Breaking: ದೆಹಲಿ ಮದ್ಯ ನೀತಿ- ಫಾರ್ಮಾ ಕಂಪನಿ ಮ್ಯಾನೇಜರ್ ಬಂಧನ
ನವದೆಹಲಿ, ನ.10 : ದೆಹಲಿಯಲ್ಲಿ ರದ್ದಾದ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಫಾರ್ಮಾ ಕಂಪನಿಯ ಉನ್ನತ ಅಧಿಕಾರಿಯನ್ನು ಬಂಧಿಸಿದೆ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅರಬಿಂದೋ ಫಾರ್ಮಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶರತ್ ರೆಡ್ಡಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇಡಿ ಇದೇ ಸಂಸ್ಥೆಯಿಂದ ಬಂಧಿಸಲ್ಪಟ್ಟಿರುವ ಎರಡನೇ ವ್ಯಕ್ತಿ ಇವರು. ತನಿಖಾ ಸಂಸ್ಥೆ ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕ ಶರತ್ ರೆಡ್ಡಿ ಅವರ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿತ್ತು. ಬಳಿಕ ಅವರನ್ನು ಎರಡು ಬಾರಿ ವಿಚಾರಣೆ ನಡೆಸಿತ್ತು.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅಪರಾಧದ ಆದಾಯವನ್ನು ವರ್ಗಾಯಿಸಲು ಶರತ್ ರೆಡ್ಡಿ ಸಹಾಯ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯವು ಈ ಪ್ರಕರಣದಲ್ಲಿ ಇದುವರೆಗೆ ಹಲವು ದಾಳಿಗಳನ್ನು ನಡೆಸಿದ್ದು, ಸೆಪ್ಟೆಂಬರ್ನಲ್ಲಿ, ಇಂಡೋಸ್ಪಿರಿಟ್ ಎಂಬ ಮದ್ಯ ತಯಾರಿಕಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಂದ್ರು ಅವರನ್ನು ಬಂಧಿಸಿದೆ.
ದೆಹಲಿಯ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ದೆಹಲಿ ಲೆಫ್ಟಿನೆಂಟ್ ಜನರಲ್ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ ನಂತರ ಅಬಕಾರಿ ಯೋಜನೆ ಪ್ರಕರಣ ತನಿಖೆಗೆ ಬಂದಿದೆ.












Click it and Unblock the Notifications