ಕಾಂಗ್ರೆಸ್ಸಿನಿಂದ ಮಾಜಿ ಕೇಂದ್ರ ಸಚಿವ, ಮಾಜಿ ಶಾಸಕ ಅಮಾನತು
ಭುವನೇಶ್ವರ್, ಜನವರಿ 20: ಕೇಂದ್ರದ ಮಾಜಿ ಸಚಿವ ಶ್ರೀಕಾಂತ್ ಜೆನಾ ಮತ್ತು ಮಾಜಿ ಶಾಸಕ ಕೃಷ್ಣ ಚಂದ್ರ ಸಾಗರಿಯಾ ಅವರನ್ನು ಶನಿವಾರದಂದು ಕಾಂಗ್ರೆಸ್ನಿಂದ ಉಚ್ಚಾಟಿಸಲಾಗಿದೆ. ಇಬ್ಬರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪ ಹೊರೆಸಲಾಗಿದೆ.
ಸುಂದರ್ಗಢದ ಶಾಸಕ ಜೋಗೇಶ್ ಅವರನ್ನು ಕೂಡ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪಕ್ಕಾಗಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ನಂತರ ಶುಕ್ರವಾರದಂದು ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಒಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಮತ್ತು ಜರ್ಸುಗುಡದ ಶಾಸಕ ನಬಾ ಕಿಶೋರಿ ದಾಸ್ ಅವರು ಕೂಡ ಪಕ್ಷವನ್ನು ತ್ಯಜಿಸಿ ನವೀನ್ ಪಾಟ್ನಾಯಕ್ ನೇತೃತ್ವದ ಆಡಳಿತಾರೂಢ ಬಿಜು ಜನತಾ ದಳವನ್ನು ಸೇರಿದ್ದರು. ಇದಾದ ಬಳಿಕ ಈಗ ಬೆಳವಣಿಗೆ ನಡೆದಿದೆ.
ಒಡಿಶಾ ಕಾಂಗ್ರೆಸ್ ಸಮಿತಿಯ ಸಂಚಾಲಕ ಅನಂತ್ ಪ್ರಸಾದ್ ಸೇಥಿ ಅವರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಒಡಿಶಾ ಕಾಂಗ್ರೆಸ್ ಶಿಸ್ತು ಪಾಲನ ಸಮಿತಿ ಈ ನಿರ್ಧಾರವನ್ನು ಘೋಷಿಸಿದ್ದಾರೆ. ಜೇನಾ ಮತ್ತು ಸಾಗರಿಯ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅನುಮೋದನೆ ಪ್ರಕಾರ ಪಕ್ಷದಿಂದ ಹೊರಹಾಕಲಾಗಿದೆ ಎಂದಿದ್ದಾರೆ.

ಇವರಿಬ್ಬರು ಮಾಧ್ಯಮಗಳಲ್ಲಿ ನವೀನ್ ಪಟ್ನಾಯಕ್ ಹಾಗೂ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದ ಆರೋಪವಿದೆ. ಪಕ್ಷದ ಘನತೆಗೆ ಧಕ್ಕೆ ಉಂಟು ಮಾಡಿದ್ದರಿಂದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ. ಇದಲ್ಲದೆ ಅವರು ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ(OPCC) ಕಾರ್ಯಕಾರಿ ವಿರುದ್ಧವೂ ಟೀಕೆ ಮಾಡಿದ್ದಾರೆ ಎಂದು ಅನಂತ್ ಪ್ರಸಾದ್ ಹೇಳಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಜೇನಾ ಅವರು ಕೇಂದ್ರ ಸಚಿವರಾಗಿದ್ದರು. ದಲಿತ ನಾಯಕರಾಗಿರುವ ಸಾಗರಿಯಾ ಅವರು ಕೋರಪುಟ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಕೋರಪುಟ್ ಜಿಲ್ಲೆಯ ಕುಂಡುಲಿಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ದೊರಕಿಲ್ಲ ಎಂದು ಸಾಗರಿಯಾ ಬೇಸರಗೊಂಡಿದ್ದರು. ಕಳೆದ ನವೆಂಬರ್ನಲ್ಲಿ ಒಡಿಶಾ ವಿಧಾನಸಭೆಗೆ ರಾಜೀನಾಮೆ ಕೂಡಾ ಸಲ್ಲಿಸಿದ್ದರು. ಒಪಿಸಿಸಿ ಅಧ್ಯಕ್ಷ ನಿರಂಜನ್ ಪಾಟ್ನಾಯಕ್ ಅವರನ್ನು ಕಠಿಣವಾಗಿ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)












Click it and Unblock the Notifications