ಬಿಹಾರ ರಾಜಕೀಯದಲ್ಲಿ ಬಿಕ್ಕಟ್ಟು, ಬೇರೆಯಾಗ್ತಾರಾ ಲಾಲು-ನಿತೀಶ್?
ಪಾಟ್ನಾ, ಜುಲೈ 10: "ಸೈದ್ಧಾಂತಿಕವಾಗಿ ವಿರುದ್ಧ ರಾಜಕಾರಣದ ಹಾದಿಯಲ್ಲಿ ಬೆಳೆದು ಬಂದ ಜೆಡಿಯುನ ನಿತೀಶ್ ಕುಮಾರ್ ಮತ್ತು ಆರ್'ಜೆಡಿಯ ಲಾಲು ಪ್ರಸಾದ್ ಯಾದವ್ ಇವತ್ತು ಒಂದಾಗಬಹುದು. ಆದರೆ ಲಾಲು ಜತೆಗೆ ನಿತೀಶ್ ಒಗ್ಗುವುದು ಕಷ್ಟ," - ಇಂಥಹದ್ದೊಂದು ಮಾತು 2015ರ ಬಿಹಾರ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್-ಜೆಡಿಯು-ಆರ್'ಜೆಡಿ ಸಮ್ಮಿಶ್ರ ಸರಕಾರ ರಚನೆಯಾದಾಗ ಕೇಳಿ ಬಂದಿತ್ತು.
ಅವತ್ತು ನಿರೀಕ್ಷಿಸಿದಂತೆಯೇ ಎರಡೂ ಪಕ್ಷಗಳ ನಡುವೆ ಇದೀಗ ವೈಮನಸ್ಸು ಹುಟ್ಟಿಕೊಂಡಿದೆ. ಪರಿಣಾಮ ಮೈತ್ರಿ ಮುರಿದು ಬಿದ್ದು ಸರಕಾರ ಅತಂತ್ರವಾಗುವ ಸೂಚನೆಗಳು ಕಾಣಿಸುತ್ತಿವೆ. ಇದೇ ಅವಕಾಶಕ್ಕಾಗಿ ಬಿಜೆಪಿ ಕಾದು ಕುಳಿತಿದೆ.
ಲಾಲು ಸಂಗವನ್ನು ಕೈಬಿಡಲು ನಿತೀಶ್ ಕುಮಾರ್ ನಿರ್ಧಾರ?
ಶುಕ್ರವಾರ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬಸ್ಥರ ಮೇಲೆ ಸಿಬಿಐ ದಾಳಿ ನಡೆಯುತ್ತಿದ್ದಂತೆ ಲಾಲು ಮತ್ತು ನಿತೀಶ್ ನಡುವೆ ನಡೆಯುತ್ತಿದ್ದ ಮುಸುಗಿನ ಗುದ್ದಾಟ ತಾರಕಕ್ಕೇರಿದೆ. ಇದೀಗ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆ ನೀಡಲಿ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾಯುತ್ತಿದ್ದಾರೆ. ಜತೆಗೆ ಇಂದು ಮತ್ತು ನಾಳೆ ಲಾಲು ಮತ್ತು ನಿತೀಶ್ ಕುಮಾರ್ ತಮ್ಮ ತಮ್ಮ ಪಕ್ಷದ ಶಾಸಾಕಾಂಗ ಸಭೆ ಕರೆದಿದ್ದು ಇಲ್ಲಿ ಅಂತಿಮ ತೀರ್ಮಾನ ಹೊರ ಬೀಳುವ ನಿರೀಕ್ಷೆ ಇದೆ.
ಸಂಜೆ ಆರ್'ಜೆಡಿ ಸಭೆ
ಇಂದು ಸಂಜೆ ಲಾಲು ಪ್ರಸಾದ್ ಯಾದವ್ ಆರ್ 'ಜೆಡಿಯ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ. ಆರ್'ಜೆಡಿ-ಜೆಡಿಯು ಮೈತ್ರಿಯ ಬಗ್ಗೆ ಈ ಸಭೆಯಲ್ಲಿ ತೀರ್ಮಾನವಾಗಲಿದೆ. ಒಂದು ಮೂಲಗಳ ಪ್ರಕಾರ ಲಾಲು ಪ್ರಸಾದ್ ಯಾದವ್ ನಿತೀಶ್ ವಿರುದ್ಧ ಗರಂ ಆಗಿದ್ದಾರೆ. ಹಾಗಂಥ ಅವರು ಮೈತ್ರಿಯನ್ನೇ ಕಡಿದುಕೊಳ್ಳುತ್ತಾರೋ ಕಾದು ನೋಡಬೇಕು.
ಹಾಗೊಂದು ವೇಳೆ ಮೈತ್ರಿ ಮುರಿದುಕೊಂಡರೆ ನಿತೀಶ್ ಗಿಂತ ಲಾಲೂಗೆ ನಷ್ಟ ಜಾಸ್ತಿ.
ಎನ್ಡಿಎಯತ್ತ ವಾಲುತ್ತಿರುವ ನಿತೀಶ್
ಅಪನಗದೀಕರಣದ ವೇಳೆ ನರೇಂದ್ರ ಮೋದಿ ನಡೆಯನ್ನು ಬೆಂಬಲಿಸಿದ್ದ ನಿತೀಶ್ ಕುಮಾರ್ ರಾಷ್ಟ್ರಪತಿ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಜತೆಗ ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ವಿಪಕ್ಷಗಳು ಕರೆದಿರುವ ಸಭೆಯಿಂದಲೂ ದೂರ ಉಳಿಯಲಿದ್ದಾರೆ. ನಿಧಾನಕ್ಕೆ ನಿತೀಶ್ ಬಿಜೆಪಿಯತ್ತ ಮತ್ತೆ ವಾಲುತ್ತಿರುವುದು ಕಂಡು ಬರುತ್ತಿದೆ. ಇದು ಲಾಲು ಕಂಗೆಡಿಸಿದೆ.
ಮಂಗಳವಾರ ನಿತೀಶ್ ಸಭೆ
ರಾಜಧಾನಿಯಿಂದ ಪಾಟ್ನಾದಿಂದ ಹೊರಗಿದ್ದ ನಿತೀಶ್ ಕುಮಾರ್ ಮೂರು ದಿನಗಳ ನಂತರ ಭಾನುವಾರ ಸಂಜೆ ರಾಜಧಾನಿಗೆ ಮರಳಿದ್ದಾರೆ. ಲಾಲು ಪ್ರಸಾದ್ ಯಾದವ್ ಮತ್ತು ಕುಟುಂಬದ ಮೇಲಿನ ಸಿಬಿಐ ದಾಳಿಯಿಂದಾಗಿ ರಾಜಧಾನಿಯ ವಾತಾವರಣ ಬಿಸಿಯೇರಿದ್ದು, ಈ ವಿಚಾರವಾಗಿ ನಿತೀಶ್ ಇನ್ನೂ ಬಾಯಿಬಿಟ್ಟಿಲ್ಲ.
ಮಂಗಳವಾರ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ನಿತೀಶ್ ತಮ್ಮ ಮೌನ ಮುರಿಯಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಕಾರ್ಯಕ್ರಮಗಳು ಪತ್ರಿಕಾಗೋಷ್ಠಿಯನ್ನು ರದ್ದು ಪಡಿಸಿರುವ ಮುಖ್ಯಮಂತ್ರಿಗಳು ಗೌಪ್ಯತೆ ಕಾಪಾಡಿಕೊಂಡಿದ್ದಾರೆ.
ರಾಜೀನಾಮೆ ನೀಡಲಾರೆ-ತೇಜಸ್ವಿ ಯಾದವ್
ಮೈತ್ರಿ ಬಿಕ್ಕಟ್ಟಿಗೆ ಸಿಬಿಐ ನಿಗಾದಲ್ಲಿರುವ ತೇಜಸ್ವಿ ಯಾದವ್ ರಾಜೀನಾಮೆ ನೀಡುವುದೇ ಪರಿಹಾರ ಎಂದು ಜೆಡಿಯು ಮೂಲಗಳು ಹೇಳಿವೆ. ಈ ಮೂಲಕ ಪರೋಕ್ಷವಾಗಿ ತಮ್ಮ ಬೇಡಿಕೆಯನ್ನು ಮುನ್ನಲೆಗೆ ತಂದಿವೆ. ಆದರೆ 27 ವರ್ಷದ ತೇಜಸ್ವಿ ಯಾದವ್ ಮಾತ್ರ ರಾಜೀನಾಮೆ ನೀಡುವುದನ್ನು ತಳ್ಳಿ ಹಾಕಿದ್ದಾರೆ. ಹೀಗಾಗಿ ಮುಂದಿನ 48 ಗಂಟೆಗಳು ಬಿಹಾರದ ರಾಜಕೀಯದ ಪಾಲಿಗೆ ಮಹತ್ವದ್ದಾಗಿವೆ.
ನಿತೀಶ್ ಗಿಲ್ಲ ಸರಕಾರ ಉರುಳುವ ಭಯ
ಬಿಹಾರದ ವಿಧಾನಸಭೆಯ ಬಲಾಬಲಗಳನ್ನು ನೋಡಿದರೆ ಜೆಡಿಯು ಮತ್ತು ಬಿಜೆಪಿ ಸರಳ ಬಹುಮತದಿಂದ ಅಧಿಕಾರ ನಡೆಸಬಹುದಾಗಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 124 ಸ್ಥಾನಗಳ ಅಗತ್ಯವಿದೆ.
ಅತೀ ದೊಡ್ಡ ಪಕ್ಷ ಆರ್.ಜೆ.ಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಮತ್ತು ಇತರ ಪಕ್ಷಗಳು 8 ಸ್ಥಾನಗಳನ್ನು ಹೊಂದಿವೆ.
ಬಿಜೆಪಿ + ಜೆಡಿಯು+ಎಲ್ಜೆಪಿ (ಬಿಜೆಪಿ ಮಿತ್ರ ಪಕ್ಷ) = 53+71+2 = 128 ಸ್ಥಾನಗಳಾಗುವುದರಿಂದ ಬಿಜೆಪಿ ಬೆಂಬಲದೊಂದಿಗೆ ಆಡಳಿತ ನಡೆಸುವುದು ಜೆಡಿಯುಗೆ ಕಷ್ಟವಾಗಲಾರದು. ಆದರೆ ಆರ್.ಜೆಡಿಗೆ ಈ ಅವಕಾಶವಿಲ್ಲ. ಕಾಂಗ್ರೆಸ್ ಜತೆಗೆ ನಿಂತಿದ್ದರೂ ಇಬ್ಬರ ಒಟ್ಟು ಸ್ಥಾನಗಳು 98 ಆಗಲಿದ್ದು ಬಹುಮತಕ್ಕೆ 26 ಸ್ಥಾನಗಳ ಕೊರತೆಯಾಗಲಿದೆ.