ಕಾಶ್ಮೀರದಲ್ಲಿ ಪರಿಸ್ಥಿತಿ ಉದ್ವಿಗ್ನ: ಶ್ರೀನಗರದಲ್ಲಿ ಕರ್ಫ್ಯೂ ಜಾರಿ
ಶ್ರೀನಗರದಲ್ಲಿ ಕರ್ಫ್ಯೂ ಜಾರಿ. ಪರಿಸ್ಥಿತಿ ಉದ್ವಿಗ್ನ. ಅನಂತ್ ನಾಗ್ ಜಿಲ್ಲೆಯಲ್ಲಿ ಶುಕ್ರವಾರ (ಜೂನ್ 16) ರಾತ್ರಿ ಆರು ಪೊಲೀಸರನ್ನು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿ.
ಶ್ರೀನಗರ, ಜೂನ್ 17: ಶ್ರೀಗರದಲ್ಲಿ ಉದ್ವಿಗ್ನ ವಾತಾವರಣ ನೆಲೆಯಾಗಿದ್ದು, ಪರಿಸ್ಥಿತಿ ಹತೋಟಿಗೆ ತರಲು ಕರ್ಫ್ಯೂ ಜಾರಿಗೊಳಿಸಲಾಗಿದೆ. ಶ್ರೀನಗರ ಸೇರಿದಂತೆ ಅನಂತನಾಗ್ ಹಾಗೂ ಕುಲ್ಗಾಮ್ ಗಳಲ್ಲೂ ಕರ್ಫ್ಯೂ ವಿಧಿಸಲಾಗಿದೆ. ಒಟ್ಟು 6 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ.
ಇಲ್ಲಿನ ಅನಂತನಾಗ್ ಜಿಲ್ಲೆಯ ಅಬಚಲ್ ಪೊಲೀಸ್ ಠಾಣೆಯ ಮೇಲೆ ದಾಳಿ ಶುಕ್ರವಾರ (ಜೂನ್ 16) ದಾಳಿ ನಡೆಸಿದ ಉಗ್ರರು ಆರು ಪೊಲೀಸರನ್ನು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಇಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಕಾಶ್ಮೀರದಲ್ಲಿ ಶುಕ್ರವಾರ ಬೆಳಗ್ಗೆ ಅರ್ವಾನಿ ಗ್ರಾಮದಲ್ಲಿ ನಡೆದಿದ್ದ ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಕಮಾಂಡರ್ ಜುನೈದ್ ಮಟ್ಟೂ ಹತ್ಯೆಯಾಗಿತ್ತು.
ಅದರ ಬೆನ್ನಲ್ಲೇ ಅಬಚಲ್ ಪೊಲೀಸ್ ಠಾಣೆಯ ಮೇಲೆ ನಡೆದಿರುವ ದಾಳಿ, ಮಟ್ಟು ಹತ್ಯೆಗೆ ಉಗ್ರರು ಕೈಗೊಂಡ ಪ್ರತೀಕಾರ ಎಂದು ಹೇಳಲಾಗಿದೆ.
ಏತನ್ಮಧ್ಯೆ, ಶುಕ್ರವಾರ ಬೆಳಗ್ಗೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದ ಲಷ್ಕರ್ ಕಮಾಂಡರ್ ಮಟ್ಟು ಸೇರಿದಂತೆ ಮೂವರು ಉಗ್ರರ ಶವಗಳನ್ನು ಪೊಲೀಸರು ಶನಿವಾರ ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ. ಉಗ್ರರೊಂದಿಗಿದ್ದ 2 ಎ.ಕೆ. 47 ರೈಫಲ್ ಗಳು ಹಾಗೂ ಮ್ಯಾಗಜೀನ್ ಗಳನ್ನೂ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications