Cyclone Mocha: ಮೋಚಾ ಚಂಡಮಾರುತ, ಈ ರಾಜ್ಯಗಳಲ್ಲಿ ತೀವ್ರ ಮಳೆ
ಬಂಗಾಳಕೊಲ್ಲಿಯಲ್ಲಿ ತೀವ್ರವಾದ ಮೋಚಾ ಚಂಡಮಾರುತವು ಭಾರತದ ಹಲವಾರು ಪ್ರದೇಶಗಳ ಮೇಲೆಯೂ ಪ್ರಭಾವ ಉಂಟು ಮಾಡಿದೆ. ಪ್ರಮುಖವಾಗಿ ಬಾಂಗ್ಲಾದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಭಾರತದ ಪಶ್ಚಿಮ ಬಂಗಾಳದ ಮೇಲೆಯೂ ಈ ಚಂಡಮಾರುತ ಪ್ರಭಾವ ಬೀರಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಒಟ್ಟಾಗಿ 8 ರಕ್ಷಣಾ ತಂಡವನ್ನು ಪಶ್ಚಿಮ ಬಂಗಾಳದ ದಿಘಾದಲ್ಲಿ ನಿಯೋಜಿಸಿದೆ.
ಭಾರತದ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಇದು ಅತೀ ತೀವ್ರವಾದ ಚಂಡಮಾರುತವಾಗಿದೆ. ಬಂಗಾಳದ ಮೇಲೆ ಈ ಚಂಡಮಾರುತವು ಭಾರೀ ಪ್ರಭಾವ ಉಂಟು ಮಾಡಲಿದೆ. "ಬಾಂಗ್ಲಾದೇಶದ ಉತ್ತರ ಭಾಗವನ್ನು ಮತ್ತು ಮಯನ್ಮಾರ್ನ ದಕ್ಷಿಣ ಕರಾವಳಿ ಭಾಗವನ್ನು ಈ ಚಂಡಮಾರುತವು ಕಾಕ್ಸ್ ಬಜಾರ್ (ಬಾಂಗ್ಲಾದೇಶ) ಮತ್ತು ಕ್ಯೌಕ್ಪಿಯು (ಮಯನ್ಮಾರ್) ಮೂಲಕ ಮೇ 14ರಂದು ದಾಟಲಿದೆ," ಎಂದು ಐಎಂಡಿ ಅಂದಾಜು ಮಾಡಿದೆ.

ಭಾರತದಲ್ಲಿ ಯಾವೆಲ್ಲ ರಾಜ್ಯಗಳಲ್ಲಿ ತೀವ್ರ ಮಳೆ?
ಅಂಡಮಾನ್ ಮತ್ತು ನಿಕೋಬರ್ ದ್ವೀಪ: ಭಾರತದ ದ್ವೀಪ ಪ್ರದೇಶವಾದ, ಕೇಂದ್ರಾಡಳಿತ ಪ್ರದೇಶ ಅಂಡಮಾನ್ ಮತ್ತು ನಿಕೋಬರ್ ದ್ವೀಪದಲ್ಲಿ ಮೇ 13ರಂದು ತೀವ್ರ, ಗುಡುಗು ಮಿಂಚು ಸಹಿತ ಮಳೆಯಾಗಲಿದೆ.
ತ್ರಿಪುರಾ & ಮಿಜೋರಾಂ: ಮೇ 13ರಂದು ಹಲವಾರು ಪ್ರದೇಶಗಳಲ್ಲಿ ತೀವ್ರ ಮಳೆಯಾಗಲಿದೆ ಮತ್ತು ಮೇ 14ರಂದು 13ರಂದು ಸುರಿದ ಮಳೆಗಿಂತ ಅಗಾಧ ಪ್ರಮಾಣದಲ್ಲಿ ಮಳೆಯಾಗಲಿದೆ.
ನಾಗಾಲ್ಯಾಂಡ್, ಮಣಿಪುರ & ದಕ್ಷಿಣ ಅಸ್ಸಾಂ: ಮೇ 14ರಂದು ನಾಗಾಲ್ಯಾಂಡ್, ಮಣಿಪುರ & ದಕ್ಷಿಣ ಅಸ್ಸಾಂ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ.
ಮಯನ್ಮಾರ್ನಲ್ಲಿ ಸಾವಿರಾರು ಜನರ ಸ್ಥಳಾಂತರ
ಮೇ 14ರಂದು ಮಯನ್ಮಾರ್ ಮೇಲೆ ಮೋಚಾ ಚಂಡಮಾರುತವು ತೀವ್ರ ಪ್ರಭಾವ ಉಂಟು ಮಾಡಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆಗಳು ಮಾಹಿತಿ ನೀಡಿದೆ. ಈ ಬೆನ್ನಲ್ಲೇ ಮಯನ್ಮಾರ್ನಲ್ಲಿ ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ಕರ್ನಾಟಕದಲ್ಲಿ ಹವಾಮಾನ ಹೇಗಿದೆ?
ಕರಾವಳಿಯ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಪ್ರಮುಖವಾಗಿ ಪುತ್ತೂರು, ಮಾಣಿ, ಕೃಷ್ಣರಾಜಸಾಗರ, ಬಾಳೆಹೊನ್ನೂರು, ಉಡುಪಿ, ಶಿವಮೊಗ್ಗ, ಮಂಗಳೂರಯ, ಹೊಸಕೋಡೆ, ಮದ್ದೂರು, ಟಿ ನರಸೀಪುರ, ವಿರಾಜಪೇಟೆ, ಶ್ರೀರಂಗಪಟ್ಟಣ, ಬಂಕಾಪುರ, ರಾಮನಗರ ಮೊದಲಾದ ಪ್ರದೇಶದಲ್ಲಿ ಮಳೆಯಾಗಿದೆ.
ಇನ್ನು ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ, ಧಾರವಾಡ, ಗದಗ, ಹಾವೇರಿ, ಬೆಳಗಾವಿಯಲ್ಲಿ ಮಳೆಯಾಗಲಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ. ಆದರೆ ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ ಎಂದು ತಿಳಿಸಿದೆ.












Click it and Unblock the Notifications