ಭಾರತದಲ್ಲಿ ಕೊರೊನಾ ಆಯ್ತು, ಓಮಿಕ್ರಾನ್ ಬಂದು, ಈಗ BA.2.75 ತಳಿಯದ್ದೇ ಸದ್ದು!
ನವದೆಹಲಿ, ಜುಲೈ 7: ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಮಧ್ಯೆ ಓಮಿಕ್ರಾನ್ ರೂಪಾಂತರದ ಉಪ ತಳಿ BA.2.75 ಹರಡುತ್ತಿದ್ದು, ಭಾರತದಲ್ಲಿಯೂ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಟೆಡ್ರೊಸ್ ಅಧನಾಮ್ ಗೆಬ್ರಿಯೆಸಸ್ ತಿಳಿಸಿದ್ದಾರೆ.
ಕೋವಿಡ್-19 ರೂಪಾಂತರದ ಹೊಸ ತಳಿಯ ಬಗ್ಗೆ ಬುಧವಾರ ಅವರು ಮಾತನಾಡಿದರು. "ಕಳೆದ ಎರಡು ವಾರಗಳಲ್ಲಿ ಜಾಗತಿಕವಾಗಿ ವರದಿಯಾದ ಕೋವಿಡ್-19 ಸೋಂಕಿತ ಪ್ರಕರಣಗಳಲ್ಲಿ ಸುಮಾರು ಶೇ.30ರಷ್ಟು ಹೆಚ್ಚಾಗಿದೆ.
Important News: ಕೊರೊನಾ ವೈರಸ್ ಪ್ರತಿಕಾಯವೇ ಮೆದುಳಿಗೆ ಅಪಾಯ!
"ಕಳೆದ ವಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಉಪ ಪ್ರದೇಶಗಳ ಪೈಕಿ 6ರಲ್ಲಿ ನಾಲ್ಕು ಪ್ರದೇಶಗಳಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ," ಎಂದು ಗೆಬ್ರಿಯೆಸಸ್ ಹೇಳಿದ್ದಾರೆ.
ದೇಶದಲ್ಲಿ BA.2.75 ರೂಪಾಂತರ ತಳಿ
"ಯುರೋಪ್ ಮತ್ತು ಅಮೆರಿಕಾದಲ್ಲಿ BA.4 ಮತ್ತು BA.5 ಹೊಸ ಕೋವಿಡ್-19 ಅಲೆಗಳನ್ನು ಸೃಷ್ಟಿಸಿದ್ದು ಆಗಿದೆ. ಅದೇ ರೀತಿ ಭಾರತದಲ್ಲಿ BA.2.75 ರ ಹೊಸ ಉಪತಳಿಯು ಸಹ ಪತ್ತೆ ಆಗಿದೆ. ಅದನ್ನು ನಾವು ಅನುಸರಿಸುತ್ತಿದ್ದೇವೆ," ಎಂದು ಗೆಬ್ರಿಯೆಸಸ್ ಹೇಳಿದರು.
ಕೋವಿಡ್-19 ರೂಪಾಂತರಿ ಬಗ್ಗೆ ಆರೋಗ್ಯ ತಜ್ಞರ ಮಾತೇನು?
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್, BA.2.75 ಎಂದು ಕರೆಯಲ್ಪಡುವ ಒಂದು ಉಪ-ತಳಿಯು ಕಂಡುಬಂದಿದೆ, ಇದು ಮೊದಲು ಭಾರತದಲ್ಲಿ ಪತ್ತೆಯಾಗಿದ್ದು, ಇದೀಗ 10 ರಾಷ್ಟ್ರಗಳಲ್ಲಿ ಸೋಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದರು.
ಕೊರೊನಾವೈರಸ್ ರೂಪಾಂತರದ ಉಪ-ತಳಿಯನ್ನು ಸೀಮಿತ ಕ್ರಮಗಳಲ್ಲಿ ಮಾತ್ರ ವಿಶ್ಲೇಷಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಉಪ-ತಳಿಯು ಹೊಸ ರೂಪಾಂತರವನ್ನು ಎದುರಿಸುವ ಪ್ರೋಟಿನ್ ಅಂಶವನ್ನು ಹೆಚ್ಚಿಸುವಂತೆ ಮಾಡುತ್ತದೆ. ಆದ್ದರಿಂದ ನಿಸ್ಸಂಶಯವಾಗಿ ಅದು ವೈರಸ್ನ ನಿರ್ಣಾಯಕ ಭಾಗವಾಗಿದ್ದು, ಅದು ಮನುಷ್ಯರಿಗೆ ಅಂಟಿಕೊಳ್ಳುತ್ತಿದೆ. ನಾವು ಇದನ್ನು ಎದುರು ನೋಡಬೇಕಾಗಿದೆ. ಈ ಉಪ-ತಳಿಯು ಹೆಚ್ಚುವರಿ ಪ್ರತಿರಕ್ಷಣೆಯಿಂದ ತಪ್ಪಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿದೆಯೇ ಅಥವಾ ಹೆಚ್ಚು ತೀವ್ರವಾಗಿದೆಯೇ ಎಂಬುದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ನಮಗೂ ಅದರ ಬಗ್ಗೆ ಮಾಹಿತಿಯಿಲ್ಲ, ಅದಕ್ಕಾಗಿ ನಾವು ಅದನ್ನು ಕಾದು ನೋಡಬೇಕಾಗುತ್ತದೆ," ಎಂದು ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
"ಕೋವಿಡ್-19 ಪಿಡುಗು ಮುಕ್ತಾಯ ಎಂದು ಹೇಳಲಾಗದು"
ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಅಂತ್ಯವಾಯಿತು ಎಂದು ಈಗಲೇ ಘೋಷಿಸುವುದಕ್ಕೆ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ವಹಣಾ ಅಧಿಕಾರಿ ಅಬ್ದಿ ಮೊಹಮ್ಮದ್ ತಿಳಿಸಿದ್ದಾರೆ. "ಸದ್ಯ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಮಧ್ಯೆ ಭಾಗದಲ್ಲಿದ್ದೇವೆ, ಅಲ್ಲದೇ ರೋಗಾಣು ವೇಗ ಇನ್ನೂ ಕಡಿಮೆಯಾಗಿಲ್ಲ. ಅದು BA.4 ಅಥವಾ BA.5 ಮತ್ತು BA.2.75 ರೂಪಾಂತರ ತಳಿಯೇ ಆಗಿರಲಿ. ರೋಗಾಣು ಮುಂದುವರಿಯುತ್ತದೆ. ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಜನನಿಬಿಡ ಪ್ರದೇಶಗಳಿಂದ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ," ಎಂದು ಹೇಳಿದ್ದಾರೆ.
ದೇಶದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ಎಷ್ಟಿದೆ?
ಕೊರೊನಾ ವೈರಸ್ ಹೊಸ ರೂಪಾಂತರ ಮತ್ತು ತಳಿಗಳು ಪತ್ತೆಯಾಗುತ್ತಿರುವುದರ ಮಧ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಒಂದೇ ದಿನ 18,930 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ಇದೇ ಅವಧಿಯಲ್ಲಿ 35 ಮಂದಿ ಉಸಿರು ಚೆಲ್ಲಿದ್ದು, 14,650 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಪಾಸಿಟಿವಿಟಿ ದರವು 4.32ರಷ್ಟು ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,19,457ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
Recommended Video