ಮೆಟ್ರೋ ಪಿಲ್ಲರ್ ಕುಸಿತ- ಓರ್ವನಿಗೆ ಗಾಯ- ಸ್ಥಳಕ್ಕೆ ದಾವಿಸಿದ ರಕ್ಷಣ ತಂಡ!
ಹೈದರ್ಪುರ ಬದ್ಲಿ ಮೋರ್ ನಿಲ್ದಾಣದ ಬಳಿ ಮೆಟ್ರೋ ಪಿಲ್ಲರ್ನ ಒಂದು ಭಾಗ ಗುರುವಾರ ಬಿದ್ದು ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ.
ನವದೆಹಲಿ ಫೆಬ್ರವರಿ 16: ಹೈದರ್ಪುರ ಬದ್ಲಿ ಮೋರ್ ನಿಲ್ದಾಣದ ಬಳಿ ಮೆಟ್ರೋ ಪಿಲ್ಲರ್ನ ಒಂದು ಭಾಗ ಗುರುವಾರ ಬಿದ್ದು ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಮೆಟ್ರೋ ಪಿಲ್ಲರ್ನ ಒಂದು ಭಾಗವು ಕಾರ್ ಮೇಲೆ ಬಿದ್ದು ಕಾರು ಹಾನಿಗೊಳಗಾಗಿದೆ. ಘಟನೆಯ ನಂತರ ಅಗ್ನಿಶಾಮಕ ದಳದ ತಂಡ, ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿತು.
ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ಒಂದು ತಿಂಗಳ ಬಳಿಕ ಈ ಘಟನೆ ನಡೆದಿದೆ. ನಾಗವಾರ ಬಳಿ ನಿರ್ಮಾಣ ಹಂತದ 40 ಅಡಿ ಎತ್ತರದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿತಗೊಂಡು ತಾಯಿ ಮಗ ಸಾವನ್ನಪ್ಪಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ಬಿಆರ್ ಲೇಔಟ್ ಬಳಿ ಜನವರಿ 10ರಂದು ನಡೆದಿತ್ತು. ತೇಜಸ್ವಿನಿ (28), ಅವರ ಪುತ್ರ ವಿಹಾನ್ (2.5) ಮೃತಪಟ್ಟಿದ್ದಾರೆ. ಪತ್ನಿಯನ್ನು ಕಚೇರಿಗೆ ಬಿಡಲು ಹೊರಟಿದ್ದ ಪತಿ ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ದಂಪತಿ ತಮ್ಮ ಅವಳಿ ಮಕ್ಕಳ ಜೊತೆ ಬೈಕ್ನಲ್ಲಿ ತೆರಳುತ್ತಿದ್ದರು, ಇವರು ಹೊರಮಾವು ನಿವಾಸಿಗಳಾಗಿದ್ದರು ಎಂದು ಅಧೀಕಾರಿಗಳು ತಿಳಿಸಿದ್ದಾರೆ. ತೇಜಸ್ವಿನಿ ಅವರು ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ತೇಜಸ್ವಿನಿಯನ್ನು ಕೆಲಸಕ್ಕೆ ಬಿಟ್ಟು ನಂತರ ತನ್ನ ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್ ಶಾಲೆಗೆ ಬಿಡಲು ಲೋಹಿತ್ ಕುಮಾರ್ ತೆರಳುತ್ತಿದ್ದರು.

ಈ ವೇಳೆ ಏಕಾಏಕಿ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮೈಮೇಲೆ ಬಿದ್ದ ಪರಿಣಾಮ ತೇಜಸ್ವಿನಿ, ಗಂಡು ಮಗು ವಿಹಾನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಅಷ್ಟರಲ್ಲೇ ತಾಯಿ ಮಗ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.












Click it and Unblock the Notifications