ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಗೆ ಭೇಟಿ ನೀಡಲಿದ್ದಾರೆ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್
ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ದೆಹಲಿ ಹೊರಗಿನ ತಮ್ಮ ಮೊದಲ ಭೇಟಿ ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಗೆ ನೀಡಲಿದ್ದಾರೆ. ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಅಲ್ಲಿನ ಭದ್ರತಾ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಈ ಭೇಟಿ ವೇಳೆ ರಕ್ಷಣಾ ಸಚಿವರ ಜತೆಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ರಕ್ಷಣಾ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಇರಲಿದ್ದಾರೆ.
ಈ ಬಗ್ಗೆ ಸರಕಾರದ ಮೂಲಗಳು ಖಚಿತ ಪಡಿಸಿವೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಿಯಾಚಿನ್ ನಲ್ಲಿ ಹೇಗೆ ಸೇನೆಯು ವಾಯು ಬಲದ ನೆರವಿನೊಂದಿಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ರಾಜನಾಥ್ ಸಿಂಗ್ ಅವರಿಗೆ ವಿವರಣೆ ನೀಡಲಾಗುತ್ತದೆ. ನಾರ್ಥನ್ ಆರ್ಮಿ ಕಮ್ಯಾಂಡರ್ ಲೆ. ಜನರಲ್ ರಣ್ಬೀರ್ ಸಿಂಗ್, 14 ಕಾರ್ಪ್ಸ್ ಕಮ್ಯಾಂಡರ್ ಮತ್ತು ಕಾರ್ಗಿಲ್ ಯುದ್ಧದ 'ಹೀರೋ' ಲೆ.ಜನರಲ್ ವೈ.ಕೆ.ಜೋಶಿ ಅವರು ಭದ್ರತಾ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.
ಸಮುದ್ರ ಮಟ್ಟಕ್ಕಿಂತ ಇಪ್ಪತ್ಮೂರು ಸಾವಿರ ಅಡಿ ಎತ್ತರದಲ್ಲಿ ಇರುವ ಈ ಪ್ರದೇಶದಲ್ಲಿ ಉಸಿರಾಟ ನಡೆಸುವುದೂ ಕಷ್ಟ. ಅಂಥ ಸ್ಥಳದಲ್ಲಿ ಭಾರತೀಯ ಸೇನೆಯು ಬ್ರಿಗೇಡ್ ಅನ್ನು ನೇಮಿಸಿದೆ. ಯುಪಿಎ ಆಡಳಿತದ ಮೊದಲ ಅವಧಿಯಲ್ಲಿ ಈ ಸ್ಥಳದಲ್ಲಿ ಸೇನೆ ನಿಯೋಜನೆ ಬೇಡ ಎಂದು ಹೇಳಲಾಗಿತ್ತು.

ಆದರೆ, ಮೂವತ್ತೈದು ವರ್ಷಗಳಿಂದ ಭಾರತೀಯ ಸೇನೆ ಇಲ್ಲಿ ಸಕ್ರಿಯವಾಗಿದೆ. ಆಪರೇಷನ್ ಮೇಘದೂತ್ ಮೂಲಕ ಸಿಯಾಚಿನ್ ವಶಪಡಿಸಿಕೊಳ್ಳಲಾಯಿತು. ಸೇನೆ ಯೋಧರ ಸಂಖ್ಯೆಯನ್ನು ದ್ವಿಗುಣ ಮಾಡಲಾಯಿತು. ಅಂದಹಾಗೆ ರಕ್ಷಣಾ ಸಚಿವರು ಸಿಯಾಚಿನ್ ಸುತ್ತಮುತ್ತಲ ಪ್ರದೇಶಗಳಿಗೂ ಭೇಟಿ ನೀಡಲಿದ್ದಾರೆ.
ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಾಜ್ ನಾಥ್ ಸಿಂಗ್, ಸದ್ಯಕ್ಕೆ ನಡೆಯುತ್ತಿರುವ ಯೋಜನೆಗಳ ಬಗ್ಗೆ ವಿವಿಧ ಇಲಾಖೆ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಸೇನೆಯ ಆಧುನೀಕರಣಕ್ಕಾಗಿ ನಿಗದಿತ ಅವಧಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.












Click it and Unblock the Notifications