆ ಇದೆ. ಯಾಕೆ ಅಂದ್ರೆ ಇಲ್ಲಿ ಕಾಂಗ್ರೆಸ್ ಬಲವಾಗಿದೆ. ಅಲ್ಲದೆ ಮತ್ತೊಮ್ಮೆ ಛತ್ತೀಸ್ಗಢ ಜನ ಕಾಂಗ್ರೆಸ್ ಪರ ಮತಹಾಕುವ ನಿರೀಕ್ಷೆ ಕೂಡ ಇದೆ. ಇಷ್ಟೆಲ್ಲಾ ಇದ್ದಾಗ, ಬಿಜೆಪಿ ಪ್ರಣಾಳಿಕೆಯ ಲೆಕ್ಕಾಚಾರ ಹೇಳುವಂತೆ ಹೊಸ ಅವಕಾಶ ಸೃಷ್ಟಿಯಾಗಿದೆ. ಆದರೆ ಇದನ್ನು ಬಿಜೆಪಿ ನಾಯಕರು ಯಾವ ರೀತಿ ಛತ್ತೀಸ್ಗಢ ಜನಕ್ಕೆ ತಲುಪಿಸುತ್ತಾರೆ? ಮತದಾರರ ಮನಸ್ಸು ಹೇಗೆ ಒಲಿಸಿಕೊಳ್ಳುತ್ತಾರೆ? ಎಂಬುದನ್ನ ಕಾದು ನೋಡಬೇಕಿದೆ. ಇಷ್ಟೆಲ್ಲದರ ಮಧ್ಯೆ ಛತ್ತೀಸ್ಗಢ ಚುನಾವಣಾ ಅಖಾಡ ಈಗ ರಂಗು ರಂಗಾಗಿದೆ!












Click it and Unblock the Notifications