ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆಯಲ್ಲಿ ಅತಿಹೆಚ್ಚು ಮಂದಿ ಮೃತಪಟ್ಟಿದ್ದು ಏಕೆ?
ನವದೆಹಲಿ, ಜೂನ್ 25: "ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಹಿಂದಿನ ಅಸಲಿ ಕಾರಣ ಇದೀಗ ಗೊತ್ತಾಗಿದೆ. ಸಾವಿರಾರು ಜನರು ಉಸಿರಾಟ ಸಮಸ್ಯೆಯಿಂದಲೇ ಪ್ರಾಣ ಬಿಟ್ಟಿದ್ದರ ಹಿಂದಿನ ಸತ್ಯವನ್ನು ಅಧ್ಯಯನವೊಂದು ಬಿಚ್ಚಿಟ್ಟಿದೆ.
ಎರಡನೇ ಅಲೆಯಲ್ಲಿ ಅತಿಹೆಚ್ಚು ಜನರು ಪ್ರಾಣ ಕಳೆದುಕೊಳ್ಳುವುದಕ್ಕೆ ಇದೇ ಡೆಲ್ಟಾ ರೂಪಾಂತರ ತಳಿ ಕಾರಣ ಎನ್ನಲಾಗಿದೆ. ಅಲ್ಲದೇ, ಡೆಲ್ಟಾ ರೂಪಾಂತರವು ಶೇ.40ರಷ್ಟು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ," ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ.
ಡೆಲ್ಟಾ ಅಲ್ಲದ ಮೊದಲ ಅಲೆಯ ಕೊವಿಡ್-19 ಸೋಂಕಿನಿಂದ ರಕ್ಷಿಸಿಕೊಳ್ಳುವುದಕ್ಕೆ ನೀಡಿರುವ ಪ್ರತಿರಕ್ಷಣಾ ವ್ಯವಸ್ಥೆಗೆ ಈ ರೂಪಾಂತರಿಯು ಶೇ.55ರಷ್ಟು ಹಾನಿ ಉಂಟು ಮಾಡುವ ಸಾಧ್ಯತೆಯಿದೆ. ಡೆಲ್ಟಾ ರೂಪಾಂತರ ತಳಿಯು ಕೊರೊನಾವೈರಸ್ ರೋಗಾಣು ತಟಸ್ಥೀಕರಣಗೊಳಿಸುವ ಲಸಿಕೆ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಭಾರತ ಮತ್ತು ಯುಕೆ ಆಸ್ಪತ್ರೆಗಳು ಮತ್ತು ವೈಜ್ಞಾನಿಕ ಸಂಸ್ಥೆಗಳ ತಜ್ಞರನ್ನೊಳಗೊಂಡ ತಂಡವು ಈ ಕುರಿತು ಅಧ್ಯಯನ ನಡೆಸಿದೆ. ಡೆಲ್ಟಾ ರೂಪಾಂತರವು ಡಿ614ಜಿ ಹೊಂದಿರುವ ವುಹಾನ್ -1 ಗೆ ಹೋಲಿಸಿದರೆ ಲಸಿಕೆಯಿಂದ ಸಿಗುವ ಪ್ರತಿಕಾಯಗಳಿಗೆ ಸುಮಾರು ಎಂಟು ಪಟ್ಟು ಸೂಕ್ಷ್ಮತೆಯನ್ನು ಕಡಿಮೆ ಮಾಡಿರುವುದು ಗೊತ್ತಾಗಿದೆ.

ಉಸಿರಾಟ ಸಮಸ್ಯೆ ಹೆಚ್ಚಿಸುವ ಡೆಲ್ಟಾ ರೂಪಾಂತರ
ಭಾರತದ ಮೂರು ಕೇಂದ್ರಗಳಲ್ಲಿ 100ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಲ್ಲಿ ಲಸಿಕೆ ಪಡೆದ ನಂತರದಲ್ಲಿ ಕಂಡು ಬಂದ ಪ್ರಗತಿಯ ವಿಶ್ಲೇಷಿಸಲಾಯಿತು. ಈ ವೇಳೆ "ಡೆಲ್ಟಾ ರೂಪಾಂತರವು ಡೆಲ್ಟಾ-ಅಲ್ಲದ ಸೋಂಕುಗಳಿಗೆ ಹೋಲಿಸಿದರೆ ಹೆಚ್ಚಿನ ಉಸಿರಾಟದ ಸಮ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೇ, ಅತೆಹಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿರುವ ಡೆಲ್ಟಾ ರೂಪಾಂತರ ಲಸಿಕೆಯ ಶಕ್ತಿಯನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತದೆ" ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಡೆಲ್ಟಾ ರೂಪಾಂತರ ಪ್ರಕರಣ ಪತ್ತೆಯಾಗಿದ್ದು ಎಲ್ಲಿ?
ಕಳೆದ 2020ರಲ್ಲಿ ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಸಾರ್ಸ್-ಕೊವ್-2 B.1.617.2 ಅಥವಾ ಡೆಲ್ಟಾ ರೂಪಾಂತರ ತಳಿಯ ಮೊದಲ ಪ್ರಕರಣ ಪತ್ತೆಯಾಗಿತ್ತು. ಅದಕ್ಕಿಂತ ಮೊದಲು ಕಾಣಿಸಿಕೊಂಡಿದ್ದ ಅಲ್ಫಾ(B.1.1.7) ಸೋಂಕಿನ ಪ್ರಮಾಣ ಮತ್ತು ಸಂಖ್ಯೆಯನ್ನು ಡೆಲ್ಟಾ ರೂಪಾಂತರವು ಆಕ್ರಮಿಸಿಕೊಂಡಿತು. ಅಲ್ಫಾಗೆ ಹೋಲಿಸಿದರೆ ಡೆಲ್ಟಾ ರೂಪಾಂತರವು ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದ್ದು, ಕಡಿಮೆ ಸೂಕ್ಷ್ಮತೆ ಜೊತೆ ಪ್ರತಿಕಾಯಗಳನ್ನು ತಟಸ್ಥಗೊಳಿಸುವ ಶಕ್ತಿಯನ್ನು ಹೊಂದಿದೆ.

ಲಸಿಕೆಯಿಂದ ಸಾವಿನ ಪ್ರಮಾಣ ಇಳಿಕೆ
ಆಲ್ಫಾ ರೂಪಾಂತರಕ್ಕೆ ಹೋಲಿಸಿದರೆ ಡೆಲ್ಟಾ ರೂಪಾಂತರ ತಳಿಯು ರೋಗ ನಿರೋಧಕ ಶಕ್ತಿಯಿಂದ ಜಾರಿಕೊಳ್ಳುವ ಹಾಗೂ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಲಸಿಕೆಯು ಹಲವು ಜನರಲ್ಲಿ ಸೋಂಕು ತಗುಲುವುದು ಹಾಗೂ ಸಾವಿನ ಪ್ರಮಾಣವನ್ನು ತಗ್ಗಿಸಿದೆ. ಆದರೆ ಲಸಿಕೆಗೆ ಸ್ಪಂದಿಸದ ಕೆಲವರಿಗೆ ಹೆಚ್ಚಿನ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಆರೋಗ್ಯ ಕಾರ್ಯಕರ್ತರು ಲಸಿಕೆ ನಂತರವೂ ಜಾಗೃತರಾಗಿರಿ
"ಎರಡೂ ಡೋಸ್ ಕೊರೊನಾವೈರಸ್ ಲಸಿಕೆಯನ್ನು ಪಡೆದ ನಂತರದಲ್ಲೂ ಆರೋಗ್ಯ ಕಾರ್ಯಕರ್ತರು, ವೈದ್ಯರಿಗೆ ಹಲವು ರೀತಿ ಅನಾರೋಗ್ಯ ಸಮಸ್ಯೆ ಕಾಡುವುದು ಬಲು ಅಪರೂಪವಾಗಿದೆ. ಇದರ ಮಧ್ಯೆ ಆಸ್ಪತ್ರೆಗಳಲ್ಲಿ ಕೊವಿಡ್-19 ಸೋಂಕಿನ ಹರಡುವಿಕೆ ಅಪಾಯ ಹೆಚ್ಚಾಗಿರುತ್ತದೆ. ಈ ಹಿನ್ನೆಲೆ ಲಸಿಕೆ ಪಡೆದ ನಂತರದಲ್ಲೂ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ," ಎಂದು ಅಧ್ಯಯನವು ಸೂಚಿಸುತ್ತದೆ.











Click it and Unblock the Notifications