Delhi Assembly Election 2025: ದೆಹಲಿಗೆ ಗುಜರಾತ್ ಪೊಲೀಸರ ನಿಯೋಜನೆ, ಕೇಜ್ರಿವಾಲ್ ಗರಂ
ನವದೆಹಲಿ, ಜನವರಿ 27: ದೆಹಲಿ ವಿಧಾನಸಭೆ ಚುನಾವಣೆ-2025ರ ಪ್ರಚಾರ ಜೋರಾಗಿದೆ. ಫೆಬ್ರವರಿ 5ರಂದು 70 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ಚುನಾವಣಾ ಪ್ರಚಾರದ ಜೊತೆಗೆ ರಾಜಕೀಯ ಆರೋಪ ಪ್ರತ್ಯಾರೋಪ ಜೋರಾಗಿದೆ. ಅದರಲ್ಲೂ ಎಎಪಿ, ಬಿಜೆಪಿ ನಡುವಿನ ವಾಕ್ಸಮರ ಹೆಚ್ಚಾಗಿದೆ.
ದೆಹಲಿಯ ಮಾಜಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ದೆಹಲಿ ಚುನಾವಣೆಗೆ ನಿಯೋಜನೆ ಮಾಡಿರುವ ಭದ್ರತಾ ಸಿಬ್ಬಂದಿಗಳ ವಿರುದ್ಧ ಪ್ರಶ್ನೆಯನ್ನು ಎತ್ತಿದ್ದಾರೆ. ಪಂಜಾಬ್ ಪೊಲೀಸರನ್ನು ವಾಪಸ್ ಕಳಿಸಿ, ಗುಜರಾತ್ ಪೊಲೀಸರನ್ನು ಭದ್ರತೆಗೆ ಏಕೆ ನಿಯೋಜನೆ ಮಾಡಿರುವುದು? ಎಂದು ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ. ಕೇಜ್ರಿವಾಲ್ ಪ್ರಶ್ನೆಗೆ ಪೊಲೀಸರು, ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ ದೆಹಲಿ ಚುನಾವಣೆ ಭದ್ರತೆಗೆ 200 ತುಕಡಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇದರಲ್ಲಿ ಸಿಆರ್ಪಿಎಫ್, ಬಿಎಸ್ಎಫ್, ಎಸ್ಎಸ್ಬಿ, ಐಟಿಬಿಪಿ, ಸಿಐಎಸ್ಎಫ್ ಮತ್ತು ಆರ್ಪಿಎಫ್ ಸೇರಿದೆ. ಅಲ್ಲದೇ 70 ತುಕಡಿಗಳನ್ನು ರಾಜಸ್ಥಾನ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಕರ್ನಾಟಕ, ಚಂಡೀಗಢ್ ಮತ್ತು ಹಿಮಾಚಲ ಪ್ರದೇಶದಿಂದ ಕರೆಸಿಕೊಳ್ಳಲಾಗಿದೆ. ಇದರ ಜೊತೆಗೆ 7-8 ತುಕಡಿಗಳು ಗುಜರಾತ್ನಿಂದ ಸಹ ಭದ್ರತೆಗೆ ನಿಯೋಜನೆಗೊಳ್ಳಲಿವೆ.
ಪೊಲೀಸರ ಸ್ಪಷ್ಟನೆ: ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಆರೋಪಕ್ಕೆ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದಾರೆ. ಫೆಬ್ರವರಿ 5ರಂದು ದೆಹಲಿಯಲ್ಲಿ ಮತದಾನವಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಿವಿಧ ರಾಜ್ಯಗಳಿಂದ ತುಕಡಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದೆ.
ಬೇಡಿಕೆಯ ಆಧಾರದ ಮೇಲೆಯೇ ತುಕಡಿಗಳನ್ನು ಕರೆಸಲಾಗಿದೆ. ಇದರಲ್ಲಿ ಕೇವಲ ಗುಜರಾತ್ ರಾಜ್ಯದ ತುಕಡಿಗಳಿಲ್ಲ. ಚುನಾವಣಾ ಆಯೋಗದ ಸೂಚನೆಯಂತೆ ಹಂತ ಹಂತವಾಗಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಈ ತುಕಡಿಗಳನ್ನು ಮತಗಟ್ಟೆಗಳ ಭದ್ರತೆಯಿಂದ ಚೆಕ್ಪೋಸ್ಟ್ ಭದ್ರತೆಯ ತನಕ ವಿವಿಧ ಹಂತಕ್ಕೆ ನಿಯೋಜನೆ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ರೈತರ ಪ್ರತಿಭಟನೆಗಳು ನಡೆಯುತ್ತಿವೆ. ಆದ್ದರಿಂದ ದೆಹಲಿಗೆ ಅಕ್ಕಪಕ್ಕದ ರಾಜ್ಯಗಳ ಪೊಲೀಸ್ ಪಡೆಯನ್ನು ಕರೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಗುಜರಾತ್ನ ಪಡೆಗಳನ್ನು ಕರೆಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಗುಜರಾತ್ನ ಎಸ್ಪಿಆರ್ಎಫ್ ಪಡೆಯನ್ನು ದೆಹಲಿ ಚುನಾವಣೆಗೆ ನಿಯೋಜನೆ ಮಾಡಲಾಗಿದೆ. ಈ ಕುರಿತು ಕೇಜ್ರಿವಾಲ್ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಪಂಜಾಬ್ ಡಿಜಿಪಿ ಗೌರವ್ ಯಾದವ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಚುನಾವಣಾ ಸಮಯದಲ್ಲಿ ತುಕಡಿಗಳ ನಿಯೋಜನೆ ಸಾಮಾನ್ಯ ಸಂಗತಿಯಾಗಿದೆ, ಈ ಕುರಿತು ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದ್ದಾರೆ.
ಅರವಿಂದ ಕೇಜ್ರಿವಾಲ್ ಆರೋಪಕ್ಕೆ ಗುಜರಾತ್ ಗೃಹ ಸಚಿವ ಹರ್ಷಾ ಸಾಂಘ್ವಿ ತಿರುಗೇಟು ನೀಡಿದ್ದಾರೆ. "ಕೇಜ್ರಿವಾಲ್ ರಾಜ್ಯವೊಂದರ ಮಾಜಿ ಮುಖ್ಯಮಂತ್ರಿ. ಚುನಾವಣಾ ನಿಯಮಗಳು, ಚುನಾವಣಾ ಆಯೋಗದ ನಿಯಮಗಳನ್ನು ಅವರು ಇನ್ನೂ ಸಹ ತಿಳಿದುಕೊಂಡಿಲ್ಲ ಎಂದರೆ ರಾಜ್ಯದ ಆಡಳಿತವನ್ನು ಅವರು ಹೇಗೆ ನಡೆಸುತ್ತಾರೆ?" ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications