Haryana: ಅಂಬಾನಿ ಮಾಡಿದ್ದು ಕೋಟಿಗಳ ಮದುವೆ, ರೈತರು ಸಾಲ ಮಾಡಿದ್ರೆ ಮಾತ್ರ ಮದುವೆ! ರಾಹುಲ್ ಕಿಡಿ
ಹರಿಯಾಣ ವಿಧಾನಸಭೆ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆಯಿಂದ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ನಿನ್ನೆ ಅದಾನಿ ಮೇಲೆ ಗುಡುಗಿದ್ದ ರಾಹುಲ್ ಗಾಂಧಿ ಇಂದು ಅಂಬಾನಿಯ ಬೆನ್ನುಬಿದ್ದಿದ್ದಾರೆ. ಅಂಬಾನಿ ಮದುವೆಗಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ರೈತರು ಸಾಲದ ಸುಳಿಯಲ್ಲಿ ಸಿಲುಕಿ ಮಾತ್ರವೇ ಮದುವೆ ಮಾಡುವ ಸ್ಥಿತಿ ಇದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಹರಿಯಾಣದ ಬಹಾದುರ್ಗದಲ್ಲಿ ರೋಡ್ಶೋ ನಡೆಸಿದ ಅವರು, ಅದಾನಿ ಮತ್ತು ಅಂಬಾನಿ ಒಡೆತನದ ಮಾಧ್ಯಮಗಳು ದಿನದ 24 ಗಂಟೆಯೂ ಪ್ರಧಾನಿ ಮುಖವನ್ನು ತೋರಿಸುತ್ತಿವೆ. ಇದನ್ನು ನೀವೆಲ್ಲ ಸಂವಿಧಾನದ ಮೇಲಿನ ದಾಳಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಇತ್ತೀಚೆಗೆ ನಡೆದ ಅಂಬಾನಿ ಪುತ್ರನ ಮದುವೆ ನೋಡಿದ್ದೀರಾ? ಅಂಬಾನಿ ಮದುವೆಗೆ ಕೋಟಿಗಟ್ಟಲೆ ಖರ್ಚು ಮಾಡಿದ್ದಾರೆ. ಇದು ಯಾರ ಹಣ? ಇದು ನಿಮ್ಮ ಹಣ! ಎಂದು ಭಾಷಣದಲ್ಲಿ ಹೇಳಿದ್ದಾರೆ.

ನೀವು ನಿಮ್ಮ ಮಕ್ಕಳಿಗೆ ಮದುವೆ ಮಾಡಲು ಬ್ಯಾಂಕ್ಗಳಲ್ಲಿ ಸಾಲ ಮಾಡುತ್ತೀರಿ. ಆದರೆ, ನರೇಂದ್ರ ಮೋದಿ ಅಂತವರನ್ನು ಆಯ್ಕೆ ಮಾಡಿರುವ 25 ಜನರು ಮದುವೆಗೆ ಕೋಟಿಗಟ್ಟಲೆ ಖರ್ಚು ಮಾಡಬಹುದು. ರೈತರು ಸಾಲ ಮೈಮೇಲೆ ಹಾಕಿಕೊಂಡೇ ಮದುವೆಗಳನ್ನು ನಿಶ್ಚಯಿಸಬೇಕು. ಇದು ಸಂವಿಧಾನದ ಮೇಲಿನ ದಾಳಿಯಲ್ಲದೆ ಮತ್ತೇನು? ಎಂದು ಗುಡುಗಿದ್ದಾರೆ.
ಪ್ರಧಾನಿ ಮೋದಿಯವರು ಅದಾನಿ ಮತ್ತು ಅಂಬಾನಿಗೆ ಎಷ್ಟು ಹಣ ನೀಡುತ್ತಾರೋ ಅದೇ ಹಣವನ್ನು ನಾವು ಈ ದೇಶದ ಬಡವರಿಗೆ ನೀಡುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಹರಿಯಾಣದಲ್ಲಿ ಈ ಹಿಂದೆ ಇದ್ದ ಉದ್ಯೋಗಾವಕಾಶಗಳು ಮರೆಯಾಗಿವೆ. ಗ್ಯಾಸ್ ಸಿಲಿಂಡರ್ ಬೆಲೆ 400 ರೂಪಾಯಿ ಎಂದು ಪ್ರಧಾನಿ ಮೋದಿ ಭಾಷಣ ಬಿಗಿಯುತ್ತಿದ್ದರು. ಈಗಿನ ದರ 1,200 ರೂಪಾಯಿ ಇದೆ. ಆದರೆ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಲ್ಪಿಜಿ ಸಿಲಿಂಡರ್ ದರ ಕೇವಲ 500 ರೂ ಆಗಲಿದೆ. ಬಾಕಿ 700 ರೂಪಾಯಿಯನ್ನು ನಿಮ್ಮ ಜೇಬಿಗೇ ಹಾಕುತ್ತೇವೆ ಎಂದು ಘೋಷಿಸಿದ್ದಾರೆ.

ಹರಿಯಾಣದ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮೆ ಆಗಲಿದೆ. ಇಲ್ಲಿನ ರೈತರು ತಮ್ಮ ಧಾನ್ಯಗಳನ್ನು ಮಾರಾಟ ಮಾಡಲು ಪರದಾಡುತ್ತಿದ್ದಾರೆ. ಆದರೆ ಸರ್ಕಾರ ಅದನ್ನು ಖರೀದಿಸುತ್ತಿಲ್ಲ. ಭತ್ತ, ಗೋಧಿ, ಕಬ್ಬಿಗೆ ಸರಿಯಾದ ಬೆಲೆಯೇ ಸಿಗುತ್ತಿಲ್ಲ ಎಂಬುದು ರೈತರಿಗೆ ಗೊತ್ತಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತರಿಂದ ಭತ್ತವನ್ನು ಖರೀದಿಸಲಿದೆ ಎಂದು ಹೇಳಿದ್ದಾರೆ.
ನಾವು ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನೀಡುತ್ತೇವೆ. ಹರಿಯಾಣ ಸರ್ಕಾರವು ನಿರುದ್ಯೋಗದ ಜಾಲವನ್ನು ಸೃಷ್ಟಿಸಿದೆ. ಇಲ್ಲಿ ಸುಮಾರು 2 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಕಾಂಗ್ರೆಸ್ ಸರ್ಕಾರ ಈ ಹುದ್ದೆಗಳನ್ನೆಲ್ಲ ಭರ್ತಿ ಮಾಡಲಿದೆ. ಬಡವರಿಗೆ ನಿವೇಶನ, 2 ಬೆಡ್ರೂಮ್ ಒಳಗೊಂಡ ಮನೆಗಾಗಿ 3.5 ಲಕ್ಷ ರೂಪಾಯಿ ನೀಡಲಿದೆ. 300 ಯೂನಿಟ್ ಉಚಿತ ವಿದ್ಯುತ್, 25 ಲಕ್ಷ ರೂಪಾಯಿ ಮೊತ್ತದ ಆರೋಗ್ಯ ವಿಮೆ ಸೌಲಭ್ಯ ಕೂಡ ನೀಡಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿಯವರು ಸಂವಿಧಾನದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಆರ್ಎಸ್ಎಸ್ನವರು ದೇಶದ ಪ್ರಮುಖ ಸಂಸ್ಥೆಗಳಲ್ಲಿ ತಮಗೆ ಬೇಕಾದ ಆಯ್ಕೆ ಮಾಡಿಕೊಳ್ಳುವುದರಿಂದ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಯಾವುದೇ ಸ್ಥಾನಮಾನ ಸಿಗುತ್ತಿಲ್ಲ. ಇದು ಸಂವಿಧಾನದ ಮೇಲೆ ನಡೆಯುತ್ತಿರುವ ಮತ್ತೊಂದು ದಾಳಿ ಎಂದು ದೂರಿದ್ದಾರೆ. ಅದಾನಿಗೆ ಸಹಾಯ ಮಾಡಲು ಮತ್ತು ರೈತರ ಜೀವನವನ್ನು ನಾಶಮಾಡಲು ಬಿಜೆಪಿಯವರು ಮೂರು ಕೃಷಿ ಕಾನೂನುಗಳನ್ನು ತರುವುದು ಕೂಡ ಸಂವಿಧಾನದ ಮೇಲಿನ ದಾಳಿ ಎಂದು ದೂರಿದ್ದಾರೆ.












Click it and Unblock the Notifications