ಚಂಡಮಾರುತ ಭೀತಿ: ತಮಿಳುನಾಡು, ಪುದುಚೆರಿಗೆ ಪ್ರಧಾನಿ ಮೋದಿ ಭರವಸೆ
ನವದೆಹಲಿ, ನವೆಂಬರ್ 24: ನಿವಾರ್ ಚಂಡಮಾರುತವು ತಮಿಳುನಾಡು ಮತ್ತು ಪುದುಚೆರಿಯನ್ನು ಆವರಿಸುತ್ತಿದ್ದು, ಮುಂದಿನ ಮೂರು ದಿನ ಭಾರಿ ಮಳೆ ಗಾಳಿಯ ಅನಾಹುತ ಸಂಭವಿಸುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಜನರ ರಕ್ಷಣೆಗೆ ಮತ್ತು ಹಾನಿ ಪ್ರಮಾಣ ತಗ್ಗಿಸಲು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಭಾರಿ ಪ್ರಮಾಣದಲ್ಲಿ ಗಾಳಿ ಸಹಿತ ಮಳೆ ಸುರಿಯುವ ಸಂಭವ ಇರುವುದರಿಂದ ತಮಿಳುನಾಡು ಮತ್ತು ಪುದುಚೆರಿಯ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದು, ಕೇಂದ್ರ ಸರ್ಕಾರದಿಂದ ಎಲ್ಲ ಅಗತ್ಯ ನೆರವು ಒದಗಿಸುವ ಭರವಸೆ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
'ನಿವಾರ್ ಸೈಕ್ಲೋನ್ನ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಇ ಪಳನಿಸ್ವಾಮಿ ಮತ್ತು ಪುದುಚೆರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರೊಂದಿಗೆ ಪರಿಸ್ಥಿತಿಯ ಕುರಿತು ಮಾತುಕತೆ ನಡೆಸಿದ್ದೇನೆ. ಕೇಂದ್ರದಿಂದ ಎಲ್ಲ ಸಾಧ್ಯ ನೆರವುಗಳನ್ನು ನೀಡುವ ಭರವಸೆ ಕೊಟ್ಟಿದ್ದೇನೆ. ಹಾನಿಗೊಳಗಾಗುವ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆ ಮತ್ತು ಒಳಿತಿಗಾಗಿ ಪ್ರಾರ್ಥಿಸುತ್ತೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ಬೆಳಿಗ್ಗೆ ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ, ನಿವಾರ್ ಚಂಡಮಾರುತವು ತನ್ನ ಗಾಳಿಯ ರಭಸವನ್ನು ಹೆಚ್ಚಿಸಿದ್ದು, ಬುಧವಾರ ಸಂಜೆ ವೇಳೆಗೆ ತಮಿಳುನಾಡು ಮತ್ತು ಪುದುಚೆರಿ ನಡುವೆ ಸಾಗಲಿದೆ ಎಂದು ಹೇಳಿದೆ. ಇದರಿಂದ ತಮಿಳುನಾಡಿನ ಕರಾವಳಿ, ಪುದುಚೆರಿಗಳಲ್ಲಿ ಎಡೆಬಿಡದೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ.












Click it and Unblock the Notifications