ಲಂಚ: ಜೈಲು ಪಾಲಾದ ಮಸೂದ್, ಸಂಸದ ಸ್ಥಾನ ಹೋಯ್ತು

66 ವರ್ಷದ ರಶೀದ್ ಮಸೂದ್ ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಿಬಿಐ ವಿಶೇಷ ನ್ಯಾಯಾಲಯ ಕಳೆದ ಗುರುವಾರವೇ ಘೋಷಿಸಿತ್ತು. ಆದರೆ ಅವರಿಗೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಿದ್ದು, 4 ವರ್ಷ ಜೈಲುವಾಸ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಂಸತ್ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ.
ಹಿಂದಿನ ಜನತಾ ಪ್ರಾತಿನಿಧ್ಯ ಕಾಯಿದೆಯನ್ವಯ ನ್ಯಾಯಾಲಯ ಅಪರಾಧಿ ಎಂದು ತೀರ್ಪಿತ್ತರೂ ಮೇಲ್ಮನವಿ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಸಂಸದರು ಅಥವಾ ಶಾಸಕರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿತ್ತು.
ಆದರೆ ಜನತಾ ಪ್ರಾತಿನಿಧ್ಯ ಕಾಯಿದೆಯ ಈ ವಿಧಿಯನ್ನು (subsection 4 of Section 8 of Representation of the People Act) ಸುಪ್ರೀಂಕೋರ್ಟ್ ಜುಲೈ 10ರಂದು ರದ್ದು ಪಡಿಸಿ, ಜುಲೈ 10ರಿಂದಲೇ ಹೊಸ ಕಾನೂನನ್ನು ಜಾರಿಗೆ ತರಬೇಕು ಎಂದು ಕೇಂದ್ರಕ್ಕೆ ಖಡಕ್ ಆದೇಶ ನೀಡಿತ್ತು. ಹಾಗಾಗಿ ರಶೀದ್ ಮಸೂದ್ ರಾಜ್ಯಸಭೆಯಿಂದ ಸೀದಾ ಜೈಲಿನೊಳಕ್ಕೆ ಪ್ರವೇಶಿಸಬೇಕಿದೆ. ಮತ್ತು ಮುಂದೆಂದೂ ಅವರು ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ.
ವಿಪಿ ಸಿಂಗ್ ಸರಕಾರದಲ್ಲಿ 1990-91ರಲ್ಲಿ ಆರೋಗ್ಯ ಸಚಿವರಾಗಿದ್ದ ಮಸೂದ್, ತ್ರಿಪುರಾ ವೈದ್ಯಕೀಯ ಕಾಲೇಜಿನಲ್ಲಿ ಅನರ್ಹರಿಗೆ ಎಂಬಿಬಿಎಸ್ ಸೀಟ್ ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಮಸೂದ್ ಕರಾಮತ್ತಿನಿಂದ ಸೀಟು ಗಿಟ್ಟಿಸಿದ್ದ 9 ವಿದ್ಯಾರ್ಥಿಗಳನ್ನೂ ದೋಷಿ ಎಂದು ಘೋಷಿಸಲಾಗಿದೆ.
ದುರ್ದೈವವೆಂದರೆ ಅವರಲ್ಲೊಬ್ಬ ಮಸೂದ್ ಸಂಬಂಧಿಕನಾಗಿದ್ದು, ಬಾಲಾಪರಾಧಿಯಾಗಿದ್ದಾನೆ. ಪ್ರಕರಣದಲ್ಲಿ ಅಂದಿನ ತ್ರಿಪುರಾ ಮುಖ್ಯಮಂತ್ರಿ ಮತ್ತು ಸುಧೀರ್ ರಂಜನ್ ಮಜುಂದಾರ್ ಮತ್ತು ಆರೋಗ್ಯ ಸಚಿವ ಕಾಶಿ ರಾಮ್ ರಿಯಾಂಗ್ ಸಹ ಆಪಾದಿತರಾಗಿದ್ದರು. ಆದರೆ ಅವರಿ ವಿಚಾರಣೆ ಹಂತದಲ್ಲಿ ಇಹಲೋಕ ವ್ಯಾಪಾರ ಮುಗಿಸಿದ್ದರು.












Click it and Unblock the Notifications