ಅಯೋಧ್ಯೆಯಲ್ಲಿ ಮತ್ತೆ ರಾಮ ಮಂದಿರ ನಿರ್ಮಾಣದ ಪ್ರತಿಧ್ವನಿ
ನವದೆಹಲಿ, ಜೂನ್ 06 : ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆಯೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬೇಡಿಕೆ ತೀವ್ರತೆ ಪಡೆಯುತ್ತಿದೆ ಮತ್ತು ಇದಕ್ಕೆ ಪೂರಕವಾಗಿ ರಾಜಕೀಯ ಚಟುವಟಿಕೆಗಳು ಕೂಡ ನಡೆಯುತ್ತಿವೆ.
ಇದರ ಮುಂದುವರಿದ ಭಾಗವಾಗಿ ಜೂನ್ 7, ಶುಕ್ರವಾರದಂದು, 7 ಅಡಿ ಎತ್ತರದ 'ಕೋದಂಡ ರಾಮ' ಮೂರ್ತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ಶೋಧ ಸಂಸ್ಥಾನದಲ್ಲಿ ಉದ್ಧಾಟಿಸಲಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಒಂದೇ ಒಂದು ಬೃಹತ್ ರೋಸ್ ವುಡ್ ತುಂಡಿನಿಂದ ತಯಾರಿಸಲಾಗಿರುವ ಕೋದಂಡ ರಾಮನ ಸುಂದರ ಮೂರ್ತಿಯನ್ನು ಕರ್ನಾಟಕದಲ್ಲಿ ಕೆತ್ತಲಾಗಿದೆ. ಇದನ್ನು 35 ಲಕ್ಷ ರುಪಾಯಿಗೆ ಕರ್ನಾಟಕ ಎಂಪೋರಿಯಂನಿಂದ ಕೊಳ್ಳಲಾಗಿದೆ.
ಅಯೋಧ್ಯೆಯಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಕೋದಂಡ ರಾಮನ ಮೂರ್ತಿ ಅನಾವರಣಗೊಳ್ಳುತ್ತಿದೆ. ಇಲ್ಲಿ ರಾಮನ ಜೀವನದ ಐದು ಘಟ್ಟಗಳಾದ ಬಾಲ ರಾಮ, ರಾಜಾ ರಾಮ, ದುಲ್ಹಾ ರಾಮ, ವನವಾಸಿ ರಾಮ ಮತ್ತು ಕೋದಂಡ ರಾಮನಿಗೆ ಸಂಬಂಧಿಸಿದಂತೆ 2,500 ಮೂರ್ತಿಗಳಿವೆ.

ಉದ್ಧವ್ ಠಾಕ್ರೆಯಿಂದ ಅಯೋಧ್ಯೆಗೆ ಭೇಟಿ
ಈ ನಡುವೆ, ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಅವರು, ತಮ್ಮ 18 ಸಂಸದರೊಂದಿಗೆ ಜೂನ್ 15ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಆರಂಭವಾಗುವ ಮುನ್ನ ಜೂನ್ 15ರಿಂದ 17ರ ನಡುವೆ ಶಿವಸೇನೆಯ ಎಲ್ಲ ಸಂಸದರು ಅಯೋಧ್ಯೆಯಲ್ಲಿ ಇರಲಿದ್ದಾರೆ. ಇದೊಂದೇ ಕಾರಣಕ್ಕೆ ಅಂದರೆ ರಾಮ ಮಂದಿರ ನಿರ್ಮಾಣಕ್ಕಾಗಿಯೇ ತಾವು ಭಾರತೀಯ ಜನತಾ ಪಕ್ಷದೊಡನೆ ಕೈಜೋಡಿಸಿರುವುದು ಎಂದು ಕೂಡ ಅವರು ಹೇಳಿದ್ದಾರೆ.

ರಾಮ ಮಂದಿರಕ್ಕೆ ಕಾನೂನಿನ ತೊಡಕು ಇಲ್ಲ
ಇದೇ ಸಮಯದಲ್ಲಿ ಬಿಜೆಪಿ ನಾಯಕ, ಸಂಸದ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಕೂಡ, ಅಯೋಧ್ಯೆಯ ವಿವಾದಿತ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸದಿರಲು ಯಾವುದೇ ಕಾನೂನಾತ್ಮಕ ಕಾರಣಗಳು ಇಲ್ಲ. ಕೇಂದ್ರ ಸರಕಾರದ ಅಯೋಧ್ಯೆಯಲ್ಲಿ ಕೂಡಲೆ ರಾಮ ಮಂದಿರ ನಿರ್ಮಾಣಕ್ಕೆ ಕೈ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ರಾಮಜನ್ಮ ಭೂಮಿ ಜಮೀನು ನೀಡಲಾಗದು
ರಾಮಜನ್ಮಭೂಮಿ ನ್ಯಾಸ ಸಮಿತಿ ಅಥವಾ ವಿಶ್ವ ಹಿಂದೂ ಪರಿಷತ್ ಮೂಲಕ ರಾಮ ಮಂದಿರ ನಿರ್ಮಾಣದ ಘೋಷಣೆಯನ್ನು ಕೇಂದ್ರ ಸರಕಾರ ಮಾಡಬೇಕು. ಎಲ್ಲ 67.703 ಎಕರೆ ಜಮೀನು ಇದೀಗ ಕೇಂದ್ರ ಸರಕಾರದ ಅಧೀನದಲ್ಲಿದೆ. ಸರ್ವೋಚ್ಚ ನ್ಯಾಯಾಲಯ ನಿರ್ಧರಿಸಿದಾಗ ಸಂತ್ರಸ್ತರಿಗೆ ಪರಿಹಾರವನ್ನು ನೀಡಬಹುದು. ಅವರಿಗೆ ಜಮೀನು ನೀಡಲಾಗದು. ಕೂಡಲೆ ರಾಮ ಮಂದಿರ ನಿರ್ಮಾಣ ಆರಂಭಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸಂತ್ರಸ್ತರಿಗೆ ಪರಿಹಾರ ನೀಡಬಹುದು
ಮೇ 31ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಪತ್ರವೊಂದನ್ನು ಬರೆದಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಜಮೀನನ್ನು ವಶಕ್ಕೆ ತೆಗೆದುಕೊಳ್ಳಲು ಕೇಂದ್ರ ಸರಕಾರಕ್ಕೆ ಹಕ್ಕಿದೆ. ರಾಮಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ಕಲಹಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ಕೊಡುವುದಾಗಿ ಸರ್ವೋಚ್ಚ ನ್ಯಾಯಾಲಯದ ಮನವೊಲಿಸಬೇಕು ಮತ್ತು ವಿವಾದಿತ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸಬೇಕೆಂದು ಅವರು ಹೇಳಿದ್ದಾರೆ.

ರಾಮ ಮಂದಿರಕ್ಕೆ ಪೇಜಾವರಶ್ರೀ ಆಗ್ರಹ
ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಕೂಡ, ಗೋಹತ್ಯೆ ನಿಷೇಧ ಕಾಯ್ದೆಯ ಅನುಷ್ಠಾನ ಮತ್ತು ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನ್ಯ ಧರ್ಮೀಯರನ್ನು ನರೇಂದ್ರ ಮೋದಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ನರೇಂದ್ರ ಮೋದಿಯವರಿಗೆ ಆಗ್ರಹಿಸಿದ್ದಾರೆ. ಬಿಜೆಪಿ ಕೇವಲ ಹಿಂದೂ ಪಕ್ಷವಲ್ಲ, ಇತರ ಧರ್ಮೀಯರ ವಿರೋಧಿ ಪಕ್ಷವೂ ಅಲ್ಲ. ಇಲ್ಲದಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಇತರ ಧರ್ಮೀಯರು ಕೂಡ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಿರಲಿಲ್ಲ ಎಂದು ವಿಶ್ವೇಶ ತೀರ್ಥರು ಹೇಳಿದ್ದಾರೆ. ಎಲ್ಲ ಧರ್ಮೀಯರ ಮನವೊಲಿಸಿ ರಾಮ ಮಂದಿರಕ್ಕೆ ಕೇಂದ್ರ ಸರಕಾರ ಮುಂದಾಗಬೇಕು ಎಂಬುದು ಅವರ ಆಗ್ರಹ.












Click it and Unblock the Notifications