Get Updates
Get notified of breaking news, exclusive insights, and must-see stories!

ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಧೋರಣೆ ಬಿಡುತ್ತಾ ಕಾಂಗ್ರೆಸ್? ದೆಹಲಿ ಸೋಲಿಗೆ ಕಾರಣವೇನು?

ನವದೆಹಲಿ, ಫೆಬ್ರವರಿ 11: ರಾಜಕಾರಣ ಎನ್ನವುದು ಸಂತೆ ಹೊತ್ತಿಗೆ ಮೂರು ಮೊಳ ನೇಯುವುದಲ್ಲ. ನಿರಂತರ ಹೋರಾಟ, ಪಕ್ಷ ಸಂಘಟನೆ ಮತ್ತು ಸರಳತೆ, ಪ್ರಾಮಾಣಿಕತೆ, ಸಜ್ಜನಿಕೆಯಾಗಬೇಕು. ಜನರ ಜೊತೆಗಿದ್ದು ಜನಸ್ನೇಹಿಯಾಗಿ ಕೆಲಸ ಮಾಡುವಂತಿರಬೇಕು. ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನರೊಂದಿಗೆ ಗುರುತಿಸಿಕೊಂಡು ಪಕ್ಷವನ್ನು ಸಂಘಟಿಸುವ ಚತುರತೆ ಹೊಂದಬೇಕು.

ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸೃಷ್ಟಿ ಮಾಡುವುದು ನಿಜವಾದ ರಾಜಕೀಯ. ಅದು ಬಿಟ್ಟು ಚುನಾವಣೆ ಹೊತ್ತಿಗೆ ಬಂದು ಪ್ರಚಾರ ಮಾಡಿ ಯಾರನ್ನೋ ಟೀಕೆ ಮಾಡುವುದರಿಂದ ಪಕ್ಷವನ್ನು ಗೆಲ್ಲಿಸಲು ಸಾಧ್ಯವಿಲ್ಲ. ಇದನ್ನು ಕಾಂಗ್ರೆಸ್ ನಾಯಕರು ಅರಿತುಕೊಂಡಿದ್ದರೆ ದೆಹಲಿ ಚುನಾವಣೆಯಲ್ಲಿ ಠೇವಣಿಕಳೆದುಕೊಳ್ಳುವಷ್ಟರ ಮಟ್ಟಿಗೆ ಹೀನಾಯ ಸೋಲಾಗುತ್ತಿರಲಿಲ್ಲ.

Delhi Assembly Elections 2025 Congress Party s Organizational Failures in Delhi Elections

ಶತಮಾನದ ಇತಿಹಾಸ ಹೊಂದಿದ ಮತ್ತು ದೇಶವನ್ನು ಸುಮಾರು ಆರುವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಆಳಿದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಇವತ್ತು ಹೀನಾಯ ಸ್ಥಿತಿಗೆ ತಲುಪಿದೆ ಎಂದರೆ ಅದಕ್ಕೆ ಕಾರಣ ಏನಿರಬಹುದು ಎಂದು ಯಾವತ್ತಾದರೂ ಕೈನಾಯಕರು ಯೋಚನೆ ಮಾಡಿದ್ದಾರಾ? ಇವತ್ತಿಗೂ ರಾಹುಲ್ ಗಾಂಧಿ ತಪ್ಪು ತಪ್ಪಾಗಿ ನಡೆದುಕೊಂಡರೂ ಅದನ್ನು ತಪ್ಪು ಎಂದು ತಿದ್ದುವ ಧೈರ್ಯ ನಾಯಕರಲ್ಲಿ ಇಲ್ಲದಾಗಿದೆ. ಎಲ್ಲದಕ್ಕೂ ನೀವು ಹೇಳಿದ್ದೇ ಸರಿ ಎಂದು ತಲೆಬಾಗುತ್ತಿರುವುದರಿಂದಲೇ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಶೂನ್ಯ ಸಂಪಾದನೆ ಮಾಡುವಂತಾಗಿದೆ.

ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳು ಹತ್ತಾರು ಇರಬಹುದಾದರೂ ಎಲ್ಲೋ ಒಂದು ಕಡೆ ಕಾರ್ಯಕರ್ತರನ್ನು ಬೆಳೆಸುವ ಮತ್ತು ಪಕ್ಷಸಂಘಟನೆಯಲ್ಲಿ ವಿಫಲವಾಗಿರುವುದು ಪಕ್ಷದ ಸೋಲಿಗೆ ಕಾರಣ ಎಂದರೆ ತಪ್ಪಾಗಲಾರದು. ಇದು ದೆಹಲಿ ಮಾತ್ರವಲ್ಲದೆ ಇತರೆ ರಾಜ್ಯಗಳಲ್ಲಿಯೂ ಇದು ಮುಂದುವರೆಯುತ್ತಿದೆ. ಇವತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದೆ ಎನ್ನುವುದಾದರೆ ಅದು ಸೋನಿಯಾಗಾಂಧಿಯಿಂದಾಗಲೀ, ರಾಹುಲ್ ಗಾಂಧಿಯಿಂದಾಗಲೀ ಅಥವಾ ಇನ್ನಿತರ ಕೇಂದ್ರದ ನಾಯಕರಿಂದ ಅಲ್ಲ ಅದು ರಾಜ್ಯ ನಾಯಕರಿಂದಲೇ ಎನ್ನುವುದು ಹಗಲಿನಷ್ಟೆ ಸತ್ಯ.

ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿರುವುದು ಯಾರಿಂದ?

ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಒಲಿಸಿಕೊಳ್ಳಲು ಬೇಕಾದರೆ ರಾಜ್ಯ ನಾಯಕರು ನಿಮ್ಮಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ ಎಂದು ಹೇಳಿಕೊಳ್ಳಬಹುದು. ಅಷ್ಟೇ ಅಲ್ಲದೆ ತುಂಬಿದ ಸಭೆಯಲ್ಲಿ ಪ್ರಿಯಾಂಕ ವಾದ್ರಾರನ್ನು ಕಿತ್ತೂರು ರಾಣಿ ಚೆನ್ನಮ್ಮನಿಗೂ ಹೋಲಿಸಬಹುದು. ಆದರೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಂದ ಪಕ್ಷ ಗಟ್ಟಿಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಅದರಲ್ಲೂ ಡಿ.ಕೆ.ಶಿವಕುಮಾರ್ ಅವರ ಶ್ರಮ, ತಂತ್ರ ಮತ್ತು ಪಕ್ಷ ಸಂಘಟನೆಯ ವೈಖರಿ ಕಾಂಗ್ರೆಸ್ ಗೆಲುವಿಗೆ ಸಾಕ್ಷಿಯಾಗಿದೆ.

Delhi Assembly Elections 2025 Congress Party s Organizational Failures in Delhi Elections

ಮೇಕೆದಾಟು ಪಾದಯಾತ್ರೆ ಮೂಲಕ ಸೋತು ಮನೆ ಸೇರಿದ್ದ ಕಾಂಗ್ರೆಸ್ ನಾಯಕರನ್ನು ಎಳೆದು ತಂದು ಒಗ್ಗೂಡಿಸಿ ಪಕ್ಷದ ತಾಕತ್ತು ಏನು ಎಂಬುದನ್ನು ಅಂದಿನ ಬಿಜೆಪಿ ಸರ್ಕಾರಕ್ಕೆ ತೋರಿಸಿಕೊಟ್ಟವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್. ಒಕ್ಕಲಿಗ ನಾಯಕರನ್ನು ಒಗ್ಗೂಡಿಸಿ, ಒಕ್ಕಲಿಗ ಮತಗಳನ್ನು ಕಲೆಹಾಕಿ ಒಕ್ಕಲಿಗ ಶಕ್ತಿಯನ್ನು ಕಾಂಗ್ರೆಸ್ ನೀಡಿದವರು ಕೂಡ ಅವರೇ.. ಒಂದು ವೇಳೆ ಡಿ.ಕೆ.ಶಿವಕುಮಾರ್ ಅವತ್ತು ಅಂತಹದೊಂದು ಸಾಹಸದ ಕಾರ್ಯವನ್ನು ಮಾಡದ್ದೇ ಹೋಗಿದ್ದರೆ ಇವತ್ತು ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಸಾಧ್ಯವಾಗುತ್ತಿರಲಿಲ್ಲವೇನೋ?

ದೇಶದಲ್ಲಿ ಕಾಂಗ್ರೆಸ್‌ನಿಂದ ಪಕ್ಷ ಸಂಘಟನೆ ನಡೆಯುತ್ತಿಲ್ಲ

ದುರಂತ ಏನೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಿದಂತೆ ದೇಶದಲ್ಲಿ ಸಂಘಟನೆ ಮಾಡುವುದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ವಿಫಲರಾಗಿದ್ದಾರೆ. ಪರಿಣಾಮ ಪ್ರತಿ ಚುನಾವಣೆಯಲ್ಲಿ ಸೋಲು ಕಾಣುವಂತಾಗಿದೆ. ಕೇವಲ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿಕೊಂಡು ಓಡಾಡುವುದೇ ಗೆಲುವಿನ ತಂತ್ರ ಎಂದು ತಪ್ಪಾಗಿ ಭಾವಿಸಲಾಗಿದೆ ಮತ್ತು ಅಷ್ಟಕ್ಕೆ ಸೀಮಿತರಾಗಿ ಪಕ್ಷ ಸಂಘಟಿಸುವ ಕೆಲಸಕ್ಕೆ ಮುಂದಾಗದಿರುವುದು ಸೋಲಿಗೆ ಕಾರಣವಾಗುತ್ತಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ನಿಂದ ಪಕ್ಷ ಸಂಘಟಿಸುವ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿವೆಯಾ? ಎಂದರೆ ಇಲ್ಲ ಎಂದೇ ಉತ್ತರ ಬರುತ್ತಿದೆ. ಇದರಿಂದಲೇ ಸೋಲುಗಳ ಸರಮಾಲೆ ಪಕ್ಷವನ್ನು ಸುತ್ತಿಕೊಳ್ಳುತ್ತಲೇ ಹೋಗುತ್ತಿದೆ.

ರಾಜಕಾರಣದಲ್ಲಿ ಟೀಕೆಗಳು, ಆರೋಪಗಳು ಬೇಕೇ ಬೇಕು. ಹಾಗೆಂದು ಕೇವಲ ಟೀಕೆಗಳನ್ನಷ್ಟೆ ಮಾಡಿಕೊಂಡು ಗೆದ್ದೇ ಬಿಡುತ್ತೇವೆ ಎನ್ನುವುದು ಮೂರ್ಖತನವಾಗಿ ಬಿಡುತ್ತದೆ. ಎದುರಿಗಿರುವ ವ್ಯಕ್ತಿಯನ್ನು ಟೀಕೆ ಮಾಡುವ ಮುನ್ನ ತಾನು ಏನು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಅದನ್ನು ಬಿಟ್ಟು ಬಾಯಿಗೆ ಬಂದಿದೆಲ್ಲವನ್ನು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡ ತಕ್ಷಣ ಅವು ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಅದು ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಚೆನ್ನಾಗಿ ಅರ್ಥವಾಗಿದೆ. ಎಲ್ಲೋ ಒಂದು ಕಡೆ, ಹಿಂದುಳಿದ ಮತ್ತು ದಲಿತರು ಕೂಡ ಕಾಂಗ್ರೆಸ್ ನಿಂದ ದೂರ ಹೋದಂತೆ ಭಾಸವಾಗುತ್ತಿದೆ.

Delhi Assembly Elections 2025 Congress Party s Organizational Failures in Delhi Elections

ಕಾಂಗ್ರೆಸ್‌ಗೆ ಎಲ್ಲಿ ಸೋಲಾಗುತ್ತಿದೆ ಎನ್ನುವುದನ್ನು ನೋಡಿದರೆ ಗೆಲುವಿಗೆ ಬೇಕಾಗಿರುವುದು ಪಕ್ಷ ಸಂಘಟನೆ ಎಂಬುದನ್ನು ಕಾಂಗ್ರೆಸ್ ನಾಯಕರು ಮರೆತಿದ್ದಾರೆ. ಬಿಜೆಪಿ ಮತ್ತು ಆರ್ ಎಸ್ ಎಸ್ ನ್ನು ಹೀಯಾಳಿಸಿದರೆ, ಗೆದ್ದು ಬಿಡಬಹುದು ಎಂಬ ಭ್ರಮೆ. ಅದಕ್ಕಿಂತ ಹೆಚ್ಚಾಗಿ ಬಿಜೆಪಿ ಮತ್ತು ಆರ್ ಎಸ್ ಎಸ್ ನ್ನು ತೆಗಳುವ ಭರದಲ್ಲಿ ಬಹುಸಂಖ್ಯಾತ ಹಿಂದೂ ಸಮಾಜಕ್ಕೆ ಅವಮಾನ ಮಾಡುತ್ತಿದ್ದೇವೆ ಎನ್ನುವುದನ್ನು ಮರೆಯುತ್ತಿದ್ದಾರೆ. ಇದರ ಪರಿಣಾಮಗಳು ಚುನಾವಣೆಯಲ್ಲಿ ಗೋಚರಿಸಿದೆ. ಇನ್ನು ಬಿಜೆಪಿಯ ಶತ್ರು ತನ್ನ ಮಿತ್ರ ಎಂಬ ಧೋರಣೆಯೂ ಪಕ್ಷಕ್ಕೆ ನಷ್ಟವಾಗುತ್ತಿದೆ.

ದೇಶದಲ್ಲಿ ಇಂಡಿಕೂಟ ಒಗ್ಗಟ್ಟಾಗಿ ಉಳಿಯುತ್ತಾ?

ಕಳೆದ ಎರಡು ಅವಧಿಯಲ್ಲಿ ದೆಹಲಿಯಲ್ಲಿ ಎಎಪಿ ಅಧಿಕಾರದಲ್ಲಿತ್ತು. ಇದು ಕಾಂಗ್ರೆಸ್ ಗೆ ಖುಷಿ ತಂದಿತ್ತು. ಕಾರಣ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲವಲ್ಲ ಎಂಬ ಸಂತಸವಿತ್ತು. ಹೀಗಾಗಿ ಅಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಹೋಗಲೇ ಇಲ್ಲ. ಬಿಜೆಪಿಯನ್ನು ವಿರೋಧಿಸುವ ಪ್ರಾದೇಶಿಕ ಪಕ್ಷಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಲೋಕಸಭಾ ಚುನಾವಣೆಯಲ್ಲಿ ಗೆದ್ದು ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಬೇಕು ಎಂಬುದಷ್ಟೆ ಕಾಂಗ್ರೆಸ್ ನಾಯಕರ ಗುರಿಯಾಗಿತ್ತು. ಕಳೆದ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ಅದು ಸಾಧ್ಯವಾಗಿತ್ತು. ಆದರೆ ದೆಹಲಿ ಚುನಾವಣೆ ಬಳಿಕ ಎಎಪಿ ಮತ್ತು ಕಾಂಗ್ರೆಸ್ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಎಎಪಿ ಸೋಲಿಗೆ ಕಾಂಗ್ರೆಸ್ ನೇರ ಕಾರಣವಾಗಿದೆ.

ಕಾಂಗ್ರೆಸ್ ನಾಯಕರು ಚುನಾವಣೆ ಬಳಿಕ ದೆಹಲಿ ಕಡೆ ಮುಖ ಮಾಡುವುದಿಲ್ಲ. ಇನ್ನು ಅಧಿಕಾರ ಕಳೆದುಕೊಂಡಿದ್ದರಿಂದ ನೀರಿನಿಂದ ಮೇಲೆತ್ತಿದ ಮೀನಿನಂತ ಸ್ಥಿತಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರದ್ದಾಗಿದೆ. ಮುಂದಿನ ದಿನಗಳಲ್ಲಿ ಪಕ್ಷಸಂಘಟನೆ ಮಾಡಿ ಮತ್ತೆ ಮೇಲೆದ್ದು ಬರುವುದು ಎಎಪಿಗೆ ಅಷ್ಟೊಂದು ಸುಲಭವಲ್ಲ. ಅದಕ್ಕಿಂತ ಹೆಚ್ಚಾಗಿ ಮುಂದಿನ ದಿನಗಳಲ್ಲಿ ಎಎಪಿ ಪಕ್ಷವನ್ನು ಬಿಟ್ಟು ಬಿಜೆಪಿಯತ್ತ ಮುಖ ಮಾಡುವ ನಾಯಕರೆಷ್ಟಿದ್ದಾರೋ ಗೊತ್ತಿಲ್ಲ. ದೆಹಲಿ ಚುನಾವಣೆ ಬಳಿಕ ಇಂಡಿ ಮೈತ್ರಿಕೂಟದ ಪ್ರಾದೇಶಿಕ ಪಕ್ಷಗಳು ಯಾವ ರೀತಿಯ ತೀರ್ಮಾನ ಕೈಗೊಳ್ಳುವ ಮೇಲೆ ಕಾಂಗ್ರೆಸ್‌ನ ಉಳಿವು ನಿಂತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+