ಹರಿಯಾಣದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಪುನರಾರಂಭ, ಶನಿವಾರ ದೆಹಲಿಗೆ ಪ್ರವೇಶ
ಚಂಡೀಗಢ, ಡಿ. 23: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಶುಕ್ರವಾರ ಹರಿಯಾಣದ ಸೋಹ್ನಾದಲ್ಲಿರುವ ಖೇರ್ಲಿ ಲಾಲಾದಿಂದ ಪುನರಾರಂಭವಾಗಿದೆ.
ಬ್ಯಾನರ್ ಮತ್ತು ಪಕ್ಷದ ಧ್ವಜಗಳನ್ನು ಹಿಡಿದು ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಜೊತೆಯಾಗಿದ್ದಾರೆ. ಭಾರತ್ ಜೋಡೋ ಯಾತ್ರೆ ಬುಧವಾರ ಹರಿಯಾಣ ಪ್ರವೇಶಿಸಿದೆ.
ಇನ್ನು, ಭಾರತ್ ಜೋಡೋ ಯಾತ್ರೆ ಡಿಸೆಂಬರ್ 24 (ಶನಿವಾರ) ರಂದು ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರವೇಶಿಸಲಿದೆ. ಶನಿವಾರದ ಯಾತ್ರೆಯಲ್ಲಿ ಮಕ್ಕಳ್ ನಿಧಿ ಮೈಯಂ ಪಕ್ಷದ ನಾಯಕ, ನಟ ಕಮಲ್ ಹಾಸನ್ ಭಾಗವಹಿಸುವ ನಿರೀಕ್ಷೆಯಿದೆ.

ಭಾರತ್ ಜೋಡೋ ಯಾತ್ರೆಯು ಬಾದರ್ಪುರ ಗಡಿಯ ಮೂಲಕ ಶನಿವಾರ ಬೆಳಗ್ಗೆ 6 ಗಂಟೆಗೆ ದೆಹಲಿಯನ್ನು ಪ್ರವೇಶಿಸಲಿದೆ. ಯಾತ್ರೆಯಲ್ಲಿ ಭಾಗವಹಿಸುವವರು ಮಥುರಾ ರಸ್ತೆಯ ಮೂಲಕ ಆಶ್ರಮದ ಕಡೆಗೆ ನಡೆದು ಜಾಕಿರ್ ಹುಸೇನ್ ಮಾರ್ಗ, ಇಂಡಿಯಾ ಗೇಟ್, ತಿಲಕ್ ಮಾರ್ಗ ಮತ್ತು ಕೆಂಪು ಕೋಟೆಗೆ ತಲುಪಲಿದ್ದಾರೆ. ಅಲ್ಲಿ ಮೆರವಣಿಗೆಯ ಮೊದಲ ಹಂತವು ಮುಕ್ತಾಯಗೊಳ್ಳುತ್ತದೆ.
ಕೆಂಪು ಕೋಟೆಯಿಂದ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಗುಂಪು ನೇತಾಜಿ ಸುಭಾಷ್ ಮಾರ್ಗದ ಮೂಲಕ ರಾಜ್ ಘಾಟ್ಗೆ ರಾಷ್ಟ್ರೀಯ ನಾಯಕರಿಗೆ ನಮನ ಸಲ್ಲಿಸಲಿದೆ ಎಂದು ದೆಹಲಿ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಪಾದಯಾತ್ರೆಯಿಂದಾಗಿ ರಾಜಧಾನಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಯಾತ್ರೆಗಾಗಿ ರಿಂಗ್ ರೋಡ್ ಬಳಸುವಂತೆ ಕಾಂಗ್ರೆಸ್ ಮುಖಂಡರಿಗೆ ಮನವಿ ಮಾಡಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ. ಅಂತಿಮಗೊಳಿಸಿದ ಸಂಚಾರ ಮಾರ್ಗದ ಮಾಹಿತಿ ನಂತರ ಸಂಚಾರ ಸಲಹೆಯನ್ನು ನೀಡುವುದಾಗಿ ದೆಹಲಿಯ ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಮಾರ್ಗವನ್ನು ಅಂತಿಮಗೊಳಿಸಿದ ನಂತರ, ಅದಕ್ಕೆ ಅನುಗುಣವಾಗಿ ಜನರಿಗೆ ಸಂಚಾರ ಮಾಹಿತಿ ಸಲಹೆಯನ್ನು ನೀಡಲಾಗುತ್ತದೆ. ಈ ವಿಷಯದ ಬಗ್ಗೆ ಸಭೆಗಳನ್ನು ನಡೆಸಲಾಗುತ್ತಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ದೆಹಲಿಯ ವಿವಿಧ ಭಾಗಗಳಿಂದ ಸುಮಾರು 40,000 ಜನರು ಮೆರವಣಿಗೆಯಲ್ಲಿ ಸೇರಲು ಅರ್ಜಿಗಳನ್ನು ಭರ್ತಿ ಮಾಡಿದ್ದಾರೆ ಎಂದು ದೆಹಲಿ ಕಾಂಗ್ರೆಸ್ನ ಸಂವಹನ ವಿಭಾಗದ ಅಧ್ಯಕ್ಷ ಅನಿಲ್ ಭಾರದ್ವಾಜ್ ಹೇಳಿದ್ದಾರೆ.
"ರಾಹುಲ್ ಗಾಂಧಿ ಅವರನ್ನು ಬಾದರ್ಪುರ ಗಡಿಯಲ್ಲಿ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಸ್ವಾಗತಿಸಲಿದ್ದಾರೆ. ಮೆರವಣಿಗೆಯು ಬಾದರ್ಪುರ ಗಡಿಯಿಂದ ದೆಹಲಿಯನ್ನು ಬೆಳಗ್ಗೆ 6 ಗಂಟೆಗೆ ಪ್ರವೇಶಿಸಿ 10 ಗಂಟೆಗೆ ಆಶ್ರಮವನ್ನು ತಲುಪಲಿದೆ. ವಿರಾಮದ ನಂತರ, ಮೆರವಣಿಗೆಯು ಮಧ್ಯಾಹ್ನ 1 ಅಥವಾ 1.30 ರ ಸುಮಾರಿಗೆ ಪುನರಾರಂಭವಾಗುತ್ತದೆ.ಸಂಜೆ 4.30 ರ ಸುಮಾರಿಗೆ ರಾಜ್ ಘಾಟ್ ತಲುಪುತ್ತದೆ" ಎಂದು ಭಾರದ್ವಾಜ್ ಮಾಹಿತಿ ನೀಡಿದ್ದಾರೆ.
ಇತ್ತ, ಚೀನಾದಲ್ಲಿ ಮತ್ತೆ ಕಾಣಿಸಿಕೊಂಡಿರುವ ಕೊರೊನಾ ಕಾರಣದಿಂದ ದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಆರೋಗ್ಯ ಸಚಿವ ಯಾತ್ರೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು, ಇದಕ್ಕೆ ಕಾಂಗ್ರೆಸ್ ಆಕ್ಷೇಪಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಮನವಿ ಮಾಡಿದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು, ಕೇಂದ್ರ ಸರ್ಕಾರವು ಭಾರತದ ಸತ್ಯಕ್ಕೆ ಹೆದರುತ್ತಿದೆ ಎಂದು ಆರೋಪಿಸಿದ್ದಾರೆ.
'ಇದು ಬಿಜೆಪಿಯ ಹೊಸ ಆಲೋಚನೆ, ಅವರು ಕೋವಿಡ್ ಬರುತ್ತಿದೆ, ಯಾತ್ರೆಯನ್ನು ನಿಲ್ಲಿಸಿ ಎಂದು ನನಗೆ ಪತ್ರ ಬರೆದಿದ್ದಾರೆ. ಈ ಯಾತ್ರೆಯನ್ನು ನಿಲ್ಲಿಸಲು ಇವೆಲ್ಲವೂ ನೆಪಗಳು" ಎಂದು ಗುರುವಾರ ಹರಿಯಾಣದ ನುಹ್ನಲ್ಲಿ ನಡೆದ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಪಕ್ಷದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಕೇಳಿಕೊಂಡಿದ್ದಾರೆ.
"ರಾಜಸ್ಥಾನದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಮಾಸ್ಕ್, ಸ್ಯಾನಿಟೈಸರ್ ಬಳಕೆಯನ್ನು ಜಾರಿಗೊಳಿಸಬೇಕು. ಲಸಿಕೆ ತೆಗೆದುಕೊಂಡವರು ಮಾತ್ರ ಪಾದಯಾತ್ರೆಯಲ್ಲಿ ಭಾಗವಹಿಸಬೇಕು" ಎಂದು ಆರೋಗ್ಯ ಸಚಿವರು ಮಂಗಳವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ ಪಾದಯಾತ್ರೆಯನ್ನು ಮುಂದೂಡುವಂತೆ ಮನ್ಸುಖ್ ಮಾಂಡವಿಯಾ ತಿಳಿಸಿದ್ದರು.
"ಕೋವಿಡ್ ಪ್ರೋಟೋಕಾಲ್ ಅನುಸರಿಸಲು ಸಾಧ್ಯವಾಗದಿದ್ದರೆ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹಿತಾಸಕ್ತಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಮುಂದೂಡಬಹುದು" ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಲವು ಮಂದಿಗೆ ಸೋಂಕು ತಗುಲಿದೆ ಎಂದು ರಾಜಸ್ಥಾನದ ಮೂವರು ಸಂಸದರು ಪತ್ರ ಬರೆದ ಬಳಿಕ ತಾನು ಪತ್ರ ಬರೆದಿದ್ದೇನೆ ಎಂದು ಮಾಂಡವಿಯಾ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಮಂಗಳವಾರ ರಾಜಸ್ಥಾನದದಿಂದ ಬುಧವಾರ ಬೆಳಗ್ಗೆ ಹರಿಯಾಣಕ್ಕೆ ಪ್ರವೇಶಿಸಿದೆ. ಡಿಸೆಂಬರ್ 24ರ ಶನಿವಾರ ರಾಷ್ಟ್ರ ರಾಜಧಾನಿ ತಲುಪಲಿದೆ.












Click it and Unblock the Notifications