ವರ್ಷಾಂತ್ಯಕ್ಕೆ ಎಲ್ಲರಿಗೂ ಲಸಿಕೆ ನೀಡಲು ದಿನಕ್ಕೆ ಎಷ್ಟು ಡೋಸ್ ನೀಡುವುದು ಅವಶ್ಯಕ
ನವದೆಹಲಿ, ಜೂನ್ 25: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿದ್ದು, ಹಲವು ರಾಜ್ಯಗಳಲ್ಲಿ ಲಾಕ್ಡೌನ್ ನಿಯಮಗಳನ್ನು ಸಡಿಲಿಸಲಾಗಿದೆ. ಆದರೆ ಲಸಿಕೆ ನೀಡಲಾಗುತ್ತಿರುವ ಪ್ರಮಾಣ ಮಾತ್ರ ಚಿಂತಾಜನಕವಾಗಿಯೇ ಉಳಿದಿದೆ.
ಕೊರೊನಾ ಪ್ರಕರಣಗಳು ತಗ್ಗುತ್ತಿರುವ ಈ ಹೊತ್ತಿನಲ್ಲಿ ತಕ್ಷಣ ಆಗಬೇಕಾಗಿರುವ ಕೆಲಸವೆಂದರೆ ಆದಷ್ಟು ಹೆಚ್ಚಿನ ಜನರಿಗೆ ಲಸಿಕೆ ನೀಡುವುದು. ಎಷ್ಟು ಜನರಿಗೆ ಲಸಿಕೆ ನೀಡಲು ಸಾಧ್ಯವೋ ಅಷ್ಟು ವೇಗವಾಗಿ ಲಸಿಕೆ ನೀಡಬೇಕಿದೆ. ಇದು ದೇಶದ ಆರ್ಥಿಕ ಚೇತರಿಕೆಗೆ ಬಹು ಅವಶ್ಯಕವಾಗಿದೆ ಎಂದು ಮಾರುಕಟ್ಟೆ ಸಂಶೋಧಕ ಸಂಸ್ಥೆ ಸಿಆರ್ಐಎಸ್ಐಎಲ್ ಅಭಿಪ್ರಾಯಪಟ್ಟಿದೆ. ಆದರೆ ಭಾರತ ಲಸಿಕಾ ಅಭಿಯಾನದಲ್ಲಿ ವಿಳಂಬ ಮಾಡುತ್ತಿದೆ ಎಂದು ವರದಿ ಹೇಳಿದೆ. ಮುಂದೆ ಓದಿ...

ಮೂರು ಪಟ್ಟು ಹೆಚ್ಚಬೇಕಿದೆ ವೇಗ
ಡಿಸೆಂಬರ್ ವೇಳೆಗೆ ಎಲ್ಲಾ ಅರ್ಹ ಜನಸಂಖ್ಯೆಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಇದು ಸಾಧ್ಯವಾಗಬೇಕಾದರೆ ಭಾರತದಲ್ಲಿ ಲಸಿಕೆ ನೀಡುತ್ತಿರುವ ವೇಗವನ್ನು ಮೂರು ಪಟ್ಟು ಹೆಚ್ಚಿಸಬೇಕಾದ ತುರ್ತಿದೆ ಎಂದು ಸಿಆರ್ಐಎಸ್ಐಎಲ್ ವರದಿ ವಿವರಿಸಿದೆ.
CRISIL, ದೇಶದಲ್ಲಿನ ಲಸಿಕಾ ಅಭಿಯಾನದ ಕುರಿತು ಮಾಹಿತಿ ವಿಶ್ಲೇಷಣೆ ನಡೆಸಿದ್ದು, ಭಾರತದಲ್ಲಿ ಲಸಿಕೆ ನೀಡುತ್ತಿರುವ ಪ್ರಮಾಣ ಅತಿ ಚಿಂತಾಜನಕವಾಗಿದೆ. ನಿಧಾನಗತಿಯಲ್ಲಿ ಲಸಿಕೆ ನೀಡಲಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದೆ.

ಏಪ್ರಿಲ್ ನಂತರ ಕ್ರಮೇಣ ಇಳಿದ ಲಸಿಕಾ ಅಭಿಯಾನದ ವೇಗ
ಏಪ್ರಿಲ್ ಮಧ್ಯದ ನಂತರ ದಿನಕ್ಕೆ 3.5 ಮಿಲಿಯನ್ ಡೋಸ್ಗಳ ಲಸಿಕೆಯನ್ನು ನೀಡಿತ್ತು. ನಂತರ ಆ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿತು. ಮೇ ಮೂರನೇ ವಾರದಲ್ಲಿ ಈ ಸಂಖ್ಯೆ 1.3 ಮಿಲಿಯನ್ಗೆ ಇಳಿಯಿತು. ಜೂನ್ 20ರ ಕೊನೆಗೆ 3.2 ಮಿಲಿಯನ್ಗೆ ಮತ್ತೆ ಏರಿಕೆ ಕಂಡಿದೆ ಎಂದು ವರದಿಯಲ್ಲಿ CRISIL ತಿಳಿಸಿದೆ. ಜೂನ್ 21ರಂದು ದೇಶದಲ್ಲಿ ದಾಖಲೆ ಮಟ್ಟದಲ್ಲಿ ಲಸಿಕೆ ನೀಡಲಾಯಿತು. ಒಂದೇ ದಿನದಲ್ಲಿ 8.6 ಮಿಲಿಯನ್ ಡೋಸ್ಗಳ ಲಸಿಕೆ ನೀಡಲಾಯಿತು ಎಂಬುದನ್ನು ಉಲ್ಲೇಖಿಸಿದೆ.

ದೇಶದಲ್ಲಿ ಕೇವಲ 3.8% ಜನರಿಗೆ ಎರಡು ಡೋಸ್ ಲಸಿಕೆ
ಆದರೆ ಲಸಿಕೆ ಅಭಿಯಾನದ ವೇಗ ಇನ್ನಷ್ಟು ವರ್ಧನೆಯಾಗಬೇಕಿದೆ. 2021ರ ಕೊನೆಯವರೆಗೂ ಇದೇ ವೇಗದಲ್ಲಿ ಮುನ್ನುಗ್ಗಬೇಕಿದೆ. ಲಭ್ಯವಿರುವ ಮಾಹಿತಿ ಪ್ರಕಾರ, ಇದುವರೆಗೂ ದೇಶದಲ್ಲಿ ಕೇವಲ 3.8% ಜನರಿಗೆ ಸಂಪೂರ್ಣ ಎರಡು ಡೋಸ್ಗಳ ಲಸಿಕೆ ನೀಡಲಾಗಿದೆ. 17.2% ಜನರಿಗೆ ಒಂದು ಡೋಸ್ ಲಸಿಕೆ ನೀಡಲಾಗಿದೆ. ಸರ್ಕಾರ ತನ್ನ ಲಸಿಕಾ ಗುರಿಯನ್ನು ತಲುಪಲು ಡಿಸೆಂಬರ್ವರೆಗೂ ದಿನಕ್ಕೆ ತಪ್ಪದೆ 8 ಮಿಲಿಯನ್ ಡೋಸ್ಗಳ ಲಸಿಕೆಯನ್ನು ನೀಡಲೇಬೇಕಿದೆ ಎಂದು ವರದಿ ತಿಳಿಸಿದೆ.

ಆರ್ಥಿಕ ಚಟುವಟಿಕೆಗೂ ಅವಶ್ಯಕ
ದೇಶದಲ್ಲಿ ಸದ್ಯಕ್ಕೆ ಆರ್ಥಿಕ ಚಟುವಟಿಕೆಗಳು ಲಸಿಕೆ ಅಭಿಯಾನದ ಮೇಲೆ ಅವಲಂಬಿತವಾಗಿವೆ. ಹೀಗಾಗಿ ಅತಿ ವೇಗವಾಗಿ ಲಸಿಕೆ ನೀಡುವುದು ಅವಶ್ಯಕವಾಗಿದೆ ಎಂದು ವರದಿ ತಿಳಿಸಿದೆ. ತಮ್ಮ ದೇಶದ 40% ಜನಸಂಖ್ಯೆಗೆ ಲಸಿಕೆ ನೀಡಿದ ದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಭಾರತವೂ ಈ ನಿಟ್ಟಿನಲ್ಲಿ ಮುನ್ನುಗ್ಗಬೇಕಿದೆ ಎಂದು ಸಲಹೆ ನೀಡಿದೆ.












Click it and Unblock the Notifications