ಪ್ರತಿಭಟನೆ ಪರಿಣಾಮ ಕೇಜ್ರಿವಾಲ್ ಗೆ ಮಧುಮೇಹ, ಬೆಂಗಳೂರಿನಲ್ಲಿ ಚಿಕಿತ್ಸೆ
ಬೆಂಗಳೂರು, ಜೂನ್ 20: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತೆ ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆಗಾಗಿ ನಾಳೆ ಬೆಂಗಳೂರಿಗೆ ಬರುತ್ತಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಸತತ 9 ದಿನ ಕೇಜ್ರಿವಾಲ್ ತಮ್ಮ ಸಹೊದ್ಯೋಗಿಗಳ ಜೊತೆ ಸತ್ಯಾಗ್ರಹ ನಡೆಸಿದ್ದರು. ಈ ಸಂದರ್ಭದಲ್ಲಿ ಅವರ ರಕ್ತದಲ್ಲಿರುವ ಸಕ್ಕರೆ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರೀಗ ಚಿಕಿತ್ಸೆ ಪಡೆಯಲು ಉದ್ಯಾನ ನಗರಿಗೆ ಆಗಮಿಸುತ್ತಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಕಚೇರಿಯ ವೇಯ್ಟಂಗ್ ರೂಂನಲ್ಲೆ ಪ್ರತಿಭಟನೆ ನಡೆಸುತ್ತಿದ್ದ ಕೇಜ್ರಿವಾಲ್ ಅವರಿಗೆ ಮನೆಯಿಂದಲೇ ಊಟ ಮತ್ತು ಮಧುಮೇಹಕ್ಕೆ ಇನ್ಸುಲಿನ್ ನಿಯಮಿತವಾಗಿ ನೀಡಲಾಗುತ್ತಿತ್ತು. ಹೀಗಿದ್ದೂ ರಕ್ತದಲ್ಲಿರುವ ಸಕ್ಕರೆ ಪ್ರಮಾಣದಲ್ಲಿ ಏರುಪೇರಾಗಿದೆ.

ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಪ್ರತಿಭಟನೆ ಕೊನೆಗೊಳಿಸಿದ್ದ ಕೇಜ್ರಿವಾಲ್ ಇಂದು ಹಮ್ಮಿಕೊಂಡಿದ್ದ ಸಭೆಗಳೆಲ್ಲವನ್ನೂ ರದ್ದುಗೊಳಿಸಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಸದ್ಯದಲ್ಲೇ ಇದಕ್ಕೆ ಚಿಕಿತ್ಸೆ ಪಡೆಯಲಿದ್ದಾರೆ.
ಮೊದಲಿನಿಂದಲೂ ಮಧುಮೇಹದಿಂದ ಕೇಜ್ರಿವಾಲ್ ಬಳಲುತ್ತಿದ್ದಾರೆ. ಹೀಗಾಗಿ ಅವರು ಪ್ರತೀ ದಿನ ಎರಡು ಬಾರಿ ಒಂದು ಗಂಟೆಗಳ ನಡಿಗೆ ಮಾಡುತ್ತಾರೆ. ಜೊತೆಗೆ ಹೊತ್ತಿಗೆ ಸರಿಯಾಗಿ ಆಹಾರಗಳನ್ನು ತೆಗೆದುಕೊಂಡು ಅವರು ತಮ್ಮ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಿದ್ದರು. ಆದರೆ ಪ್ರತಿಭಟನೆ ಸಂದರ್ಭ ನಡಿಗೆ ನಿಲ್ಲಿಸಿದ್ದೂ ಅಲ್ಲದೆ, ಹೊತ್ತಿಗೆ ಸರಿಯಾಗಿ ತಿನ್ನುತ್ತಿರಲಿಲ್ಲ ಎಂದು ಮೂಲಗಳು ಹೇಳಿವೆ. ಪರಿಣಾಮ ಇದೀಗ ಅನಾರೋಗ್ಯಕ್ಕೆ ಈಡಾಗಿದ್ದಾರೆ.












Click it and Unblock the Notifications