150 ಕಿ.ಮೀ. ವೇಗದಲ್ಲಿ ಮುನ್ನುಗ್ಗುತ್ತಿದೆ ಭೀಕರ ಚಂಡಮಾರುತ!
ಅಹಮದಾಬಾದ್: ಗುಜರಾತ್ ಕರಾವಳಿಯಲ್ಲಿ 'ಬಿಪರ್ಜಾಯ್' ಅಬ್ಬರ ಕ್ಷಣ ಕ್ಷಣಕ್ಕೂ ಭೀಕರವಾಗುತ್ತಿದೆ. ಚಂಡಮಾರುತ ಗುಜರಾತ್ನ ಕರಾವಳಿ ಭಾಗಕ್ಕೆ ಅಪ್ಪಳಿಸಲು ಕ್ಷಣಗಣನೆ ಶುರುವಾಗಿದ್ದು, ಜನ ನಲುಗಿದ್ದಾರೆ. ಅದ್ರಲ್ಲೂ 150 ಕಿ.ಮೀ ವೇಗದಲ್ಲಿ ಮುನ್ನುಗ್ಗುತ್ತಿರುವ ಚಂಡಮಾರುತ ವಿನಾಶ ಸೃಷ್ಟಿಸುವುದು ಬಹುತೇಕ ಪಕ್ಕಾ. ಹೀಗಾಗಿ ಗೃಹ ಸಚಿವ ಅಮಿತ್ ಶಾ ಗುಜರಾತ್ನಲ್ಲೇ ಮೊಕ್ಕಾಂ ಹೂಡಿದ್ದಾರೆ.
ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ನಾಳೆ ಬೆಳಗ್ಗೆ ಅಂದರೆ ಜೂನ್ 15ರ ಬೆಳಗ್ಗೆ ಸೈಕ್ಲೋನ್ ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆ. ಕಛ್ ಜಿಲ್ಲೆಯ ಜಖೌ ಬಂದರು ಪ್ರದೇಶದ ಬಳಿ ಚಂಡಮಾರುತ ನೆಲಕ್ಕೆ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ, ಕರಾವಳಿ ಭಾಗದಲ್ಲಿನ 50 ಸಾವಿರ ಜನರನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇದರ ಜೊತೆಗೆ ತೀವ್ರ ಸ್ವರೂಪದ ಸುಳಿಗಾಳಿಯಾಗಿ ರೂಪುಗೊಂಡಿರುವ 'ಬಿಪರ್ಜಾಯ್' ಚಂಡಮಾರುತವು ಗಂಟೆಗೆ ಸುಮಾರು 150 ಕಿ.ಮೀ. ವೇಗದಲ್ಲಿ ಮುನ್ನುಗ್ಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ (Cyclone Biparjoy).

ಕರವಾಳಿ ಪ್ರದೇಶದಲ್ಲಿ ಭಯ ಭಯ
'ಬಿಪರ್ಜಾಯ್' ಹೊಡೆತದಿಂದ ಪಾರಾಗಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ ಕೇಂದ್ರ ಸರ್ಕಾರ. ಅದರಲ್ಲೂ ಗುಜರಾತ್ಗೆ ಭಾರಿ ಪ್ರಮಾಣದ ನೆರವು ನೀಡಲಾಗಿದೆ. ಅಲ್ಲಿ ಯಾವುದೇ ರೀತಿಯ ಅಪಾಯ ಸಂಭವಿಸದ ಹಾಗೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಅಲ್ಲದೆ ಅರಬ್ಬಿ ಸಮುದ್ರದಲ್ಲಿ ಅಬ್ಬರ ಉಂಟು ಮಾಡಿರುವ ಚಂಡಮಾರುತ, ಬುಧವಾರ ಗುಜರಾತ್ನ ಕಛ್ ಪ್ರದೇಶ, ಪಾಕಿಸ್ತಾನದ ದಕ್ಷಿಣದತ್ತ ತಿರುಗುವ ಮುನ್ಸೂಚನೆ ನೀಡಿತ್ತು. ಈ ಹಂತದಲ್ಲಿ ಸ್ವಲ್ಪ ದುರ್ಬಲಗೊಂಡಂತೆ ಕಂಡರೂ ಬಿರುಗಾಳಿ, ಭಾರಿ ಮಳೆ ಅಪಾಯ ಇದ್ದೇ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮಧ್ಯೆ ಚಂಡಮಾರುತ ಮತ್ತಷ್ಟು ಭೀಕರವಾಗುತ್ತಿದೆ.
90 ಮೀಟರ್ ಗೋಪುರ ನೆಲಸಮ
ಗುಜರಾತ್ನ ದ್ವಾರಕಾದ 90 ಮೀಟರ್ ಎತ್ತರದ ಪ್ರಸರಣ ಗೋಪುರ ನೆಲಸಮಗೊಳಿಸಿದ್ದಾಗಿ ಆಕಾಶವಾಣಿ ಮಾಹಿತಿ ನೀಡಿದೆ. ಚಂಡಮಾರುತ ನಾಳೆ ಬೆಳಗ್ಗೆ ಅಪ್ಪಳಿಸುವ ನಿರೀಕ್ಷೆ ಇದೆ. ಹೀಗಾಗಿ ಆಸ್ತಿ-ಪಾಸ್ತಿ ಸೇರಿದಂತೆ ಜೀವ ಹಾನಿ ತಡೆಯುವ ಸಲುವಾಗಿ ಕ್ರಮ ಕೈಗೊಳ್ಳಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಗೋಪುರ ನೆಲಸಮಗೊಳಿಸುವಂತೆ ಸೂರತ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಪ್ರಸಾರ ಭಾರತಿಗೆ ಜನವರಿಯಲ್ಲಿ ಶಿಫಾರಸು ಮಾಡಿತ್ತು ಎನ್ನಲಾಗಿದೆ. ಇನ್ನೂ ಹಲವು ಕ್ರಮ ಕೈಗೊಂಡು ಚಂಡಮಾರುತದ ಪರಿಸ್ಥಿತಿ ಹಾಗೂ ನಂತರದ ಪರಿಸ್ಥಿತಿ ನಿಭಾಯಿಸಲು ಗುಜರಾತ್ ಸಜ್ಜಾಗಿದೆ. ಆದರೆ ವಾತಾವರಣ ಪ್ರತಿ ಕ್ಷಣಕ್ಕೂ ಭೀಕರವಾಗುತ್ತಿದೆ.

ಏನೆಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ?
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜೂನ್ 15ರ ಸಂಜೆ ಹೊತ್ತಿಗೆಲ್ಲಾ 'ಬಿಪರ್ಜಾಯ್' ಚಂಡಮಾರುತ ಗುಜರಾತ್ಗೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಎನ್ಡಿಆರ್ಎಫ್ನ 18, ಎಸ್ಡಿಆರ್ಎಫ್ನ 13 ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. 45,000 ಮಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರದ ಬಳಿ ಯಾರನ್ನೂ ಬಿಡುತ್ತಿಲ್ಲ. ಗುಜರಾತ್ ಮಾತ್ರವಲ್ಲದೆ ಅರಬ್ಬಿ ಸಮುದ್ರದ ಕರಾವಳಿಯ ಹಲವು ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇರಲಿದೆ. ಹೀಗಾಗಿ ಮುಂದಿನ ಕೆಲವು ದಿನಗಳ ಕಾಲ ಸಮುದ್ರದ ಬಳಿ ಯಾರೂ ಸುಳಿಯದಂತೆ ನೋಡಿಕೊಳ್ಳಲಾಗುತ್ತಿದೆ.
ಪಾಕಿಸ್ತಾನಕ್ಕೂ ಕಾದಿದೆ ಮಹಾ ಕಂಟಕ
ಇಷ್ಟೆಲ್ಲಾ ಭೀತಿಯ ನಡುವೆ ಗುಜರಾತ್ ಕರಾವಳಿಯಲ್ಲಿ ಭೀಕರ ಗಾಳಿ, ಅಲೆಗಳು ಬೀಸುತ್ತಿವೆ. ಹೀಗಾಗಿ ಗುಜರಾತ್ ರಾಜ್ಯದ 6 ಜಿಲ್ಲೆಗಳಲ್ಲಿ ಈ ಚಂಡಮಾರುತ ವಿನಾಶ ಉಂಟುಮಾಡುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ಅಲರ್ಟ್ ನೀಡಿದೆ ಹವಾಮಾನ ಇಲಾಖೆ. ಇದರ ಜೊತೆ ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಓಡಾಟ ರದ್ದುಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗುಜರಾತ್ನ ಪೋರಬಂದರ್, ಗಿರ್ ಸೋಮನಾಥ್ ಮತ್ತು ವಲ್ಸಾದ್ ಜಿಲ್ಲೆಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡ ರವಾನಿಸಲಾಗಿದೆ. ಪಾಕಿಸ್ತಾನದ ಸಿಂಧ್ ಮತ್ತು ಬಲೂಚಿಸ್ತಾನದ ಜನರಿಗೂ ಅಲ್ಲಿನ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.












Click it and Unblock the Notifications