ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲದ ಕ್ಷೇತ್ರದಲ್ಲಿ ರಾಹುಲ್ ಗಾಂಧಿ, ಸೋನಿಯಾ ಮತದಾನ
ನವದೆಹಲಿ, ಮೇ. 25: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಶನಿವಾರ ನಡೆಯುತ್ತಿದೆ. ಈ ಹಂತದಲ್ಲಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UTs) 58 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ದೆಹಲಿಯ ಲೋಕಸಭಾ ಕ್ಷೇತ್ರದಲ್ಲೂ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಗಾಂಧಿ ಕುಟುಂಬ ಮತದಾನ ಮಾಡಿದೆ.
ಕಾಂಗ್ರೆಸ್ ಹಿರಿಯ ನಾಯಕಿಯಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಬರ್ಟ್ ವಾದ್ರಾ ತಮ್ಮ ಮಕ್ಕಳ ಜೊತೆಗೆ ಮಯದಾನ ಮಾಡಿದ್ದಾರೆ. ಮತದಾನದ ಬಳಿಕ ಜನರು ತಪ್ಪಿಸಿಕೊಳ್ಳದೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಇಲ್ಲದ ಕ್ಷೇತ್ರದಲ್ಲಿ ಗಾಂಧಿ ಕುಟುಂಬದಿಂದ ಮತದಾನ!
ಇನ್ನು, ಆರನೇ ಹಂತದ ಮತದಾನದಲ್ಲಿ ಗಾಂಧಿ ಕುಟುಂಬ ಮತದಾನ ಮಾಡಿದೆ. ಇದರಲ್ಲಿ ವಿಶೇಷವೊಂದಿದೆ. ಅದೇನೆಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ ಚಲಾಯಿಸಿದ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ಹೌದು... ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಮ್ಮ ಹಕ್ಕು ಚಲಾಯಿಸಿದ್ದು ಇದೇ ಮೊದಲ ಬಾರಿಗೆ ನವದೆಹಲಿ ಕ್ಷೇತ್ರದಲ್ಲಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಜಂಟಿಯಾಗಿ ಇಂಡಿಯಾ (I.N.D.I.A ) ಒಕ್ಕೂಟದ ಭಾಗವಾಗಿ ಎಎಪಿಯ ಸೋಮನಾಥ್ ಭಾರ್ತಿ ಅವರನ್ನು ಕಣಕ್ಕಿಳಿಸಿದೆ.
ಹೀಗಾಗಿ ಮೊದಲ ಬಾರಿಗೆ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಇಲ್ಲದ ಕ್ಷೇತ್ರದಲ್ಲಿ ಮತದಾನ ಮಾಡಿದ್ದಾರೆ. ಮತ ಚಲಾಯಿಸಿದ ನಂತರ, ರಾಹುಲ್ ಗಾಂಧಿ ತಮ್ಮ ತಾಯಿಯ ಜೊತೆಗೆ ಸೆಲ್ಫಿಗೆ ಫೋಸ್ ನೀಡಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟರ್ನಲ್ಲಿ ಸೋನಿಯಾ ಗಾಂಧಿ ಅವರೊಂದಿಗೆ ಖುಷಿಯಿಂದ ಶಾಯಿ ಹಾಕಿದ ಬೆರಳುಗಳನ್ನು ತೋರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ದೇಶವಾಸಿಗಳೇ!: ರಾಹುಲ್ ಗಾಂಧಿ ಸಂದೇಶ
ಮತದಾನದ ನಂತರ ಫೋಟೋ ಜೊತೆಗೆ ಮತದಾರರಿಗೆ ಸಂದೇಶವೊಂದನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. "ದೇಶವಾಸಿಗಳೇ! ಮೊದಲ ಐದು ಹಂತದ ಮತದಾನದಲ್ಲಿ ನೀವು ಸುಳ್ಳು, ದ್ವೇಷ ಮತ್ತು ಪ್ರಚಾರವನ್ನು ತಿರಸ್ಕರಿಸಿದ್ದೀರಿ ಮತ್ತು ನಿಮ್ಮ ಜೀವನಕ್ಕೆ ಸಂಬಂಧಿಸಿದ ತಳಮಟ್ಟದ ಸಮಸ್ಯೆಗಳಿಗೆ ಆದ್ಯತೆ ನೀಡಿದ್ದೀರಿ" ಎಂದು ಹೇಳಿದ್ದಾರೆ.
"ನನ್ನ ತಾಯಿ ಮತ್ತು ನಾನು ನಮ್ಮ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಈ ಮಹಾನ್ ಹಬ್ಬಕ್ಕೆ ಕೊಡುಗೆ ನೀಡಿದ್ದೇವೆ. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಮನೆಗಳಿಂದ ಹೊರಗೆ ಬಂದು ನಿಮ್ಮ ಹಕ್ಕುಗಳು ಮತ್ತು ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಮತ ಚಲಾಯಿಸಿ" ಎಂದು ತಮ್ಮ ಸಂದೇಶ ನೀಡಿದ್ದಾರೆ.
"30 ಲಕ್ಷ ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮತ್ತು ಯುವಕರಿಗೆ ವರ್ಷಕ್ಕೆ 1 ಲಕ್ಷ ರೂ.ಗಳ ಮೊದಲ ಉದ್ಯೋಗ ಖಾತರಿ ಯೋಜನೆ ಪ್ರಾರಂಭಿಸಬೇಕು. ಬಡ ಕುಟುಂಬದ ಮಹಿಳೆಯರ ಖಾತೆಗೆ ತಿಂಗಳಿಗೆ 8,500 ರೂಪಾಯಿ ಸಿಗಬೇಕು. ರೈತರು ಋಣ ಮುಕ್ತರಾಗಿರಬೇಕು ಮತ್ತು ಅವರು ತಮ್ಮ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಪಡೆಯಬೇಕು. ಕೂಲಿಕಾರರಿಗೆ ದಿನಗೂಲಿ 400 ರೂಪಾಯಿ ಸಿಗಬೇಕು. ನಿಮ್ಮ ಮತವು ನಿಮ್ಮ ಜೀವನವನ್ನು ಸುಧಾರಿಸುವುದಲ್ಲದೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುತ್ತದೆ" ಎಂದಿದ್ದಾರೆ.
ದೆಹಲಿಯಲ್ಲಿ ಮತ ಚಲಾಯಿಸಿದ ಪ್ರಿಯಾಂಕಾ ಗಾಂಧಿ, ರಾಬರ್ಟ್ ವಾದ್ರಾ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಮಕ್ಕಳೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಮತ ಚಲಾಯಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರಲ್ಲದೆ, ಅವರ ಮಕ್ಕಳಾದ ರೈಹಾನ್ ರಾಜೀವ್ ವಾದ್ರಾ ಮತ್ತು ಮಿರಾಯಾ ವಾದ್ರಾ ಕೂಡ ತಮ್ಮ ಹಕ್ಕನ್ನು ಚಲಾಯಿಸಿದರು. ರೈಹಾನ್ ರಾಜೀವ್ ವಾದ್ರಾ ಮತ್ತು ಮಿರಾಯಾ ವಾದ್ರಾ ಮತ ಚಲಾಯಿಸಿದ ನಂತರ ತಮ್ಮ ಶಾಯಿಯ ಬೆರಳುಗಳನ್ನು ಕ್ಯಾಮೆರಾಗಳಿಗೆ ತೋರಿಸಿದ್ದಾರೆ.












Click it and Unblock the Notifications