ಭಾರತದ ಪ್ರಜೆಗಳಿಗೆ ಕೊವಿಡ್-19 ಲಸಿಕೆ ನೀಡುವುದಿಲ್ವಾ: ರಾಹುಲ್ ಗಾಂಧಿ
ನವದೆಹಲಿ, ಡಿಸೆಂಬರ್.03: ಭಾರತದಲ್ಲಿ ಎಲ್ಲರಿಗೂ ಕೊರೊನಾವೈರಸ್ ಸೋಂಕಿನ ಲಸಿಕೆಯನ್ನು ನೀಡುತ್ತೇವೆ ಎಂದು ನಾವು ಹೇಳಿಲ್ಲ ಎಂಬ ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆಗೆ ಸಂಸದ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕೊರೊನಾವೈರಸ್ ಲಸಿಕೆ ವಿತರಣೆ ವಿಷಯದಲ್ಲಿ ಪ್ರಧಾನಿ ಮೋದಿಯವರು ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ನಾವು ಇಡೀ ದೇಶಕ್ಕೆ ಕೊರೊನಾ ಲಸಿಕೆ ಒದಗಿಸುತ್ತೇವೆ ಎಂದು ಹೇಳಿಲ್ಲ: ಆರೋಗ್ಯ ಸಚಿವಾಲಯ
ಭಾರತದಲ್ಲಿ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆ ನೀಡುವ ಅಗತ್ಯವಿಲ್ಲ. ಕೊವಿಡ್-19 ಸೋಂಕಿನಿಂದ ಬಳಲುತ್ತಿರುವ ಜನರಿಗೆ ಲಸಿಕೆ ನೀಡಿದ್ದಲ್ಲಿ ಸೋಂಕಿನ ಹರಡುವಿಕೆಯ ಸರಪಳಿ ಕಳಚಿದಂತೆ ಆಗುತ್ತದೆ. ಅಷ್ಟಕ್ಕೂ ನಾವು ದೇಶದ 135 ಕೋಟಿ ಜನರಿಗೂ ಲಸಿಕೆ ನೀಡುತ್ತೇವೆ ಎಂಬುದಾಗಿ ಹೇಳಿಲ್ಲವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿಕೆ ನೀಡಿತ್ತು.
ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕೆರಳಲು ಕಾರಣವೇನು?
"ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲರಿಗೂ ಕೊರೊನಾವೈರಸ್ ಲಸಿಕೆ ಸಿಗಲಿದೆ ಎನ್ನುತ್ತಾರೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿಯವರು, ಬಿಹಾರದಲ್ಲಿ ಪ್ರತಿಯೊಬ್ಬರಿಗೂ ಉಚಿತವಾಗಿ ಕೊರೊನಾವೈರಸ್ ಲಸಿಕೆ ಸಿಗಲಿದೆ ಎಂದು ಹೇಳುತ್ತಾರೆ. ಅದೇ ಕೇಂದ್ರ ಸರ್ಕಾರವು ಇದೀಗ ಎಲ್ಲರಿಗೂ ಲಸಿಕೆ ಸಿಗುತ್ತದೆ ಎಂದು ಯಾವಾಗಲೂ ಹೇಳಿಲ್ಲ ಎಂದು ಹೇಳುತ್ತಿದೆ. ಅಸಲಿಗೆ ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿಲುವು ಏನು" ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಹೇಳಿಕೆ
ಇಡೀ ದೇಶಕ್ಕೆ ಕೊರೊನಾವೈರಸ್ ಲಸಿಕೆಯನ್ನು ಒದಗಿಸುವುದಾಗಿ ನಾವು ಎಂದೂ ಮಾತನಾಡಿಲ್ಲ. ಕೆಲವು ವಾಸ್ತವದಲ್ಲಿ ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದ ಕೆಲವು ವಿಚಾರಗಳ ಬಗ್ಗೆ ವಿಶ್ಲೇಷಣೆ ನಡೆಸಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಸ್ಪಷ್ಟನೆ ನೀಡಿದ್ದರು.
ಬಿಹಾರ ಚುನಾವಣೆ ಪ್ರಣಾಳಿಕೆಯಲ್ಲಿ ಕೊರೊನಾವೈರಸ್ ಲಸಿಕೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಇಡೀ ದೇಶವೇ ತತ್ತರಿಸುತ್ತಿದ್ದರೆ ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಇದೇ ವಿಚಾರವನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿತ್ತು. ಬಿಹಾರದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ರಾಜ್ಯದ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು. ಈ ಅಂಶವು ಸ್ವತಃ ಬಿಜೆಪಿಯನ್ನೇ ತೀವ್ರ ಮುಜುಗರಕ್ಕೀಡು ಮಾಡಿತ್ತು.
Recommended Video
ದೇಶದಲ್ಲಿ ಹೇಗಿದೆ ಕೊರೊನಾವೈರಸ್ ಕರಾಳತೆ ಚಿತ್ರಣ?
ಭಾರತದಲ್ಲಿ ಒಂದೇ ದಿನ 35551 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣ ಸಂಖ್ಯೆ 95,34,965ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 526 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಇದುವರೆಗೂ ಮೃತಪಟ್ಟವರ ಸಂಖ್ಯೆಯು 1,38,648ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 40,726 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ 89,73,373 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ 4,22,943 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.