ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಶಾಸಕರನ್ನು ಬಿಜೆಪಿಯಿಂದ ರಕ್ಷಿಸಬೇಕು ಎಂದ ಕೇರಳದ ಆಡಳಿತರೂಢ ಪಕ್ಷ
ತಿರುವನಂತಪುರಂ, ಮೇ. 16: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯ ನಡುವೆ ಗೋವಾದಲ್ಲಿ ಭಾರತೀಯ ಜನತಾದಳ ಪಕ್ಷವು ಶಾಸಕರನ್ನು ಆಪರೇಷನ್ ಕಮಲ ಮಾಡಿದಂತೆ ಕರ್ನಾಟಕದಲ್ಲಿಯೂ ಹೊಸದಾಗಿ ಆಯ್ಕೆಯಾದ ಶಾಸಕರನ್ನು ಬಿಜೆಪಿಯಿಂದ ಆಮಿಷಕ್ಕೆ ಒಳಗಾಗದಂತೆ ರಕ್ಷಿಸಬೇಕು ಎಂದು ಕೇರಳದ ಆಡಳಿತಾರೂಢ ಸಿಪಿಐ(ಎಂ) ಹೇಳಿದೆ.
ಕಾಂಗ್ರೆಸ್ ದುರ್ಬಲವಾಗಿದೆ ಮತ್ತು ಬಿಜೆಪಿಯನ್ನು ಸ್ವಂತವಾಗಿ ಎದುರಿಸಲು ಅಸಮರ್ಥವಾಗಿದೆ ಎಂದು ಸಿಪಿಐ(ಎಂ) ಹೇಳಿದೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇಸರಿ ಪಕ್ಷವನ್ನು ಸೋಲಿಸಲು ರಾಜ್ಯವಾರು ಮೈತ್ರಿಯಾಗಬೇಕು ಎಂದು ಕೇರಳದ ಆಡಳಿತರೂಢ ಪಕ್ಷ ಆಗ್ರಹಿಸಿದೆ.

"ರಾಷ್ಟ್ರೀಯ ಮಟ್ಟದ ಮೈತ್ರಿ ಸಹಕಾರಿಯಾಗುವುದಿಲ್ಲ. ನಾವು ರಾಜ್ಯ ಮಟ್ಟದಲ್ಲಿ ಬಿಜೆಪಿ ವಿರೋಧಿ ಗುಂಪುಗಳನ್ನು ಒಗ್ಗೂಡಿಸಿ ಪ್ರತಿ ರಾಜ್ಯದಲ್ಲೂ ಬಿಜೆಪಿಯನ್ನು ಸೋಲಿಸಬೇಕಾಗಿದೆ. ಅದೊಂದೇ ಮುಂದಿನ ದಾರಿ" ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್ ಹೇಳಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒಂದು ದಿನದ ಹಿಂದೆಯೂ ಇದೇ ತಂತ್ರವನ್ನು ಸೂಚಿಸಿದ್ದರು. ಬಿಜೆಪಿಯನ್ನು ಎದುರಿಸಲು ಸಮರ್ಥವಾಗಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂಬ ವಾದವು ಕೇವಲ ವಾದವಾಗಿದೆ ಎಂದು ಗೋವಿಂದನ್ ವ್ಯಂಗ್ಯವಾಡಿದ್ದಾರೆ.
"ಕಾಂಗ್ರೆಸ್ನ ಬಗ್ಗೆ ತಿಳಿದಿರುವ ಪ್ರತಿಯೊಬ್ಬರಿಗೂ ಅವರು ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸುವ ಏಕೈಕ ರಾಜ್ಯ ಕರ್ನಾಟಕ ಎಂದು ತಿಳಿದಿದೆ. ಕರ್ನಾಟಕದ ಜೊತೆಗೆ ಗುಜರಾತ್, ರಾಜಸ್ಥಾನ ಮತ್ತು ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಉತ್ತಮ ಸ್ಥಾನಗಳನ್ನು ಗಳಿಸಬಹುದು. ಆದರೆ ಅಲ್ಲಿಯೂ ಕಾಂಗ್ರೆಸ್ ದುರ್ಬಲ ಸ್ಥಿತಿಯಲ್ಲಿದೆ. ಈಗಲೂ ಅವರಲ್ಲಿ ಆಂತರಿಕ ಘರ್ಷಣೆಗಳಿವೆ" ಎಂದು ವಾಗ್ದಾಳಿ ನಡೆಸಿದ್ದಾರೆ.

ಇದರ ಜೊತೆಗೆ ಬಿಜೆಪಿಯು ತಮ್ಮ ಶಾಸಕರನ್ನು ಅಪರೇಷನ್ ಕಮಲಕ್ಕೆ ಒಳಗಾಗಿಸುವ ಪ್ರಯತ್ನಗಳ ಬಗ್ಗೆ ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರಬೇಕು. ಕರ್ನಾಟಕಕ್ಕೆ ಮುಖ್ಯಮಂತ್ರಿ ಮತ್ತು ಸಂಪುಟ ಸಮಿತಿ ಸದಸ್ಯರನ್ನು ನಿರ್ಧರಿಸುವಲ್ಲಿ ಕಾಂಗ್ರೆಸ್ ಆದಷ್ಟು ಬೇಗ ಗಮನಹರಿಸಬೇಕು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಸಲಹೆ ನೀಡಿದ್ದಾರೆ.
"ಶಾಸಕರನ್ನು ಖರೀದಿಸುವ ಶಕ್ತಿ ಬಿಜೆಪಿಗಿದೆ ಎಂಬುದು ಎಲ್ಲರಿಗೂ ಗೊತ್ತು. ಗೋವಾದಲ್ಲಿ ಆಗ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದ ನಡುವೆಯೇ ಆಪರೇಷನ್ ಕಮಲ ನಡೆದಿದೆ" ಎಂದು ಉಲ್ಲಖಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಗೋವಾದಲ್ಲಿ ವಿಧಾನಸಭೆ ಚುನಾವಣೆ ನಡೆದ ಕೆಲವೇ ತಿಂಗಳುಗಳಲ್ಲಿ ಆಡಳಿತಾರೂಢ ಬಿಜೆಪಿಗೆ 11 ಕಾಂಗ್ರೆಸ್ ಶಾಸಕರ ಪೈಕಿ ಎಂಟು ಶಾಸಕರು ಪಕ್ಷಾಂತರವಾಗಿದ್ದರು.
ಇತ್ತ, ಗೋವಿಂದನ್ ಅವರ ಹೇಳಿಕೆಯು ಅವರ ಪಕ್ಷದ ಸಹೋದ್ಯೋಗಿ ಮತ್ತು ಮೀನುಗಾರಿಕಾ ಸಚಿವ ಸಾಜಿ ಚೆರಿಯನ್ ಅವರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿದೆ. ಕಾಂಗ್ರೆಸ್ ಭಾರತದ ಪ್ರಬಲ ಪಕ್ಷಗಳಲ್ಲಿ ಒಂದಾಗಿದೆ ಮತ್ತು ಬಿಜೆಪಿ ವಿರುದ್ಧದ ಹೋರಾಟದಲ್ಲಿ ಅವರು ನೇತೃತ್ವ ವಹಿಸಿಕೊಳ್ಳಲಿ ಎಂದು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ, ಇದೇ ವೇಳೆ ಕೇರಳದ ವಿವಿಧ ವಿಷಯಗಳ ಬಗ್ಗೆ ಕಾಂಗ್ರೆಸ್ನ ನಿಲುವನ್ನು ಒಪ್ಪುವುದಿಲ್ಲ ಎಂದೂ ಹೇಳಿದ್ದಾರೆ.
ರಾಜ್ಯದಲ್ಲಿ ಇನ್ನು ಸಿಎಂ ಯಾರು ಎಂಬುದನ್ನು ಕಾಂಗ್ರೆಸ್ ನಿರ್ಧರಿಸಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಸಿಎಂ ಹುದ್ದೆಗೆ ಭಾರೀ ಪೈಪೋಟಿಯಿದೆ. ಇದರ ಜೊತೆಗೆ ದಲಿತ ಸಿಎಂ ಬೇಕು ಎಂದು ಜಿ.ಪರಮೇಶ್ವರ ಅಭಿಮಾನಿಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಲಿಂಗಾಯತರು ಕೂಡ ಲಿಂಗಾಯತ ಸಿಎಂಗೆ ಬೇಡಿಕೆಯಿಟ್ಟಿದ್ದಾರೆ.












Click it and Unblock the Notifications