ಪಡಿತರ ಸಬ್ಸಿಡಿಯೂ ನೇರವಾಗಿ ಬ್ಯಾಂಕ್ ಖಾತೆಗೆ
ನವದೆಹಲಿ, ಮಾ. 7: ಅಡುಗೆ ಅನಿಲಕ್ಕೆ ನೀಡುತ್ತಿರುವ ಸಬ್ಸಿಡಿ ಮಾದರಿಯಲ್ಲಿ ಪಡಿತರ ಧಾನ್ಯಗಳ ಮೇಲಿನ ಸಬ್ಸಿಡಿ ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಯೋಜನೆಯನ್ನು ಪ್ರಾಯೋಗಿಕವಾಗಿ ಚಂಡೀಗಢ ಮತ್ತು ಪುದುಚೇರಿಯಲ್ಲಿ ಜಾರಿಗೆ ತರಲಿದೆ.
ಪಡಿತರ ಧಾನ್ಯಗಳು ಮುಕ್ತ ಮಾರುಕಟ್ಟೆಗೆ ಇಲ್ಲವೇ ಕಾಳ ಸಂತೆಗೆ ಹೋಗುವುದನ್ನು ತಡೆಯಲು ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಸರ್ಕಾರ ಚಿಂತಿಸಿದೆ. ಗ್ಯಾಸ್ ಸಬ್ಸಿಡಿ ಯೋಜನೆ ಈಗಾಗಲೇ ಯಶಸ್ವಿಯಾಗಿದ್ದು ಆಹಾರ ಸಬ್ಸಿಡಿ ಅನರ್ಹರ ಪಾಲಾಗುವುದನ್ನು ತಡೆಯಲು ಇದೇ ಉತ್ತಮ ಕ್ರಮ ಎಂದು ಸರ್ಕಾರ ತಿಳಿಸಿದೆ.[ಬ್ಯಾಂಕ್ ಖಾತೆಗೆ ನೇರವಾಗಿ ಎಲ್ ಪಿಜಿ ಸಬ್ಸಿಡಿ ಪಾವತಿ]

ಯೋಜನೆ ಆದರ್ಶಪ್ರಾಯವಾಗಿದೆ. ಆದರೆ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸುವುದರಿಂದ ಅದನ್ನು ದುರುಪಯೋಗಪಡಿಕೊಳ್ಳುವ ಸಾಧ್ಯತೆ ಇರುವುದನ್ನು ಅಲ್ಲಗಳೆಯುವಂತಿಲ್ಲ ಎಂದು ಆಹಾರ ಸಚಿವ ರಾಮ್ವಿಲಾಸ್ ಪಾಸ್ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯೋಜನೆಯ ಲಾಭ ಮತ್ತು ನಷ್ಟ ಎರಡರ ಬಗೆಗೂ ಗಮನ ಹರಿಸಬೇಕು. ಸಬ್ಸಿಡಿ ಹಣ ನಗದು ರೂಪದಲ್ಲಿ ಸಿಕ್ಕಿದರೆ ಜನರು ಮಾರುಕಟ್ಟೆಯಿಂದಲೇ ಧಾನ್ಯಗಳನ್ನು ಖರೀದಿಸುವ ಸಾಧ್ಯತೆಯಿದೆ ಎಂದಿದ್ದಾರೆ.[ವಿದ್ಯುತ್ ಸಂಪರ್ಕ ಇದ್ದರೆ ಸೀಮೆಎಣ್ಣೆ ಕೊಡಲ್ಲ?]
ಮೊದಲು ಯೋಜನೆಯನ್ನು ಚಂಡೀಗಢ ಮತ್ತು ಪುದುಚೇರಿಯಲ್ಲಿ ಜಾರಿಗೆ ತಂದು ಯಶಸ್ಸಿನ ಆಧಾರದಲ್ಲಿ ಇತರೆಡೆಗೆ ವಿಸ್ತರಿಸಲಾಗುವುದು. ಈ ಬಗೆಯ ಯೋಜನೆ ಆರ್ಥಿಕ ಸೋರಿಕೆಯನ್ನು ತಡೆಯುತ್ತದೆ ಎಂದು ಶಾಂತಾ ಕುಮಾರ್ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.











Click it and Unblock the Notifications