ಮೊದ್ಲು ಕೆಲ್ಸ ಮಾಡಿ,ನಂತರ ಜಪಾನ್ ನಲ್ಲಿ ಡ್ರಮ್ ಬಾರ್ಸಿ
ನವದೆಹಲಿ, ಅಮೇಠಿ ಸೆ 5: ಪ್ರಧಾನಿ ನರೇಂದ್ರ ಮೋದಿಯ ಇತ್ತೀಚಿನ ತನ್ನ ಜಪಾನ್ ಭೇಟಿಯ ವೇಳೆ ಡ್ರಮ್ ಬಾರಿಸಿದ್ದು ಕಾಂಗ್ರೆಸ್ ಯುವರಾಜರಿಗೆ ಸರಿಕಾಣಿಸಲಿಲ್ಲವೇನೋ? ಕಟುವಾದ ಶಬ್ದದಿಂದ ಮೋದಿ ಡೋಲು ಬಾರಿಸಿದ್ದನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಭಾರತದಲ್ಲಿ ಸಮಸ್ಯೆಗಳು ತಾಂಡವಾಡುತ್ತಿವೆ. ಮೊದಲು ದೇಶದ ಸಮಸ್ಯೆಗಳನ್ನು ಪರಿಹರಿಸಿ ನಂತರ ಡ್ರಮ್ ಬಾರಿಸಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಇನ್ನಿಲ್ಲದ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ತನ್ನ ನೂರು ದಿನದ ಅವಧಿಯಲ್ಲಿ ಸಾಧಿಸಿದ್ದು ಶೂನ್ಯ. ಜನರನ್ನು ಮೂರ್ಖರನ್ನಾಗಿಸ ಬೇಡಿ ಎಂದು ರಾಹುಲ್, ಮೋದಿಗೆ ಕಿವಿಮಾತನ್ನು ಹೇಳಿದ್ದಾರೆ.
ಮೋದಿಯ ನೂರು ದಿನದ ಆಡಳಿತದಲ್ಲಿ ದೇಶದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಭ್ರಷ್ಟಾಚಾರ, ಹಣದುಬ್ಬರ, ನೀರು ಮತ್ತು ವಿದ್ಯುತ್ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ.
ಹತ್ತು ಹಲವಾರು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ನೀವು, ಮೊದಲು ದೇಶದ ಎದುರಿಸುತ್ತಿರುವ ಜ್ವಲಂತ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕು, ಬದಲಾಗಿ ಜಪಾನ್ ನಲ್ಲಿ ಡ್ರಮ್ ಬಾರಿಸುವುದಲ್ಲ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
ಅಮೇಠಿ ಮತದಾರರ ಪ್ರಶ್ನೆಗೆ ತಬ್ಬಿಬ್ಬಾದ ರಾಹುಲ್. ಮುಂದೆ ಓದಿ..
ಅಮೇಠಿಗೆ ಬಂದಿದ್ದ ಕಾಂಗ್ರೆಸ್ ಉಪಾಧ್ಯಕ್ಷ
ಅಮೇಠಿ ಜನರ ಸಮಸ್ಯೆಗಳನ್ನು ಆಲಿಸಲು ಬಂದಿದ್ದ ರಾಹುಲ್ ಗಾಂಧಿ, ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿನ ವಿದ್ಯುತ್ ಸಮಸ್ಯೆಯ ಬಗ್ಗೆ ಮತದಾರರು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದರು. ಮತದಾರ ಕೇಳಿದ ಪ್ರಶ್ನೆಗೆ ಉತ್ತರವಿಲ್ಲದೇ ಕೇಂದ್ರ, ರಾಜ್ಯ ಸರಕಾರ ಕಾರಣ ಎನ್ನುವ ಹಾರಿಕೆಯ ಉತ್ತರ ನೀಡಿದ ಘಟನೆ ವರದಿಯಾಗಿದೆ.
ಎರಡು ದಿನದ ಭೇಟಿಗೆ ಆಗಮಿಸಿದ ರಾಹುಲ್
ಎರಡು ದಿನದ ಭೇಟಿಗೆ ಆಗಮಿಸಿರುವ ಕ್ಷೇತ್ರದ ಜನಪ್ರತಿನಿಧಿ ರಾಹುಲ್ ಗಾಂಧಿ, ಶಿಕ್ಷಕರ ದಿನಾಚರಣೆಯ ದಿನ (ಸೆ 5) ಕ್ಷೇತ್ರದಲ್ಲಿನ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಎಲ್ಲಾ ಓಕೆ ಭಗವದ್ಗೀತೆ ಯಾಕೆ ಎಂದಿದ್ದ ಶರದ್ ಪವಾರ್
ಮೋದಿ ಜಪಾನ್ ಭೇಟಿಯ ವೇಳೆ ಅಲ್ಲಿನ ಪ್ರಧಾನಿಗೆ ಭಗವದ್ಗೀತೆ ನೀಡಿದ್ದರು. ಇದಕ್ಕೆ ತಕರಾರು ಎತ್ತಿದ್ದ ಯುಪಿಎ ಮೈತ್ರಿಕೂಟದ ಅಂಗಪಕ್ಷವಾದ ಎನ್ಸಿಪಿ ಮುಖಂಡ ಶರದ್ ಪವಾರ್, ಭಗವದ್ಗೀತೆ ಮಾತ್ರ ಯಾಕೆ, ಕುರಾನ್ ಯಾಕೆ ನೀಡಲಿಲ್ಲ ಎಂದು ಪ್ರಶ್ನಿಸಿದ್ದರು.
ರಾಹುಲ್ ಹೇಳಿಕೆಗೆ ಬಿಜೆಪಿ ವ್ಯಂಗ್ಯ
ಮೋದಿ ಜಪಾನ್ ಪ್ರವಾಸದ ಬಗ್ಗೆ ತಮಾಷೆ ಮಾಡಿದ್ದ ರಾಹುಲ್ ಗಾಂಧಿಗೆ ಬಿಜೆಪಿ ಟಾಂಗ್ ನೀಡಿದೆ. ರಾಹುಲ್ ಮಾತಿಗೆ ಕಾಂಗ್ರೆಸ್ ನಲ್ಲಿ ಯಾರೂ ಬೆಲೆ ಕೊಡುತ್ತಿಲ್ಲ. ನಾವು ಯಾಕೆ ಅವರ ಮಾತಿಗೆ ಬೆಲೆ ಕೊಡಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಸುಮ್ಮನಿದ್ದರೆ ಕಾಂಗ್ರೆಸ್ಸಿಗೆ ಇನ್ನೂ ಹೆಚ್ಚಿನ ಸೀಟು ಬರುತ್ತಿತ್ತು ಎಂದು ವೆಂಕಯ್ಯ ನಾಯ್ಡು ಲೇವಡಿ ಮಾಡಿದ್ದಾರೆ.
ಜಪಾನ್ ಭೇಟಿಗೆ ಕಾಂಗ್ರೆಸ್ಸಿಗರು ಹರುಷ ವ್ಯಕ್ತ ಪಡಿಸಬೇಕು
ಮೋದಿಯವರ ಜಪಾನ್ ಭೇಟಿಗೆ ಕಾಂಗ್ರೆಸ್ಸಿಗರು ಹರುಷ ವ್ಯಕ್ತ ಪಡಿಸಬೇಕು. ಜಪಾನ್ ಪ್ರವಾಸದ ವೇಳೆ ಪ್ರಧಾನಿಯವರು ಸರಕಾರದ ಮುಂದಿನ ಯೋಜನೆಯ ಬಗ್ಗೆ ಮಾತನಡಿದ್ದಾರೆ. ಹದಿನೈದು ವರ್ಷದಲ್ಲಿ ಕಾಂಗ್ರೆಸ್ ಸರಕಾರದ ವೈಫಲ್ಯತೆಯ ಬಗ್ಗೆ ಮಾತನಾಡಲಿಲ್ಲ - ಬಿಜೆಪಿ ವಕ್ತಾರ ಮುಕ್ತಾರ್ ಅಬ್ಬಾಸ್ ನಖ್ವಿ