ರಾಜಸ್ಥಾನದಲ್ಲಿ ಭಾರೀ ಮಳೆ: ಆಸ್ಪತ್ರೆಗಳು ಜಲಾವೃತ, 30 ಜನರ ರಕ್ಷಣೆ; ಬುಧವಾರದ ವೇಳೆಗೆ ಬಿಡುವು ಸಾಧ್ಯತೆ
ಜೈಪುರ, ಜೂನ್. 19: ಗುಜರಾತ್ನಿಂದ ರಾಜಸ್ಥಾನಕ್ಕೆ ಅಪ್ಪಳಿಸಿರುವ ಬಿಪಾರ್ಜೋಯ್ ಚಂಡಮಾರುತದ ಕಾರಣ ರಾಜಸ್ಥಾನದಲ್ಲಿ ಮಳೆಯ ಅಬ್ಬರ ಉಂಟಾಗಿದೆ. ವರುಣನ ಆರ್ಭಟ ಕಡಿಮೆಯಾಗದ ಕಾರಣ ಅಜ್ಮೀರ್ನ ಸರ್ಕಾರಿ ಆಸ್ಪತ್ರೆ ಮುಳುಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಪಾಲಿ ಮತ್ತು ಜಲೋರ್ ಜಿಲ್ಲೆಗಳಲ್ಲಿ ಮಳೆಗೆ ಸಿಲುಕಿದ್ದ ಸುಮಾರು 30 ಜನರನ್ನು ರಕ್ಷಿಸಲಾಗಿದೆ.
ಜೂನ್ 15 ರಂದು ನೆರೆಯ ಗುಜರಾತ್ನಲ್ಲಿ ಭೂಕುಸಿತವನ್ನು ಉಂಟುಮಾಡಿದ ಬಿಪರ್ಜಾಯ್ ಚಂಡಮಾರುತ ರಾಜಸ್ಥಾನದ ಕೆಲವು ಭಾಗಗಳಿಗೆ ಅಪ್ಪಳಿಸಿದೆ. ಈ ಕಾರಣದಿಂದ ರಾಜ್ಯದ ಕೆಲವು ಕಡೆ ಭಾರೀ ಮಳೆಯಾಗುತ್ತಿದ್ದರೇ, ಮತ್ತೆ ಕೆಲವೆಡೆ ಬಿರುಗಾಳಿ ಸಹಿತ ಮಳೆಗೆ ಜನ ಜೀವನ ಅಸ್ಥವ್ಯಸ್ತವಾಗಿದೆ. ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ, ಈಗ ಚಂಡಮಾರುತವು ಕೇಂದ್ರ ಮತ್ತು ಪಶ್ಚಿಮ ಭಾಗಗಳಿಂದ ಮರುಭೂಮಿಯ ಪೂರ್ವ ಭಾಗದ ಕಡೆಗೆ ಚಲಿಸಿದೆ.

ಜಲೋರ್, ಸಿರೋಹಿ, ಬಾರ್ಮರ್ ಮತ್ತು ಪಾಲಿ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ ಮತ್ತು ಹಲವಾರು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಗ್ಗು ಪ್ರದೇಶದ ಹಲವು ಮನೆಗಳಿಗೂ ನೀರು ನುಗ್ಗಿದೆ. ಭಾನುವಾರ ರಾತ್ರಿ ಪಾಲಿ ಮತ್ತು ಜಾಲೋರ್ನ ವಿವಿಧ ಸ್ಥಳಗಳಿಂದ ಸುಮಾರು 30 ಜನರನ್ನು ರಕ್ಷಿಸಲಾಗಿದೆ ಎಂದು ವಿಪತ್ತು ನಿರ್ವಹಣೆ ಮತ್ತು ಪರಿಹಾರ ಇಲಾಖೆ ಕಾರ್ಯದರ್ಶಿ ಪಿ ಸಿ ಕಿಶನ್ ತಿಳಿಸಿದ್ದಾರೆ.
ಅಜ್ಮೀರ್ನಲ್ಲಿ ಭಾನುವಾರ ಮಧ್ಯಾಹ್ನ ಮಳೆ ನೀರು ಜೆಎಲ್ಎನ್ ಆಸ್ಪತ್ರೆಗೆ ನುಗ್ಗಿದೆ. ಜೆಎಲ್ಎನ್ ಆಸ್ಪತ್ರೆಯ ಅಧೀಕ್ಷಕ ಡಾ.ನೀರಜ್ ಮಾತನಾಡಿ, ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗಕ್ಕೆ ನೀರು ನುಗ್ಗಿದ್ದು, ಅಲ್ಲಿ ದಾಖಲಾಗಿದ್ದ 18 ರೋಗಿಗಳನ್ನು ಇತರ ಎರಡು ವಾರ್ಡ್ಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ವಿಡಿಯೋಗಳಲ್ಲಿ ರೋಗಿಗಳ ಸ್ಥಳಾಂತರ ಗುರುತಿಸಬಹುದು.
#WATCH Rajasthan | Ajmer's Jawaharlal Nehru Hospital flooded following heavy rainfall in the city. (18.06) pic.twitter.com/eOOVNF39sE
— ANI MP/CG/Rajasthan (@ANI_MP_CG_RJ) June 18, 2023
"ಆಸ್ಪತ್ರೆ ಕಾರಿಡಾರ್ ಮತ್ತು ಮೂಳೆ ಚಿಕಿತ್ಸಾಲಯಕ್ಕೆ ನೀರು ನುಗ್ಗಿದೆ. ಈ ಪ್ರದೇಶದಲ್ಲಿ ಭಾರೀ ಮಳೆಯಾದಾಗ ಇದು ಸಂಭವಿಸುತ್ತದೆ. ನೀರನ್ನು ತೆರವುಗೊಳಿಸಲಾಗಿದೆ ಆದರೆ ರೋಗಿಗಳನ್ನು ಇನ್ನೂ ವಾರ್ಡ್ಗೆ ಸ್ಥಳಾಂತರಿಸಲಾಗಿಲ್ಲ. ಅವರಿಗೆ ಇತರ ವಾರ್ಡ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಜೆಎಲ್ಎನ್ ಆಸ್ಪತ್ರೆಯ ಅಧೀಕ್ಷಕ ಡಾ.ನೀರಜ್ ಹೇಳಿದ್ದಾರೆ.
ಭಾನುವಾರ ಮುಂಜಾನೆ, ರಾಜ್ಯ ವಿಪತ್ತು ಪರಿಹಾರ ಪಡೆ (ಎಸ್ಡಿಆರ್ಎಫ್) ಜಲೋರ್ನ ಭಿನ್ಮಾಲ್ ಪಟ್ಟಣದಲ್ಲಿ ಪ್ರವಾಹ ಪೀಡಿತ ಓಡ್ ಬಸ್ತಿಯಿಂದ 39 ಜನರನ್ನು ರಕ್ಷಿಸಿತ್ತು. ಹವಾಮಾನ ಇಲಾಖೆಯು ಸೋಮವಾರದಂದು ಟೋಂಕ್, ಬುಂದಿ ಮತ್ತು ಸವಾಯಿ ಮಾಧೋಪುರ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಜೈಪುರ, ಪಾಲಿ, ಭಿಲ್ವಾರಾ ಮತ್ತು ಚಿತ್ತೋರ್ಗಢದಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ವಾಯುಭಾರ ಕುಸಿತವು ಕಡಿಮೆ ಒತ್ತಡದ ಪ್ರದೇಶವಾಗಿ ಮಾರ್ಪಟ್ಟಿದ್ದು, ಬುಧವಾರದ ವೇಳೆಗೆ ರಾಜಸ್ಥಾನದಲ್ಲಿ ಅದರ ಪ್ರಭಾವ ಕೊನೆಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications