Coromandel Express: ಹಳಿತಪ್ಪಿದ ಎಕ್ಸ್ಪ್ರೆಸ್ ರೈಲು: ಹಲವರ ಸಾವಿನ ಶಂಕೆ?
ಭುವನೇಶ್ವರ: ಒಡಿಶಾದ ಬಾಲಸೋರ್ ಪ್ರದೇಶದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಅಪಘಾತವಾದ ತಕ್ಷಣ ಎಕ್ಸ್ಪ್ರೆಸ್ ರೈಲು ಹಳಿತಪ್ಪಿದ್ದು, ಈ ಘಟನೆಯಲ್ಲಿ ಹಲವರು ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ತಕ್ಷಣ ರೈಲ್ವೆ ಇಲಾಖೆ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಅಂದಹಾಗೆ ಶಾಲಿಮಾರ್ & ಚೆನ್ನೈ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಒಡಿಶಾದ (Odisha) ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣ ಸಮೀಪ ಗೂಡ್ಸ್ ರೈಲಿಗೆ ಗುದ್ದಿದೆ. ಇನ್ನು ಈ ಅಪಘಾತದ ತೀವ್ರತೆಗೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನ (Coromandel Express Train) 8 ಬೋಗಿಗಳು ಹಳಿತಪ್ಪಿವೆ ಎಂದು ಹೇಳಲಾಗಿದೆ. ಅಪಘಾತದ ತೀವ್ರತೆ ಕಂಡಿದ್ದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಪರಿಹಾರ ಕಾರ್ಯಾಚರಣೆ ಕೂಡ ಪ್ರಗತಿಯಲ್ಲಿದ್ದು, ಜೀವ ಉಳಿಸಿಕೊಂಡು ನರಳಾಡುತ್ತಿರುವವರು ಘಟನೆ ಭೀಕರತೆ ಹೇಳುತ್ತಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ
ಒಡಿಶಾದ ವಿಶೇಷ ಪರಿಹಾರ ಆಯುಕ್ತರ ಕಚೇರಿ ಸಿಬ್ಬಂದಿ ಸೇರಿದಂತೆ ರಕ್ಷಣಾ ಸಿಬ್ಬಂದಿ ಈಗ ಅಪಘಾತ ಸಂಭವಿಸಿರುವ ಸ್ಥಳಕ್ಕೆ ತೆರಳಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಹಲವು ಬೋಗಿಗಳು ಹಳತಪ್ಪಿ ಬಿದ್ದಿರುವ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವೂ ಇದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಇರುವ ಎಲ್ಲ ಸೌಲಭ್ಯವನ್ನು ರೈಲ್ವೆ ಇಲಾಖೆ ಒದಗಿಸಿದೆ. ಘಟನೆಯ ಬಳಿಕ ಪ್ರಯಾಣಿಕರ ಕುಟುಂಬ ಸದಸ್ಯರು ಆತಂಕಕ್ಕೆ ಒಳಗಾಗಿದ್ದಾರೆ.
#WATCH | Coromandel Express derails near Bahanaga station in Balasore, Odisha. pic.twitter.com/9Lk2qauW9v
— ANI (@ANI) June 2, 2023
ಕೋಚ್ ಪಲ್ಟಿ, ಪ್ರಯಾಣಿಕರ ಗತಿ ಏನು?
ಅವರೆಲ್ಲಾ ಅಂದುಕೊಂಡ ಸ್ಥಳಕ್ಕೆ ಹೋಗಬೇಕು ಅಂತಾ ರೈಲು ಹತ್ತಿದ್ದರು. ಹಾಯಾಗಿ ತಮ್ಮ ಜರ್ನಿ ಎಂಜಾಯ್ ಮಾಡುತ್ತಿದ್ದರು. ಆದರೆ ಕತ್ತಲೆಯ ಒಳಗೆ ದಿಢೀರ್ ಆಘಾತವು ಎದುರಾಗಿದ್ದು, ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಹೀಗೆ ಕ್ಷಣಮಾತ್ರದಲ್ಲಿ ನಡೆದ ಘಟನೆ ಪರಿಣಾಮ ಎಕ್ಸ್ಪ್ರೆಸ್ ರೈಲಿನ ಕೋಚ್ ಅಂದರೆ ಬೋಗಿಗಳು ಪಲ್ಟಿಯಾಗಿ ಬಿದ್ದಿವೆ. ಹೀಗೆ ಪಲ್ಟಿಯಾದ ಕೋಚ್ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಸಿಲುಕಿಕೊಂಡು ನರಳುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಹಲವು ಪ್ರಯಾಣಿಕರು ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಒಂದೇ ಹಳಿಗೆ ಬಂದ ರೈಲುಗಳು?
ಹಾಗೇ ಈ ಅಪಾಘಾತದಲ್ಲಿ ಉಂಟಾದ ಹಾನಿ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ಆದರೆ ಹಲವರಿಗೆ ಪ್ರಾಣಾಪಾಯವಾಗಿರುವ ಆತಂಕವಿದೆ. ಘಟನೆ ಹೇಗೆ ನಡೆದಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಎರಡೂ ರೈಲುಗಳು ಒಂದೇ ಮಾರ್ಗದಲ್ಲಿ ಬಂದಿದ್ದರಿಂದ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಿಗ್ನಲ್ ವೈಫಲ್ಯದಿಂದ ಎರಡೂ ರೈಲುಗಳು ಒಂದೇ ಹಳಿಯಲ್ಲಿ ಬಂದು ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ತನಿಖೆಯ ಬಳಿಕ ಸಂಪೂರ್ಣ ಮಾಹಿತಿ ಹೊರಬೀಳಲಿದೆ.
ಅಂದಹಾಗೆ ಈಗ ಅಪಘಾತಕ್ಕೆ ಒಳಗಾದ ರೈಲು ಪ.ಬಂಗಾಳದ ಶಾಲಿಮಾರ್ ನಿಲ್ದಾಣದಿಂದ ಹೊರಟು ಚೆನ್ನೈನ ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣ ಸೇರುತ್ತದೆ. ರೈಲು ಮಧ್ಯಾಹ್ನ 3.30ಕ್ಕೆ ಪ್ರಯಾಣ ಪ್ರಾರಂಭಿಸಿದ್ದು ಸಂಜೆ 6.30ಕ್ಕೆ ಬಾಲಸೋರ್ ನಿಲ್ದಾಣ ತಲುಪಿತು ಅಂತಾ ಹೇಳಲಾಗಿದೆ. ಹಾಗೇ ಇದು ನಾಳೆ ಸಂಜೆ 4.50ಕ್ಕೆ ಚೆನ್ನೈ ತಲುಪಬೇಕಿತ್ತು, ಆದರೆ ಅಷ್ಟರೊಳಗೆ ಈ ಭೀಕರ ಘಟನೆ ಸಂಭವಿಸಿದೆ. ಇನ್ನು ಸರ್ಕಾರದ ಸಹಾಯವಾಣಿಗೆ ಈ ಸಂಖ್ಯೆ ಬಳಸಬಹುದು: 033-26382217, 8972073925, 67822 62286, 9332392339












Click it and Unblock the Notifications