Adani: ಬದಲಾಗುತ್ತಿರುವ ಮುಂಬೈ ಚಿತ್ರಣ, ಧಾರಾವಿಯ ಶಾಹು ನಗರ ನಿವಾಸಿಗಳ ಸ್ಥಳಾಂತರ ಪ್ರಕ್ರಿಯೆ ಆರಂಭ
Adani: ಭಾರತದ ಅತಿ ದೊಡ್ಡ ನಗರ ಪುನರ್ ಅಭಿವೃದ್ಧಿ ಯೋಜನೆಗಳಲ್ಲಿ ಒಂದಾದ ಮಹತ್ವಾಕಾಂಕ್ಷೆಯ ಧಾರಾವಿ ಪುನರ್ ಅಭಿವೃದ್ಧಿ ಯೋಜನೆ ಪ್ರಮುಖ ಮೈಲಿಗಲ್ಲು ತಲುಪಿದೆ. ಮುಂಬೈ ಮಹಾನಗರ ಪಾಲಿಕೆ ಅಧಿಕೃತವಾಗಿ ಶಾಹು ನಗರದ ನಿವಾಸಿಗಳನ್ನು ಪರ್ಯಾಯ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸುವ ಮೂಲಕ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಈ ಕ್ರಮವು ಧಾರಾವಿ ಪುನರ್ ಅಭಿವೃದ್ಧಿ ಯೋಜನೆ ಮತ್ತು ಸ್ಲಂ ಪುನರ್ವಸತಿ ಪ್ರಾಧಿಕಾರ ಇತ್ತೀಚೆಗೆ ಸೆಕ್ಟರ್ 6ರ ನಿವಾಸಿಗಳಿಗೆ ನೀಡಿದ ನೋಟಿಸ್ಗಳ ನಂತರ ಕೈಗೊಳ್ಳಲಾಗಿದೆ. ಧಾರಾವಿಯನ್ನು ಆಧುನಿಕ ಮತ್ತು ಸುಸಜ್ಜಿತ ನಗರ ಪ್ರದೇಶವಾಗಿ ಪರಿವರ್ತಿಸುವ ಗುರಿಯೊಂದಿಗೆ ಹಂತ ಹಂತವಾಗಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಈ ಪುನರ್ ಅಭಿವೃದ್ಧಿ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಅದಾನಿ ಗ್ರೂಪ್ ನಡುವಿನ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯನ್ನು ನವಭಾರತ ಮೆಗಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಎಸ್ಪಿವಿ ಸಂಸ್ಥೆ ಮೂಲಕ ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಅದಾನಿ ಗ್ರೂಪ್ ಶೇಕಡ 80ರಷ್ಟು ಪಾಲನ್ನು ಹೊಂದಿದ್ದರೆ, ಉಳಿದ ಶೇಕಡ 20ರಷ್ಟು ಪಾಲು ಮಹಾರಾಷ್ಟ್ರ ಸರ್ಕಾರದ ಅಧೀನದಲ್ಲಿದೆ.
ಅಭಿವೃದ್ಧಿ ಪಾಲುದಾರ ಸಂಸ್ಥೆಯಾಗಿ ಅದಾನಿ ಗ್ರೂಪ್ ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇದರಲ್ಲಿ 10 ಲಕ್ಷಕ್ಕೂ ಹೆಚ್ಚು ನಿವಾಸಿಗಳ ಪುನರ್ವಸತಿ, ಬೃಹತ್ ಪ್ರಮಾಣದ ವಸತಿ ನಿರ್ಮಾಣ, ಆಧುನಿಕ ನಾಗರಿಕ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಯೋಜನೆ ಪೂರ್ಣಗೊಂಡ ಬಳಿಕ 10 ವರ್ಷಗಳ ನಿರ್ವಹಣಾ ಸಹಾಯ ಸೇರಿದಂತೆ ಹಲವು ಪ್ರಮುಖ ಕಾರ್ಯಗಳು ಒಳಗೊಂಡಿವೆ. ಈ ಪುನರ್ ಅಭಿವೃದ್ಧಿ ಯೋಜನೆಯಡಿ ವಸತಿ ಮತ್ತು ವಾಣಿಜ್ಯ ಫ್ರೀ-ಸೇಲ್ ಘಟಕಗಳ (Free-sale components) ನಿರ್ಮಾಣಕ್ಕೂ ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಯೋಜನೆಗೆ ಅಗತ್ಯವಾದ ಆರ್ಥಿಕ ನೆರವು ಒದಗಿಸುವುದರ ಜೊತೆಗೆ ಧಾರಾವಿ ಪ್ರದೇಶದ ಆರ್ಥಿಕ ಸಾಮರ್ಥ್ಯವನ್ನು ಹೊರತರುವ ಗುರಿ ಹೊಂದಲಾಗಿದೆ.
ಅಧಿಕೃತ ಹೇಳಿಕೆಯ ಪ್ರಕಾರ, ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಿರುವ ಭೂಮಿಯನ್ನು ತೆರವುಗೊಳಿಸುವ ಉದ್ದೇಶದಿಂದ ಸ್ಥಳಾಂತರ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇದರ ಮೂಲಕ ಯೋಜನೆಯು ಕೇವಲ ಯೋಜನಾ ಹಂತದಲ್ಲಿರುವುದರಿಂದ ಸಕ್ರಿಯ ಅನುಷ್ಠಾನದ ಹಂತಕ್ಕೆ ಸಾಗಲಿದ್ದು, ಅರ್ಹ ನಿವಾಸಿಗಳಿಗೆ ಶಾಶ್ವತ ಮನೆಗಳನ್ನು ಒದಗಿಸುವ ಕಾರ್ಯ ವೇಗ ಪಡೆಯಲಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪುನರ್ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಕೆಲವೇ ದಿನಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. 2028ರೊಳಗೆ 10,000 ಹೊಸ ಮನೆಗಳನ್ನು ಲಭ್ಯವಾಗುವಂತೆ ಮಾಡುವ ಗುರಿ ಹೊಂದಲಾಗಿದೆ.
ಪ್ರಸ್ತುತ ಹಂತದ ಸ್ಥಳಾಂತರ ಪ್ರಕ್ರಿಯೆಯಲ್ಲಿ ಶಾಹು ನಗರದಲ್ಲಿ ವಾಸಿಸುತ್ತಿರುವ ಸುಮಾರು 900 ಬಿಎಂಸಿ ಬಾಡಿಗೆದಾರರು ಒಳಗೊಂಡಿದ್ದಾರೆ. ನಿರ್ಮಾಣ ಕಾಮಗಾರಿ ನಡೆಯುವ ಅವಧಿಯಲ್ಲಿ ನಿವಾಸಿಗಳಿಗೆ ತಾತ್ಕಾಲಿಕ ವಸತಿಗಾಗಿ ಅಧಿಕಾರಿಗಳು ಎರಡು ಆಯ್ಕೆಗಳನ್ನು ನೀಡಿದ್ದಾರೆ.
ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಆಯ್ಕೆ ಮಾಡುವ ನಿವಾಸಿಗಳನ್ನು ಧಾರಾವಿಯ ಸೆಕ್ಟರ್ 5ರಲ್ಲಿರುವ MHADA ವಸತಿ ಕಟ್ಟಡಗಳಿಗೆ ಸ್ಥಳಾಂತರಿಸಲಾಗುತ್ತದೆ. ಇಲ್ಲಿ ಈಗಾಗಲೇ ಸುಮಾರು 500 ವಸತಿ ಘಟಕಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಕುಟುಂಬಗಳು ಬಾಡಿಗೆ ವಸತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಸರ್ಕಾರದಿಂದ ಆರ್ಥಿಕ ಸಹಾಯವನ್ನೂ ಪಡೆಯಬಹುದು. ಅಧಿಕಾರಿಗಳ ಪ್ರಕಾರ, ಈ ತಾತ್ಕಾಲಿಕ ವಸತಿ ಮನೆಗಳು ಪ್ರಸ್ತುತ ಇರುವ ಮನೆಗಳಿಗಿಂತ ಹೆಚ್ಚು ವಿಶಾಲವಾಗಿದ್ದು, ಉತ್ತಮ ಸೌಲಭ್ಯಗಳು ಮತ್ತು ಸುಧಾರಿತ ಜೀವನಮಟ್ಟವನ್ನು ಒದಗಿಸುತ್ತವೆ. ಪುನರ್ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ನಿವಾಸಿಗಳು ಹೆಚ್ಚು ಆರಾಮದಾಯಕವಾಗಿ ವಾಸಿಸಲು ಈ ವ್ಯವಸ್ಥೆ ಮಾಡಲಾಗಿದೆ.
ಹಣಕಾಸು ನೆರವು ಪ್ಯಾಕೇಜ್ ಪ್ರಕಟ
ಸುಗಮ ಸ್ಥಳಾಂತರ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸಮಗ್ರ ಪುನರ್ವಸತಿ ಸಹಾಯ ಪ್ಯಾಕೇಜ್ ಅನ್ನು ಘೋಷಿಸಿದೆ. 275 ಚದರ ಅಡಿ ವಿಸ್ತೀರ್ಣದವರೆಗೆ ಇರುವ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ತಿಂಗಳಿಗೆ ₹22,000 ಬಾಡಿಗೆ ಭತ್ಯೆ ನೀಡಲಾಗುತ್ತದೆ. ಇನ್ನು 375 ಚದರ ಅಡಿ ಮನೆಗಳಲ್ಲಿ ವಾಸಿಸುವವರಿಗೆ ತಿಂಗಳಿಗೆ ₹30,000 ಬಾಡಿಗೆ ಸಹಾಯ ದೊರೆಯಲಿದೆ. ಈ ಬಾಡಿಗೆ ಸಹಾಯಧನವು ಪ್ರತಿ ವರ್ಷ ಶೇಕಡ 5ರಷ್ಟು ಹೆಚ್ಚಳವಾಗಲಿದೆ. ಇದಲ್ಲದೆ ನಿವಾಸಿಗಳು ಯಾವ ರೀತಿಯ ತಾತ್ಕಾಲಿಕ ವಸತಿ ಆಯ್ಕೆ ಮಾಡಿಕೊಂಡರೂ, ಸ್ಥಳಾಂತರ ವೆಚ್ಚಗಳನ್ನು ಭರಿಸಲು ಪ್ರತಿಯೊಂದು ಕುಟುಂಬಕ್ಕೂ ಒಮ್ಮೆ ಮಾತ್ರ ₹15,000 ಸ್ಥಳಾಂತರ ಅನುದಾನ ನೀಡಲಾಗುತ್ತದೆ.
ಶಾಶ್ವತ ಮನೆಗಳನ್ನ ಒದಗಿಸುವ ಭರವಸೆ
ಅಧಿಕಾರಿಗಳು ನಿವಾಸಿಗಳಿಗೆ ಶಾಶ್ವತ ಪುನರ್ವಸತಿ ಮನೆಗಳು ಉತ್ತಮ ಜೀವನಮಟ್ಟವನ್ನು ಒದಗಿಸಲಿವೆ ಎಂದು ಭರವಸೆ ನೀಡಿದ್ದಾರೆ. ಪುನರ್ ಅಭಿವೃದ್ಧಿ ನೀತಿಯ ಪ್ರಕಾರ, ಅರ್ಹ ಫಲಾನುಭವಿಗಳಿಗೆ ಕನಿಷ್ಠ 500 ಚದರ ಅಡಿ ಕಾರ್ಪೆಟ್ ವಿಸ್ತೀರ್ಣದ ಮನೆ ಅಥವಾ ಅವರ ಪ್ರಸ್ತುತ ವಾಸದ ಮನೆಯ ಗಾತ್ರದ 1.35 ಪಟ್ಟು ವಿಸ್ತೀರ್ಣದ ಮನೆ ಇವೆರಡರಲ್ಲಿ ಯಾವುದು ಹೆಚ್ಚು ವಿಸ್ತೀರ್ಣ ಹೊಂದಿದೆಯೋ ಅದನ್ನು ನೀಡಲಾಗುತ್ತದೆ.
ಅಧಿಕಾರಿಗಳ ಪ್ರಕಾರ, ಶಾಹು ನಗರ ನಿವಾಸಿಗಳಿಗೆ ಅದೇ ಪ್ರದೇಶದಲ್ಲಿಯೇ ಪುನರ್ವಸತಿ ಕಲ್ಪಿಸಲಾಗುತ್ತದೆ. ಅಲ್ಲದೆ, ಕಾಮಗಾರಿ ಪ್ರಾರಂಭ ಪ್ರಮಾಣಪತ್ರ (Commencement Certificate) ನೀಡಿದ ದಿನಾಂಕದಿಂದ ಐದು ವರ್ಷಗಳೊಳಗೆ ನಿವಾಸಿಗಳು ತಮ್ಮ ಶಾಶ್ವತ ಮನೆಗಳ ಸ್ವಾಧೀನವನ್ನು ಪಡೆಯುವ ನಿರೀಕ್ಷೆಯಿದೆ ಎಂದು ತಿಳಿಸಲಾಗಿದೆ.
ಸರ್ಕಾರದ ಅಧಿಕಾರಿಗಳು ನಿವಾಸಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಥಳಾಂತರ ಪ್ರಕ್ರಿಯೆಯನ್ನು ಸುಗಮಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಜೊತೆಗೆ ನಿರ್ಮಾಣ ಕಾಮಗಾರಿಗಳನ್ನು ಹಂತ-ಹಂತವಾಗಿ ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಧಾರಾವಿ ಪುನರ್ ಅಭಿವೃದ್ಧಿಯ ಪ್ರಮುಖ ಉದ್ದೇಶವೆಂದರೆ ವಸತಿ ನಿರ್ಮಾಣ ಕಾರ್ಯವನ್ನು ವೇಗಗೊಳಿಸುವುದು ಮತ್ತು ಧಾರಾವಿ ಪ್ರದೇಶವನ್ನು ಆಧುನಿಕ, ಸುಸ್ಥಿರ ಹಾಗೂ ಸುಸಜ್ಜಿತ ನಗರ ಪ್ರದೇಶವಾಗಿ ಪರಿವರ್ತಿಸುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಪುನರ್ ಅಭಿವೃದ್ಧಿ ಯೋಜನೆಯ ವೇಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಹು ನಗರ ನಿವಾಸಿಗಳ ಸ್ಥಳಾಂತರವನ್ನು ಮುಂಬೈನ ವಿಶಾಲ ನಗರ ಪುನರ್ ನವೀಕರಣ ದೃಷ್ಟಿಕೋನ ಮತ್ತು ಉತ್ತಮ ವಸತಿ ಮೂಲಸೌಕರ್ಯ ನಿರ್ಮಾಣದ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ.












Click it and Unblock the Notifications