ಶಾಸಕರು, ಸಂಸದರ ಮೇಲಿನ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ
ನವದೆಹಲಿ 1: ಐತಿಹಾಸಿಕ ತೀರ್ಪು ನೀಡಿರುವ ಸುಪ್ರಿಂ ಕೋರ್ಟ್ ಸಂಸದರು ಮತ್ತು ಶಾಸಕರ ಮೇಲಿನ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ತ್ವರಿತಗತಿ ನ್ಯಾಯಾಲಯ (ಫಾಸ್ಟ್ ಟ್ರಾಕ್ ಕೋರ್ಟ್) ಮಾದರಿಯಲ್ಲಿ ಈ ನ್ಯಾಯಾಲಯ ಸ್ಥಾಪನೆ ಮಾಡುವಂತೆ ಖಡಕ್ ಆದೇಶ ನೀಡಿದೆ.
ಶಾಸಕರು ಮತ್ತು ಸಂಸದರ ಮೇಲಿನ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲು ಎಷ್ಟು ಹಣ ಖರ್ಚಾಗಲಿದೆ ಎಂಬುದನ್ನೂ ನ್ಯಾಯಾಲಯಕ್ಕೆ ಆರು ವಾರಗಳ ಒಳಗೆ ತಿಳಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಮತ್ತು ಮುಂದಿನ ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ಮುಂದೂಡಿದೆ.

ಇದೇ ವೇಳೆ ಸುಪ್ರಿಂ ಕೋರ್ಟ್ ಶಾಸಕರು ಮತ್ತು ಸಂಸದರ ಮೇಲಿರುವ 1581 ಪ್ರಕರಣಗಳ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ. ಈ ಪ್ರಕರಣಗಳಲ್ಲಿ ಎಷ್ಟು ಒಂದು ವರ್ಷದೊಳಗೆ ಇತ್ಯರ್ಥವಾಗಿದೆ, ಎಷ್ಟು ಪ್ರಕರಣಗಳಲ್ಲಿ ತೀರ್ಪು ಬಂದಿದೆ ಎಂಬುದರ ವಿವರ ನೀಡುವಂತೆಯೂ ಹೇಳಿದೆ.
ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾ. ನವೀನ್ ಸಿನ್ಹಾ ಅವರಿದ್ದ ನ್ಯಾಯಪೀಠ 2014ರ ನಂತರ ರಾಜಕಾರಣಿಗಳ ಮೇಲೆ ದಾಖಲಾದ ಕ್ರಿಮಿನಲ್ ಪ್ರಕರಣದ ವಿವರಗಳನ್ನೂ ಕೇಳಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಯಾದವರಿಗೆ ಚುನಾವಣೆಯಲ್ಲಿ ನಿಲ್ಲದಂತೆ ಆಜೀವ ನಿಷೇಧ ಹೇರಬೇಕು ಎಂಬ ಚುನಾವಣಾ ಆಯೋಗ ಮತ್ತು ಕಾನೂನು ಆಯೋಗದ ಶಿಫಾರಸ್ಸನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಕೇಂದ್ರ ಸರ್ಕಾರ ವಿಚಾರಣೆ ವೇಳೆ ಹೇಳಿದೆ.
ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ್ ಸಲ್ಲಿಸಿದ ಸಾರ್ವಜನಕಿ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಈ ಎಲ್ಲಾ ಘಟನೆಗಳು ನಡೆದಿವೆ. ತಮ್ಮ ಅರ್ಜಿಯಲ್ಲಿ ಅಶ್ವಿನಿ ಕುಮಾರ್ ಚುನಾವಣೆಗೆ ಸ್ಪರ್ಧಿಸಿಲು ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಗರಿಷ್ಠ ವಯೋಮಿತಿಯನ್ನೂ ನಿಗದಿ ಮಾಡಿ ಚುನಾವಣಾ ಆಯೋಗ ಮತ್ತು ಕೇಂದ್ರಕ್ಕೆ ಸೂಚನೆ ನೀಡುವಂತೆಯೂ ಸುಪ್ರಿಂ ಕೋರ್ಟ್ ಬಳಿ ಕೇಳಿಕೊಂಡಿದ್ದಾರೆ.












Click it and Unblock the Notifications