100ಕ್ಕೂ ಹೆಚ್ಚು ಭಾರತೀಯರಲ್ಲಿ ಕೊರೊನಾ ವೈರಸ್ ಸೋಂಕು ದೃಢ!
ನವದೆಹಲಿ, ಮಾರ್ಚ್.15: ಡ್ರ್ಯಾಗನ್ ರಾಷ್ಟ್ರದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಭಾರತದಲ್ಲೂ ಭೀತಿ ಹುಟ್ಟಿಸುತ್ತಿದೆ. ಚೀನಾದಲ್ಲಿ ಹೊಸ ವರ್ಷಾಚರಣೆ ಸಂಭ್ರಮದ ಸಂದರ್ಭದಲ್ಲಿಯೇ ಮೊದಲ ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಕೊರೊನಾಗೆ ಮೊದಲ ಜೀವ ಬಲಿಯಾಯಿತು.
ಚೀನಾದಲ್ಲಿ ಹುಟ್ಟಿ ವಿಶ್ವಕ್ಕೆ ಪಸರಿಸಿದ ಕೊರೊನಾ ವೈರಸ್ ಸುಳಿವು ಭಾರತದಲ್ಲಿ ಎರಡು ತಿಂಗಳವರೆಗೂ ಪತ್ತೆಯಿರಲಿಲ್ಲ. ಕೇರಳದಲ್ಲಿ ಆರಂಭದಲ್ಲಿ 3 ಸೋಂಕಿತ ಪ್ರಕರಣ ಪತ್ತೆಯಾದರೂ ನಂತರದಲ್ಲಿ ಎಲ್ಲ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು.
ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?
ಇಂದು ಭಾರತದಲ್ಲೂ ಪರಿಸ್ಥಿತಿ ಬದಲಾಗಿದೆ. ಕರ್ನಾಟಕ ಆದಿಯಾಗಿ ಕೊರೊನಾ ವೈರಸ್ ಕಾಟಕ್ಕೆ ಇಡೀ ದೇಶವೇ ಬೆಚ್ಚಿ ಬೀಳುವಂತಾ ಸ್ಥಿತಿ ನಿರ್ಮಾಣವಾಗಿದೆ. ಇದುವರೆಗೂ ದೇಶದಲ್ಲಿ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದ್ದು, ಮತ್ತಷ್ಟು ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ.
ದೇಶದಲ್ಲಿ 107ಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು
ಕೊರೊನಾ ವೈರಸ್ ನಿಂದಾಗಿ ವಿಶ್ವದಾದ್ಯಂತ 5,833ಕ್ಕೂ ಅಧಿಕ ಜನರು ಪ್ರಾಣ ಬಿಟ್ಟಿದ್ದರೆ, 1,56,400ಕ್ಕೂ ಅಧಿಕ ಮಂದಿಯಲ್ಲಿ ಮಾರಕ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ ಭಾರತದಲ್ಲಿ ಇದುವರೆಗೂ 107 ಜನರಲ್ಲಿ ಕೊರೊನಾ ವೈರಸ್ ಇರುವುದು ವೈದ್ಯಕೀಯ ತಪಾಸಣೆಯಿಂದ ದೃಢಪಟ್ಟಿದೆ ಎಂದು ವರದಿಯಾಗಿದೆ.
ಭಾರತದ ಯಾವ ರಾಜ್ಯಗಳಲ್ಲಿ ಅದೆಷ್ಟು ಸೋಂಕಿತ ಪ್ರಕರಣ?
ದೇಶದಲ್ಲಿ ಒಟ್ಟು 107 ಜನರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ಇದುವರೆಗಿನ ವೈದ್ಯಕೀಯ ತಪಾಸಣೆಯಿಂದ ತಿಳಿದು ಬಂದಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಜನರಿಗೆ ಸೋಂಕು ಇರುವುದು ಸ್ಪಷ್ಟವಾಗಿದೆ. ಮಹಾರಾಷ್ಟ್ರದಲ್ಲಿ 31, ಕೇರಳದಲ್ಲಿ 22, ಉತ್ತರ ಪ್ರದೇಶದಲ್ಲಿ 11, ದೆಹಲಿಯಲ್ಲಿ 7, ಜನರಿಗೆ ಸೋಂಕು ಇರುವುದು ಸ್ಪಷ್ಟವಾಗಿದೆ. ಹರಿಯಾಣದಲ್ಲಿ 14 ಮಂದಿಗೆ ಸೋಂಕು ತಗಲಿದ್ದು, ಎಲ್ಲರೂ ವಿದೇಶಿಗರು ಎಂದು ಹೇಳಲಾಗುತ್ತಿದೆ.
ಇದುವರೆಗೂ ಭಾರತದಲ್ಲಿ ಸೋಂಕಿಗೆ ಇಬ್ಬರು ಸಾವು
ಭಾರತದಲ್ಲಿ ಕೊರೊನಾ ವೈರಸ್ ನಿಂದಾಗಿ ಕಲಬುರಗಿಯಲ್ಲಿ 76 ವರ್ಷದ ಮಹ್ಮದ್ ಹುಸೇನ್ ಸಿದ್ದಿಕ್ ಮೃತಪಟ್ಟಿದ್ದರು. ಮೆಕ್ಕಾ ಪ್ರವಾಸಕ್ಕೆ ತೆರಳಿ ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗಲಿತ್ತು ಎನ್ನಲಾಗಿದೆ. ಇನ್ನು, ದೆಹಲಿಯಲ್ಲಿ 68 ವರ್ಷದ ವೃದ್ಧೆ ಕೂಡಾ ಮಾರಕ ಸೋಂಕಿನಿಂದ ಪ್ರಾಣ ಬಿಟ್ಟಿದ್ದರು. ಈ ಹಿನ್ನೆಲೆ ದೇಶದಲ್ಲಿ ಇದುವರೆಗೂ ಕೊರೊನಾ ವೈರಸ್ ನಿಂದ ಇಬ್ಬರು ಪ್ರಾಣ ಬಿಟ್ಟಿರುವುದು ಸ್ಪಷ್ಟವಾಗಿದೆ.
ಭಾರತದ ಬಹುತೇಕ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ
ಕೊರೊನಾ ವೈರಸ್ ಹಾವಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸಿ ಆಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಕ್ಲಬ್-ಪಬ್, ಮಾಲ್, ಸಿನಿಮಾ ಥಿಯೇಟರ್, ಶಾಲಾ-ಕಾಲೇಜುಗಳನ್ನು ಬಂದ್ ಮಾಡುವಂತೆ ಕಟ್ಟಪ್ಪಣೆಯನ್ನು ಹೊರಡಿಸಲಾಗಿದೆ.