ದಿನದಿಂದ ದಿನಕ್ಕೆ ಕೊರೊನಾ ಉಲ್ಬಣ: ಕೇಂದ್ರ ಸರಕಾರಕ್ಕೆ ಏಮ್ಸ್ ವೈದ್ಯರ ಗಂಭೀರ ಎಚ್ಚರಿಕೆ
ನವದೆಹಲಿ, ಮೇ 7: ಮೂರನೇ ಲಾಕ್ ಡೌನ್ ನಲ್ಲಿ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಸುದ್ದಿಯ ನಡುವೆ, ದೆಹಲಿಯ ಪ್ರತಿಷ್ಠಿತ ಏಮ್ಸ್ ವೈದ್ಯರು, ಕೇಂದ್ರ ಸರಕಾರಕ್ಕೆ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ.
"ಸದ್ಯಕ್ಕೆ ಲಭ್ಯವಿರುವ ಮಾಡೆಲಿಂಗ್ ದತ್ತಾಂಶದ ಪ್ರಕಾರ, ಮತ್ತು ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದನ್ನು ಗಮನಿಸಿದಾಗ, ಭಾರತದಲ್ಲಿ ಕೊರೊನಾ ಇನ್ನೂ ತನ್ನ ಗರಿಷ್ಟ ಮಿತಿಯನ್ನು ಏರಬೇಕಷ್ಟೇ"ಎಂದು ಏಮ್ಸ್ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.
"ಈಗಿನ ಸ್ಥಿತಿಯನ್ನು ಅವಲೋಕಿಸಿದಾಗ ಜೂನ್ /ಜುಲೈ ತಿಂಗಳಲ್ಲಿ ಕೊರೊನಾ ಗರಿಷ್ಟ ಮಿತಿಗೆ ಹೋಗುವ ಸಾಧ್ಯತೆಯಿಲ್ಲದಿಲ್ಲ. ಆದರೆ, ಇದರ ಪ್ರಭಾವ ಎಷ್ಟರ ಮಟ್ಟಿಗೆ ಇರಲಿದೆ ಎನ್ನುವುದು ಈಗಲೇ ಹೇಳುವುದು ಕಷ್ಟ"ಎಂದು ಗುಲೇರಿಯಾ ಅಭಿಪ್ರಾಯ ಪಟ್ಟಿದ್ದಾರೆ.

"ಕೊರೊನಾಗೆ ಇನ್ನೂ ಲಸಿಕೆ ಕಂಡುಕೊಳ್ಳದೇ ಇರುವುದರಿಂದ, ಲಾಕ್ ಡೌನ್ ಅನ್ನೇ ಪ್ರಮುಖ ಅಸ್ತ್ರವಾಗಿ ಕೇಂದ್ರ ಸರಕಾರ ನಂಬಿದೆ. ಈಗ ನಾವು ಮೂರನೇ ಲಾಕ್ ಡೌನ್ ಅವಧಿಯಲ್ಲಿದ್ದೇವೆ. ಇದುವರೆಗೆ, 53ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ ಮತ್ತು 1,800 ಜನ ಸಾವನ್ನಪ್ಪಿದ್ದಾರೆ"ಎಂದು ಡಾ.ಗುಲೇರಿಯಾ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದಲ್ಲಿ ಅತಿ ಹೆಚ್ಚು ಚೇತರಿಕೆ ಪ್ರಮಾಣ ಮತ್ತು ಕಡಿಮೆ ಮರಣ ಪ್ರಮಾಣ ಕೇರಳದಲ್ಲಿ ದಾಖಲಾಗಿದೆ ಮತ್ತು ಕೋವಿಡ್ -19ರ ಒಂದೇ ಒಂದು ಪ್ರಕರಣ ಸಿಕ್ಕಿಂನಲ್ಲಿ ದಾಖಲಾಗಲಿಲ್ಲ.
"ಮೇ ಹದಿನೇಳರ ನಂತರ ಕೊರೊನಾ ನಿಯಂತ್ರಣಕ್ಕೆ ಬರದೇ ಇದ್ದಲ್ಲಿ, ಮುಂದೆ ಕಠಿಣ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಸರಕಾರಕ್ಕೆ ಬರಲಿದೆ"ಎಂದು ಕರ್ನಾಟಕ ಗೃಹ ಸಚಿವರು ಈಗಾಗಲೇ ಎಚ್ಚರಿಕೆಯನ್ನು ನೀಡಿದ್ದಾರೆ.












Click it and Unblock the Notifications