ಸಮೀಕ್ಷೆ ನಿಜವಾದರೆ ಕಾಂಗ್ರೆಸ್ ಕಥೆ ಗೋವಿಂದ ಗೋವಿಂದ!
Recommended Video

ನವದೆಹಲಿ, ಡಿಸೆಂಬರ್ 18 : 'ಹಿಂದೂತ್ವದ ಪ್ರಯೋಗಶಾಲೆ' ಎಂದೇ ಕರೆಯಲಾಗಿರುವ ಗುಜರಾತ್ ನಲ್ಲಿ ಕಡೆಯಬಾರಿಗೆ ವಿಜಯದ ವಾಸನೆಯನ್ನು ಕಾಂಗ್ರೆಸ್ ಕುಡಿದಿದ್ದು 1995ರಲ್ಲಿ. ನಂತರ ಸತತ 5 ಚುನಾವಣೆಯಲ್ಲಿಯೂ ಬಿಜೆಪಿಯದ್ದೇ ಸಾರ್ವಭೌಮತ್ವ.
ಈಗ 2017ರಲ್ಲಿ ಸತತ 6ನೇ ಬಾರಿಗೆ ವಿಜಯಧ್ವಜ ಹಾರಿಸಬೇಕೆಂದು ಭಾರತೀಯ ಜನತಾ ಪಕ್ಷ ಕಾತುರದಿಂದ ಎದುರುನೋಡುತ್ತಿದ್ದರೆ, ಸೋಲಿನ ಸರಪಳಿಯನ್ನು ತುಂಡರಿಸಿ ಹೊಸ ಇತಿಹಾಸವನ್ನು ಸೃಷ್ಟಿಸಲು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಚಾತಕ ಪಕ್ಷಿಯಂತೆ ಕಾದುಕುಳಿತಿದೆ.
ಗಮನಿಸಬೇಕಾದ ಅಂಶವೆಂದರೆ, ರಾಹುಲ್ ಗಾಂಧಿಯವರು ಮತ್ತು ನರೇಂದ್ರ ಮೋದಿಯವರು ಗುಜರಾತ್ ನಲ್ಲಿರುವ ಎಲ್ಲ ದೇವಸ್ಥಾನಗಳಿಗೆ ಭೇಟಿ ನೀಡಿ ಆಯಾ ದೇವತೆಗಳ ಆಶೀರ್ವಾದ ಪಡೆದಿದ್ದಾರೆ. ಅಂತಿಮವಾಗಿ ಸರಕಾರ ರಚಿಸಲು ಆಶೀರ್ವಾದ ನೀಡಬೇಕಾದವರು ಮತದಾರ ದೇವರುಗಳು.
ಒಂದು ಮಾಹಿತಿಯ ಪ್ರಕಾರ, ಪಟೇಲ್ ಸಮುದಾಯದ ನಾಯಕರ ಜೊತೆ ಕೈಜೋಡಿಸಿ ಕಾಂಗ್ರೆಸ್ ಭಾರೀ ಪ್ರಮಾದವೆಸಗಿದೆ. ಇದರಿಂದ ಖಚಿತವಾಗಿ ಬರಬೇಕಾಗಿದ್ದ ಮತಗಳೂ ಒಡೆದು ಅನ್ಯ ಪಕ್ಷಗಳ ಪಾಲಾಗಿವೆ. ಗುಜರಾತಿನಲ್ಲಿ ಜಾತಿ ಒಗ್ಗಟ್ಟು ಎಂದೂ ಕಂಡೇ ಇಲ್ಲ. ಹೀಗಾಗಿ ಪಟೇಲರು ಹೆಚ್ಚಾಗಿದ್ದ ಪ್ರದೇಶದಲ್ಲಿಯೂ ಕಾಂಗ್ರೆಸ್ಸಿಗೆ ಕಡಿಮೆ ಮತ ಬೀಳಬಹುದು ಎನ್ನಲಾಗುತ್ತಿದೆ.

ಸಮೀಕ್ಷೆ ನಿಜವಾದರೆ ಕಾಂಗ್ರೆಸ್ ಕಥೆ ಗೋವಿಂದ
ಚುನಾವಣಾತ್ತರ ಸಮೀಕ್ಷೆಗಳು ಒಂದು ವೇಳೆ ನಿಜವೇ ಆದರೆ, ಗುಜರಾತಿನಲ್ಲಿ ಕಾಂಗ್ರೆಸ್ ಕಥೆ ಮುಗಿದಂತೆ. ಏಕೆಂದರೆ, ಪ್ರತಿ ಸಮೀಕ್ಷೆಗಳು ಬಿಜೆಪಿಗೇ ಬಹುಮತ ದೊರೆಯಲಿದೆ ಎಂದು ಸ್ಪಷ್ಟವಾಗಿ ತಿಳಿಸಿವೆ. ಸರಳ ಬಹುಮತಕ್ಕೆ ಬೇಕಿರುವುದು 93 ಕ್ಷೇತ್ರಗಳು. ಟ್ರೆಂಡ್ ನೋಡಿದರೆ, ಈ ಕ್ಷೇತ್ರಗಳನ್ನು ಗೆಲ್ಲುವುದು ಬಿಜೆಪಿಗೆ ಕಷ್ಟವೇನೂ ಆಗಲಾರದು. ಆದರೆ, ಇತಿಹಾಸ ಗಮನಿಸಿದರೆ, ಎಕ್ಸಿಟ್ ಪೋಲ್ ಗಳು ಕೂಡ ಉಲ್ಟಾಪುಲ್ಟಾ ಆಗಿವೆ.

ಕಾಂಗ್ರೆಸ್ಸಿಗೆ ಮುಳುವಾಗಲಿದೆಯಾ ಪಟೇಲ್ ಮೈತ್ರಿ?
ಕಾಂಗ್ರೆಸ್ಸಿಗೆ ಮತ್ತೊಂದು ಭಾರೀ ಹೊಡೆತ ಬಿದ್ದಿದ್ದು, ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೇವಾನಿಯಿಂದ. ಆರಂಭದ ದಿನಗಳಲ್ಲಿ ಮೂವರೂ ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತೇವೆಂದು ಭರವಸೆ ನೀಡಿದ್ದರೂ, ಕಡೆಯ ಘಳಿಗೆಯಲ್ಲಿ ಅಲ್ಪೇಶ್ ಮತ್ತು ಜಿಗ್ನೇಶ್ ಕೈಎತ್ತಿದರು. ಹಾರ್ದಿಕ್ ಪಟೇಲ್ ಬಹಿರಂಗವಾಗಿ ಬೆಂಬಲ ನೀಡಿದ್ದಾರಾದರೂ ಅವು ಮತಗಳಿಕೆಯಾಗಿ ಪರಿವರ್ತನೆಯಾಗುತ್ತಾವಾ?

ಮೋದಿಯ ವ್ಯಕ್ತಿತ್ವದ ಪ್ರಭಾವ ಬಿಜೆಪಿಗೆ ವರ
ಕಳೆದ ನಾಲ್ಕು ಚುನಾವಣೆಗಳಲ್ಲಿ ನರೇಂದ್ರ ಮೋದಿಯ ವ್ಯಕ್ತಿತ್ವದ ಪ್ರಭಾವ ಬಿಜೆಪಿಗೆ ವರವಾಗಿ ಪರಿಣಮಿಸಿತ್ತು. ಈಬಾರಿ ಅವರು ರಾಜ್ಯದ ಉದ್ದಗಲಕ್ಕೂ ಪ್ರಚಾರ ಮಾಡಿದ್ದಾರಾದರೂ, ಅವರ ನೇತೃತ್ವದಲ್ಲಿ ಚುನಾವಣೆ ನಡೆದಿಲ್ಲ. ಅಲ್ಲದೆ, ನರೇಂದ್ರ ಮೋದಿಯವರನ್ನು ಮೀರಿಸುವಂಥ ನಾಯಕರೂ ಬಿಜೆಪಿಯಲ್ಲಿ ಇಲ್ಲದಿರುವುದು ಪಕ್ಷಕ್ಕೆ ಮುಳುವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಮುಂದಿನ ವರ್ಷ ಬರಲಿವೆ 8 ಚುನಾವಣೆಗಳು
ಒಂದು ವೇಳೆ ಗುಜರಾತ್ ನಲ್ಲಿ ನಿರಾಯಾಸವಾಗಿ ಬಿಜೆಪಿ ಗೆದ್ದಿದ್ದೇ ಆದರೆ, ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಸಂದೇಶ ರವಾನಿಸಿದಂತಾಗುತ್ತದೆ. ಕರ್ನಾಟಕ ಮತ್ತಿತರ ಏಳು ರಾಜ್ಯಗಳ ಚುನಾವಣೆ 2018ರಲ್ಲಿ ನಡೆಯಲಿದೆ. ಒಂದು ವೇಳೆ ಬಿಜೆಪಿ ಸೋತರೆ ಅದು ಭಾರತದ ರಾಜಕೀಯ ನಕ್ಷೆಯನ್ನು ಕೂಡ ಬದಲಿಸಬಲ್ಲದು.












Click it and Unblock the Notifications