ಉಕ್ಕಿನ ಮಹಿಳೆ vs ಉಕ್ಕಿನ ಮನುಷ್ಯ ಏನಿದರ ಮರ್ಮ?
ನವದೆಹಲಿ, ಅ.23: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನವಾದ ಅಕ್ಟೋಬರ್ 31 ದಿನವನ್ನು "ಏಕತಾ ದಿನ"ವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಅದರೆ, ಅಂದೇ 'ಉಕ್ಕಿನ ಮಹಿಳೆ' ಇಂದಿರಾ ಗಾಂಧೀ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರು ಮೋದಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ನಿಜಕ್ಕೂ ಮೋದಿ ಸರ್ಕಾರ ಕಾಂಗ್ರೆಸ್ ನಾಯಕರನ್ನು ಬದಿಗೊತ್ತಿ ಇತರೆ ನಾಯಕರನ್ನು ಮೇಲಕ್ಕೆತ್ತುತ್ತಿದೆಯೇ? ಈ ಆಚರಣೆಗಳ ಮಹತ್ವ ಏನು? ಇಲ್ಲಿದೆ ವಿವರಣೆ...
ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಹುತಾತ್ಮ ನಾಯಕ, ನಾಯಕಿಗೆ ಅಗೌರವ ಸೂಚಿಸುತ್ತಿದ್ದಾರೆ. ಇಂದಿರಾ ಗಾಂಧಿ ಅವರು ಹುತಾತ್ಮರಾದ ದಿನವನ್ನು ಸ್ಮರಿಸುವ ಬದಲು ಸಂಭ್ರಮಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. [ಪ್ರತಿಮೆಗೆ 200 ಕೋಟಿ ಟ್ವೀಟ್ ಲೋಕ ಶಾಕ್]

ಇತ್ತೀಚೆಗೆ ಎನ್ಡಿಎ ಸರ್ಕಾರ ನಮ್ಮಗಲಿದ ದೇಶದ ನಾಯಕರ ಹುಟ್ಟುಹಬ್ಬ, ಜಯಂತಿ ಆಚರಣೆ ಬಗ್ಗೆ ದೃಢ ನಿರ್ಧಾರ ಕೈಗೊಂಡಿದ್ದು, ಮಹಾತ್ಮ ಗಾಂಧೀಜಿ ಹೊರತು ಪಡಿಸಿ ಇನ್ಯಾವುದೇ ನಾಯಕರ ಜಯಂತಿ, ಪುಣ್ಯತಿಥಿ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಪರಿಗಣಿಸದಿರಲು ಕ್ರಮ ಕೈಗೊಂಡಿದೆ. ಹೀಗಾಗಿ ಉಳಿದ ನಾಯಕರು ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಮುಂತಾದವರ ಹುಟ್ಟುಹಬ್ಬ, ಪುಣ್ಯತಿಥಿಗಳನ್ನು ಆಯಾ ಟ್ರಸ್ಟ್, ಸಂಘಟನೆಗಳು ಆಚರಿಸಬಹುದು ಎಂದು ಘೋಷಿಸಲಾಗಿದೆ. ['ಇಂದಿರಾ ಗಾಂಧಿಗೆ ಮಾರಕ ಕ್ಯಾನ್ಸರ್ ಇತ್ತು']
Prakash Javadekar : GoI has decided to commemorate 31st Oct as "Rashtriya Ekta Diwas” as it is Sardar Vallabhbhai Patel’s Birth Anniversary
— ANI (@ANI_news) October 22, 2014 ಅದರೆ, ಪಂಡಿತ್ ಜವಹರಲಾಲ್ ನೆಹರೂ ಅವರ 125ನೇ ಹುಟ್ಟುಹಬ್ಬ ಆಚರಣೆಯನ್ನು ಸರ್ಕಾರದ ವತಿಯಿಂದ ನಡೆಸಲಾಗುವುದು ಎಂದು ಮೋದಿ ಘೋಷಿಸಿದ್ದಾರೆ. ಈ ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಅಜಾದ್, ಕರಣ್ ಸಿಂಗ್ ಹಾಗೂ ಗಾಂಧಿ ಪರಿವಾರದ ಆಪ್ತ ಸುಮನ್ ದುಬೆ ಮುಂತಾದವರಿದ್ದಾರೆ. ಮಹಾತ್ಮ ಗಾಂಧಿ ಜಯಂತಿ ಆಚರಣೆಯನ್ನು ರಾಜಘಾಟ್ ಸಮಿತಿ ನಿರ್ಧರಿಸುತ್ತದೆ ನಂತರ ಕೇಂದ್ರ ಸರ್ಕಾರ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುತ್ತದೆ.
ರಾಷ್ಟ್ರೀಯ ಏಕತಾ ದಿವಸ ಏಕೆ?: ಇತಿಹಾಸದ ಪುಸ್ತಕಗಳಲ್ಲಿ ವಲ್ಲಭ ಪಟೇಲ್ ಅವರ ಬಗ್ಗೆ ಹೆಚ್ಚಿನ ವಿವರವನ್ನೇ ನೀಡಲಾಗಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಟೇಲ್ ಅವರಿಂದ ಬಿಗಿಕ್ರಮಗಳ ಬರದೇಹೋಗಿದ್ದರೆ ದೇಶ ಇನ್ನಷ್ಟು ದುರ್ಬಲವಾಗುತ್ತಿತ್ತು. [ಭಾರತಕ್ಕೆ ಪಟೇಲರ ಜಾತ್ಯತೀತತೆ ಬೇಕು]
ದೇಶದ ಸಮಗ್ರತೆ, ಐಕ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಅಂದಿನ ಗೃಹ ಸಚಿವ ಪಟೇಲರು ಕೈಗೊಂಡ ಕಟ್ಟುನಿಟ್ಟಿನ ಕ್ರಮವನ್ನು ನಾವು ಸ್ಮರಿಸಲೇಬೇಕು. ದೇಶದ ಏಕತೆಗಾಗಿ ಸರ್ಧಾರ್ ಪಟೇಲ್ ಅವರು ನಡೆಸಿದ ಹೋರಾಟ ಮತ್ತು ಅವರ ಸಂದೇಶವನ್ನು ಸಾರುವುದು ಈ ದಿನಾಚರಣೆಯ ಉದ್ದೇಶ. ಈ ನಿಟ್ಟಿನಲ್ಲಿ ಪಟೇಲ್ ಅವರಿಗೆ ಸೂಕ್ತ ಗೌರವ ನೀಡಲು ಅವರ ಜನ್ಮದಿನವನ್ನು "ರಾಷ್ಟ್ರೀಯ ಏಕತಾ ದಿನ"ವನ್ನಾಗಿ ಆಚರಿಸಲು ಪ್ರಧಾನಿ ನಿರ್ಧರಿಸಿದ್ದಾರೆ.

ಏಕತಾ ದಿವಸ ಆಚರಣೆ ಹೇಗೆ? : ಅಕ್ಟೋಬರ್ 31ರಂದು ಮೋದಿಯವರು ಬೀದಿಗಿಳಿದು ಭಾಷಣಗಳನ್ನ ಮಾಡುವುದರ ಜೊತೆಗೆ ರೇಡಿಯೋದಲ್ಲೂ ಭಾಷಣ ಮಾಡಲಿದ್ದಾರೆ. ಅಂದು ಸಂಜೆ ಪೊಲೀಸ್ ಪೆರೇಡನ್ನೂ ಹಮ್ಮಿಕೊಳ್ಳಲಾಗುತ್ತದೆ. ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಏಕತಾ ಮ್ಯಾರಥಾನ್ ನಡೆಸಲಾಗುತ್ತದೆ, ಎನ್ ಸಿಸಿ, ಹೋಮ್ ಗಾರ್ಡ್, ಗೃಹರಕ್ಷಕ ದಳ ಮುಂತಾದ ಪಡೆಗಳ ಪಥ ಸಂಚಲನ ಕೂಡಾ ಇರುತ್ತದೆ. ಇದರಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.
ಸರ್ದಾರ್ ಬಗ್ಗೆ ಒಂದಿಷ್ಟು: ಗುಜರಾತಿನ ಕರಮ್ ಸಂದ್ ನಲ್ಲಿ 1875ರ ಅಕ್ಟೋಬರ್ 31ರಂದು ಜನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಕಾನೂನು ಪದವಿ ಪಡೆದಿದ್ದರೂ ಗಾಂಧೀಜಿ ಅವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧುಮುಕಿ ಸ್ವತಂತ್ರ ಭಾರತಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. [ಪಟೇಲರನ್ನು ನೆಹರು ಕೋಮುವಾದಿ ಎಂದಿದ್ದರು]
ಸ್ವಾತಂತ್ಯ ಸಿಕ್ಕ ನಂತರ ರಾಜ್ಯಗಳ ಪುನರ್ ವಿಂಗಡನೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಸುಮಾರು 500ಕ್ಕೂ ಅಧಿಕ ರಾಜಮನೆತನ ಅಡಿಯಲ್ಲಿದ್ದ ರಾಜ್ಯಗಳನ್ನು ನೆಹರೂ ಸರ್ಕಾರದ ಸುಪರ್ದಿಗೆ ತಂದರು. ಇದಲ್ಲದೆ ಗುಜರಾತಿನ ಖೇದ, ಬೊರ್ಸದ್, ಬಾರ್ಡೋಲಿಗಳಲ್ಲಿ ರೈತರ ಪರ ಹೋರಾಟದಲ್ಲೂ ಪಟೇಲ್ ಅವರು ಪಾಲ್ಗೊಂಡಿದ್ದರು.












Click it and Unblock the Notifications