Manipur: ಮಣಿಪುರ ಸಿಎಂ ಕ್ಷಮೆ; ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆ ಕೇಳಿದ ಕಾಂಗ್ರೆಸ್
2023ರ ಮೇ 3ರಂದು ಶುರುವಾದ ಮಣಿಪುರ ಜನಾಂಗೀಯ ಸಂಘರ್ಷ ಇನ್ನೂ ನಿಂತಿಲ್ಲ. 2025ರ ಹೊಸ ವರ್ಷ ಸ್ವಾಗತಿಸಲು ಸಜ್ಜಾಗಿರುವ ಬೆನ್ನಲ್ಲೇ ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜ್ಯದ ಜನತೆಯ ಕ್ಷಮೆ ಕೋರಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಕೂಡ ಮಣಿಪುರ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಜಗತ್ತಿನ ಹಲವು ದೇಶಗಳಿಗೆ ಮತ್ತು ದೇಶದ ಹಲವು ರಾಜ್ಯಗಳಿಗೆ ಭೇಟಿ ನೀಡಲು ಸಮಯವಿದೆ ಆದರೆ ಮಣಿಪುರಕ್ಕೆ ಹೋಗಲು ಸಮಯವಿಲ್ಲ. ಮೋದಿ ಕೂಡ ಯಾಕೆ ಮಣಿಪುರಕ್ಕೆ ಹೋಗಿ ಕ್ಷಮೆ ಕೇಳಬಾರದು ಎಂದು ಪ್ರಶ್ನೆ ಮಾಡಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಹೋಗಿ ಅದೇ ಮಾತು ಯಾಕೆ ಹೇಳಬಾರದು? 2023ರ ಮೇ 4ರಿಂದ ಪ್ರಧಾನಿ ಮೋದಿ ದೇಶ ಮತ್ತು ಪ್ರಪಂಚದ ಹಲವು ಕಡೆ ಭೇಟಿ ನೀಡಿದ್ದರೂ ಮಣಿಪುರಕ್ಕೆ ಭೇಟಿ ನೀಡುವುದನ್ನು ಬೇಕಂತಲೇ ತಪ್ಪಿಸಿದ್ದಾರೆ. ಮಣಿಪುರ ಜನ ಈ ನಿರ್ಲಕ್ಷ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕ್ಷಮೆ ಕೇಳಿದ ಮಣಿಪುರ ಮುಖ್ಯಮಂತ್ರಿ
ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಹೊಸ ವರ್ಷಕ್ಕೆ ಮುನ್ನ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ. ರಾಜ್ಯದಲ್ಲಿ ನಡೆದ ಘಟನೆಗಳ ಬಗ್ಗೆ ಕ್ಷಮೆಯಾಚಿಸುತ್ತೇನೆ. ಅನೇಕ ಜನ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಅನೇಕರು ತಮ್ಮ ಮನೆಗಳನ್ನು ಕಳೆದುಕೊಂಡರು. ಇದಕ್ಕಾಗಿ ನನಗೆ ವಿಷಾದವಿದೆ, ರಾಜ್ಯದ ಜನರ ಕ್ಷಮೆ ಕೇಳಲು ಬಯಸುತ್ತೇನೆ. ಅದರೆ ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಶಾಂತಿ ಮರುಸ್ಥಾಪನೆಯಾಗುತ್ತಿದೆ. 2025ರಲ್ಲಿ ರಾಜ್ಯ ಸಹಜ ಸ್ಥಿತಿ ಮರಳುವ ವಿಶ್ವಾಸವಿದೆ ಎಂದು ಹೇಳಿದರು.
"ನಮ್ಮ ಹಿಂದಿನ ತಪ್ಪುಗಳನ್ನು ಕ್ಷಮಿಸಿ ಮತ್ತು ಅವುಗಳನ್ನು ಮರೆತು ಶಾಂತಿಯುತ ಮತ್ತು ಸಮೃದ್ಧ ಮಣಿಪುರ ಸ್ಥಾಪನೆ ಮಾಡಲು ಹೊಸದಾಗಿ ಪ್ರಾರಂಭಿಸಲು ಎಲ್ಲಾ ಸಮುದಾಯಗಳಿಗೆ ಮನವಿ ಮಾಡುತ್ತೇನೆ" ಎಂದು ಹೇಳಿದರು.
2023ರ ಮೇನಿಂದ ಅಕ್ಟೋಬರ್ ತಿಂಗಳವರೆಗೆ 408 ಗುಂಡಿನ ದಾಳಿ ನಡೆದ ಘಟನೆಗಳು ವರದಿಯಾಗಿದ್ದರೆ. ನವೆಂಬರ್ 2023ರಿಂದ ಏಪ್ರಿಲ್ 2024ರವರೆಗೆ 345 ಗುಂಡಿನ ದಾಳಿ ನಡೆದ ಘಟನೆಗಳು ವರದಿಯಾಗಿದೆ. ಆದರೆ 2024ರ ಮೇ ತಿಂಗಳಿನಿಂದ ಈವರೆಗೆ 112 ಗುಂಡಿನ ದಾಳಿ ಘಟನೆ ನಡೆದಿದ್ದು ರಾಜ್ಯದಲ್ಲಿ ಗಲಭೆ ಕಡಿಮೆಯಾಗುತ್ತಿರುವುದಕ್ಕೆ ಸಾಕ್ಷಿ ಎಂದು ಬಿರೇನ್ ಸಿಂಗ್ ಹೇಳಿದ್ದಾರೆ.
2023ರ ಮೇ ತಿಂಗಳಿನಲ್ಲಿ ಮೈತೇಯಿ ಮತ್ತು ಕುಕಿ ಜನಾಂಗದ ನಡುವೆ ಶುರುವಾದ ಜನಾಂಗೀಯ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದ್ದು ರಾಜ್ಯವೇ ಹೊತ್ತಿ ಉರಿದಿತ್ತು. ಈವರೆಗೆ ಹಿಂಸಾಚಾರದಲ್ಲಿ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಸಾವಿರಾರು ಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.












Click it and Unblock the Notifications