ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಅಜ್ಜಿ ಕೊಟ್ಟ ಅಮೃತಬಳ್ಳಿ ಕಷಾಯ!
'ಹಲೋ, ಸಾರ್... ಇವತ್ತು ಆಫೀಸ್ ಗೆ ಬರೋದು ಕಷ್ಟ. ವೈರಲ್ ಫಿವರ್ರು' ಅಂತ ತಗ್ಗಿದ ದನಿಯಲ್ಲಿ ಸಿಬ್ಬಂದಿಯೊಬ್ಬ ಫೋನ್ ಮಾಡಿದರೆ, 'ಇಲ್ಲ' ಅನ್ನೋಕಾಗದ ಉಭಯ ಸಂಕಟ ಮ್ಯಾನೇಜರ್ ಗೆ! ಈಗ ಎಲ್ಲೆಲ್ಲೂ ವೈರಲ್ ಜ್ವರದ್ದೇ ಮಾತು. ಆಫೀಸಿನಲ್ಲಿ ಒಬ್ಬರಿಗೆ ಆ ಜ್ವರ ಬಂದ್ರೆ ಸಾಕು, ಉಳಿದವರೆಲ್ಲರೂ ಕಂಗಾಲು! ಆದ್ರಿಂದ, 'ಸರೀನಪ್ಪ, ರೆಸ್ಟ್ ಮಾಡು' ಎನ್ನಲೇಬೇಕಾದ ಅನಿವಾರ್ಯತೆ ಮ್ಯಾನೇಜರ್ ಗೆ!
ಜ್ವರ ಬಂದವನೊಬ್ಬ ಕೆಮ್ಮಿದರೆ, ಆ...ಆ...ಕ್ಷಿ ಅಂದರೂ ಸಾಕು ಸುಯ್ಯಂತ ಬಂದು ನಮ್ಮುಸಿರಲ್ಲೂ ಸೇರಿಕೊಂಡು ಒಂದೇ ದಿನಕ್ಕೆ ಹಣ್ಣು ಮಾಡಿಬಿಡುವ ಈ ವೈರಸ್ ಗಳೇನು ಕಡಿಮೆನಾ? ಕಣ್ಣಿಗೇ ಕಾಣಿಸದಿದ್ದರೂ ಎಷ್ಟು ಶಕ್ತಿ ನೋಡಿ ಇವಕ್ಕೆ?!
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ 'ಡೆಂಗ್ಯೂ' ರುದ್ರ ನರ್ತನ
ಹೌದು, ಈಗ ಎಲ್ಲೆಲ್ಲೂ ತರಹೇವಾರಿ ಜ್ವರದ್ದೇ ಮಾತು. ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಚಿಕೂನ್ ಗುನ್ಯಾ ಮುಂತಾಗಿ ಜೀವವನ್ನೇ ತೆಗೆದುಬಿಡುವಂಥ ಅಪಾಯಕಾರಿ ಜ್ವರಗಳು ಜನರ ನಿದ್ದೆಗೆಡಿಸಿರೋದು ಸುಳ್ಳಲ್ಲ. ಹೀಗೆ ಪ್ರತಿಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಹೊಸ ಹೊಸ ಹೆಸರಿನ ಜ್ವರಗಳು ಹುಟ್ಟಿಕೊಳ್ಳುತ್ತವೆ.
ನಮ್ಮ ದೇಹಕ್ಕೆ ಸಿಕ್ಕಾಬಟ್ಟೆ ರೋಗ ನಿರೋಧಕ ಶಕ್ತಿಯಿದ್ದರೆ ಈ ಜ್ವರ ಒಂದೆರಡು ದಿನ ಕಾಡಿಸಿ ಹೋದೀತು. ಆದರೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಿಳಿ ರಕ್ತ ಕಣ(WBC)ಗಳನ್ನೇ ನಾಶಮಾಡುವ ವೈರಸ್ ಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಕಷ್ಟವೇ.
ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು..
ಅದಕ್ಕೆಂದೇ ಇರಬೇಕು, ಮಲೆನಾಡು, ಅರೆಮಲೆನಾಡು ಭಾಗದ ಹಳ್ಳಿಗಳಲ್ಲಿರುವ ಅಜ್ಜಿಯಂದಿರು ಈಗಲೂ ಮಳೆಗಾಲ ಆರಂಭವಾಗುವ ಮುನ್ನವೇ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂಥ ಕಷಾಯಗಳನ್ನು ಮಾಡಿ ದಿನವೂ ಮನೆಜನರಿಗೆಲ್ಲ ಹಂಚುತ್ತಾರೆ. ಜ್ವರದಿಂದ ಬಳಲುತ್ತಿರುವವರಿಗೆ ಹೆಸರಿಗೆ ತಕ್ಕಂತೆ ಅಮೃತವೇ ಆದ ಅಮೃತಬಳ್ಳಿಯಂತೂ ಅಜ್ಜಿಯರ ಬತ್ತಳಿಕೆಯಲ್ಲಿರುತ್ತಿದ್ದ ಪರಿಣಾಮಕಾರೀ ಬಾಣವೇ.
ನಾಲಿಗೆಗೆ ಘೋರ ಕಹಿ, ಆರೋಗ್ಯಕ್ಕೆ ಬಹಳ ಹಿತ
ಹಾಗಲಕಾಯಿಗಿಂತಲೂ ಘೋರ ಕಹಿಯ ಈ ಅಮೃತ ಬಳ್ಳಿಯ ಬೆಳೆದ ಕಾಂಡಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ, ಚೆನ್ನಾಗಿ ತೊಳೆದು, ಒಂದು ಲೋಟ ನೀರಿನಲ್ಲಿ ಹಾಕಿ, ಅದು ಅರ್ಧ ಲೋಟವಾಗುವವರೆಗೂ ಚೆನ್ನಾಗಿ ಕುದಿಸಿ ನಂತರ ಆ ನೀರನ್ನು ಸೇವಿಸುತ್ತಿದ್ದರೆ (ಮೂರ್ನಾಲ್ಕು ದಿನಕ್ಕೊಮ್ಮೆ) ಜ್ವರದ ವೈರಾಣುಗಳು ನಮ್ಮತ್ತ ತಿರುಗೋ ಧೈರ್ಯವನ್ನೂ ಮಾಡೋಲ್ಲ ಎಂಬ ಮಾತು 100 ಸತ್ಯ! ಈ ಕಷಾಯದೊಂದಿಗೆ ಶುದ್ಧ ಜೇನುತುಪ್ಪವನ್ನು ಬೇಕಾದರೂ ಸೇರಿಸಿ ಕುಡಿಯಬಹುದು. ಅಮೃತಬಳ್ಳಿಯೊಂದಿಗೆ ತುಳಸಿ, ಜೀರಿಗೆ, ಮೆಣಸು, ಕೊತ್ತಂಬರಿ ಬೀಜಗಳನ್ನೂ ಸೇವಿಸಿ ಕಷಾಯ ಮಾಡಿದರೆ ಅದು ಮತ್ತಷ್ಟು ಪರಿಣಾಮಕಾರಿ.
ಹಲವು ರೋಗಗಳಿಗೂ ರಾಮಬಾಣ
ಟಿನೋಸ್ಪೊರಾ ಕಾರ್ಡಿಫೋಲಿಯಾ ಎಂಬುದು ಅಮೃತಬಳ್ಳಿಯ ವೈಜ್ಞಾನಿಕ ಹೆಸರು. ಹಸಿರು ಹಾರ್ಟ್ ಮಾರ್ಕ್ ನಂತೇ ಕಾಣುವ ಈ ಎಲೆ ಡಯಾಬಿಟಿಸ್ ಗೆ ಹೇಳಿಮಾಡಿಸಿದ್ದು. ಅಷ್ಟೇ ಅಲ್ಲ, ಈ ಸಸ್ಯದಲ್ಲಿ ಕೊಲೆಸ್ಟ್ರಾಲ್, ಅಲರ್ಜಿಯನ್ನೂ ಕಡಿಮೆ ಮಾಡುವ ಶಕ್ತಿಯಿದೆ. ಅಮೃತಬಳ್ಳಿಯ ಕಷಾಯವನ್ನು ವಾರಕ್ಕೊಮ್ಮೆ ಸೇವಿಸುತ್ತಿದ್ದರೆ ಕ್ಯಾನ್ಸರ್ ನಂಥ ಮಾರಣಾಂತಿಕ ಕಾಯಿಲೆ ಬಾರದಂತೆ ತಡೆಯಬಹುದು ಎನ್ನುತ್ತಾರೆ ತಜ್ಞ ವೈದ್ಯರು. ಅಮೃತ ಬಳ್ಳಿ ಎಷ್ಟು ಪರಿಣಾಮಕಾರಿ ಎಂಬುದನ್ನು ಇತ್ತೀಚಿನ ವೈದ್ಯಕೀಯ ಸಂಶೋಧನೆಗಳೂ ಕಂಡುಕೊಂಡಿವೆ.
ಚರ್ಮದ ಸಮಸ್ಯೆಗೂ ಮದ್ದು
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಜಾಂಡಿಸ್, ಮಧುಮೇಹ ನಿವಾರಣೆಗೆ ಅಮೃತಬಳ್ಳಿಯನ್ನೇ ಬಳಸಲಾಗುತ್ತಿತ್ತು. ಅಷ್ಟೇ ಅಲ್ಲ, ಚರ್ಮ ಸಂಬಂಧಿ ಕಾಯಿಲೆಯಲ್ಲಿ ಬಹುಮುಖ್ಯವಾದ ಸೋರಿಯಾಸಿಸ್ ಅನ್ನು ನಿಯಂತ್ರಣಕ್ಕೆ ತರುವ ಗುಣವೂ ಅಮೃತಬಳ್ಳಿಗಿದೆ. ಜ್ವರದ ಸಮಯದಲ್ಲಿ ಸಾಮಾನ್ಯವಾಗಿ ಕಾಡುವ ಸಂಧಿನೋವಿಗೂ ಇದು ರಾಮಬಾಣ.
ಬೆಂಗಳೂರಿನ ಮಾರುಕಟ್ಟೆಯಲ್ಲೂ ಅಮೃತಬಳ್ಳಿ
ಮಲೆನಾಡಿನ ಅಜ್ಜಿಯರ ಬತ್ತಳಿಕೆಯ ಪ್ರಮುಖ ಅಸ್ತ್ರವಾಗಿದ್ದ ಅಮೃತಬಳ್ಳಿಯ ಉಪಯೋಗ ಅರಿವಾಗುತ್ತಿದ್ದಂತೆಯೇ ಈಗೀಗ ಉದ್ಯಾನ ನಗರಿ ಬೆಂಗಳೂರಿನ ಮಾರುಕಟ್ಟೆಗಳಲ್ಲೂ ಅಮೃತಬಳ್ಳಿಯನ್ನು ಮಾರಾಟಕ್ಕಾಗಿ ಇಟ್ಟುಕೊಳ್ಳುವುದು ಕಂಡುಬರುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮಾರಾಟಕ್ಕೆಂದು ಇಟ್ಟುಕೊಂಡ ಬಳ್ಳಿಗಳೆಲ್ಲ ಬಿಸಿ ಬಿಸಿ ಬೋಂಡಾದಂತೇ ಖಾಲಿಯಾಗುವುದನ್ನು ನೋಡಿದರೆ ಜನರಿಗೆ ಅಮೃತಬಳ್ಳಿಯ ಉಪಯೋಗ ಎಷ್ಟರ ಮಟ್ಟಿಗೆ ಅರಿವಾಗಿದೆ ಎಂಬುದು ತಿಳಿದುಬರುತ್ತದೆ.
ವೈರಸ್ ವಿರುದ್ಧ ಹೋರಾಡಲು ರೆಡಿಯಾಗಿ!
ಎಷ್ಟೇ ಥರದ ವೈದ್ಯಕೀಯ ಪದ್ಧತಿಗಳು ಪರಿಚಿತವಾದರೂ, ತರಹೇವಾರಿ ಔಷಧಗಳು ಸಿಕ್ಕರೂ, ಅಜ್ಜಿಯ ಕೈಯಲ್ಲಿ ತಯಾರಾಗುತ್ತಿದ್ದ ಆ ಕಷಾಯ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತೆ ಇನ್ಯಾವುದೂ ಹೆಚ್ಚಿಸಲಾರದು ಎಂಬುದಂತೂ ಸತ್ಯ! ಡೆಂಗ್ಯೂ, ಚಿಕೂನ್ ಗುನ್ಯಾದಂಥ ರೋಗಗಳು ಬಂದ ಮೇಲೆ ತಕ್ಷಣದ ಚಿಕಿತ್ಸೆಗೆ ವೈದ್ಯರ ಬಳಿಗೆ ತೆರಳುವುದು ಮುಖ್ಯ ಎಂಬುದು ನಿಜ. ಆದರೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಅಮೃತಬಳ್ಳಿಯ ಕಷಾಯ ಸೇವಿಸುವುದರಿಂದ ಖಂಡಿತವಾಗಿಯೂ ಇಂಥ ಜ್ವರಗಳಿಂದ ದೂರವಿರುವುದಕ್ಕೆ ಸಾಧ್ಯವಿದೆ ಎಂಬುದು ಹಲವು ವೈದ್ಯರ ಅನುಭವದ ಮಾತೂ ಹೌದು.