ಚುನಾವಣೆಗೆ ತಿಂಗಳಿಲ್ಲ,ಛತ್ತೀಸ್ ಗಢದಲ್ಲಿ ಪಕ್ಷಾಂತರಕ್ಕೆ ಎಲ್ಲೆಯಿಲ್ಲ!
ರಾಯ್ಪುರ, ಅಕ್ಟೋಬರ್ 13: ಛತ್ತೀಸ್ ಗಢದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಅಖಾಡ ಸಿದ್ಧವಾಗಿದೆ. ಆಡಳಿತಾರೂಢ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಆದ್ಯ ಉದ್ದೇಶವನ್ನು ಹೊಂದಿರುವ ಕಾಂಗ್ರೆಸ್ ಹೊಂದಿದ್ದರೆ, ಛತ್ತೀಸ್ ಗಢವನ್ನು ಮತ್ತೆ ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳಲು ಬಿಜೆಪಿ ಹೆಣಗುತ್ತಿದೆ.
ಈ ನಡುವೆ ಛತ್ತೀಸ್ ಗಢ ರಾಜಕಾರಣದಲದಲ್ಲಿ ಸಾಕಷ್ಟು ತ್ವರಿತ ಬೆಳವಣಿಗೆಗಳು ನಡೆಯುತ್ತಿವೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಕೆಲವು ನಾಯಕರು ಮತ್ತೆ ಬಿಜೆಪಿಯತ್ತ ಮುಖ ಮಾಡಿದ್ದರೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಕೆಲವರು ಮತ್ತೆ ಕಾಂಗ್ರೆಸ್ ಮೊರೆಹೋಗಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಛತ್ತೀಸ್ ಗಢದ ರಾಜಕೀಯದ ಕುರಿತು ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಬಿಜೆಪಿ ಸೇರಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ!
ಛತ್ತೀಸ್ ಗಢ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಮತ್ತು ಇಲ್ಲಿನ ಪಾಲಿ ತನಖರ್ ಕ್ಷೇತ್ರದ ಶಾಸಕ ರಾಮದಯಾಳ್ ಯೈಕ್ ಅವರು ಇಂದು ಬಿಜೆಪಿಗೆ ಸೇರಿದ್ದು, ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ರಮಣ್ ಸಿಂಗ್ ಹೃತ್ಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಚುನಾವಣೆಗೆ ತಿಂಗಳು ಬಾಕಿ ಇರುವಾಗಿ ಕಾರ್ಯಾಧ್ಯಕ್ಷರೇ ಹೀಗೆ ಪಕ್ಷ ತೊರೆದು, ವಿರೋಧಿ ಪಕ್ಷವನ್ನು ಸೇರಿದ್ದು ಕಾಂಗ್ರೆಸ್ಸಿಗೆ ಬಹುದೊಡ್ಡ ಪೆಟ್ಟು ಅನ್ನಿಸಿದೆ.

ಕಾಂಗ್ರೆಸ್ ನತ್ತ ಹೊರಟವರ್ಯಾರು?
ಕಾಂಗ್ರೆಸ್ ಪಕ್ಷವು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವುದರಿಂದ ಪಕ್ಷ ತೊರೆದ ತನ್ನ ಹಳೆಯ ನಾಯಕರನ್ನು ಮತ್ತೊಮ್ಮೆ ಪಕ್ಷಕ್ಕೆ ಕರೆಸಿಕೊಳ್ಳುತ್ತಿದೆ. ಹಿರಿಯ ಬುಡಕಟ್ಟು ನಾಯಕ ಅರವಿಂದ್ ನೇತಾಮ್ ಅವರು ಬಹುದಿನಗಳ ಅಂತರದ ನಂತರ ಕಾಂಗ್ರೆಸ್ಸಿಗೆ ಮರಳಿದ್ದಾರೆ. ಜೊತೆಗೆ ವಿನೋದ್ ತಿವಾರಿ, ವಾಣಿ ರಾವ್ ಮತ್ತು ಮಹೇಂದ್ರ ಬಹದ್ದೂರ್ ಸಿಂಗ್ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ.

ಬಿಜೆಪಿ ಸೇರಿದವರ್ಯಾರು?
ಇಂದಷ್ಟೇ ಬಿಜೆಪಿ ಸೇರಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮದಯಾಳ್ ಯೈಕ್ ಸೇರಿದಂತೆ ಹಲವರು ಬಿಜೆಪಿ ಸೇರಿದ್ದಾರೆ. ಮೊದಲು ಬಿಜೆಪಿಯಲ್ಲೇ ಇದ್ದು, ಬಂಡಾಯ ಎದ್ದಿದ್ದ ಮಾಜಿ ಸಚಿವ ಗಣೇಶ್ ರಾಮ್ ಭಗತ್ ಸಹ ಬಿಜೆಪಿ ಸೇರಿದ್ದಾರೆ.

ಯಾವಾಗ ಚುನಾವಣೆ? ಫಲಿತಾಂಶ?
90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಛತ್ತೀಸ್ ಗಢದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ 18 ಕ್ಷೇತ್ರಗಳಿಗೆ ನವೆಂಬರ್ 12 ರಂದು ಮತದಾನ ನಡೆಯಲಿದೆ. ಎರಡನೇ ಹಂತದ 72 ಕ್ಷೇತ್ರಗಳಿಗೆ ನವೆಂಬರ್ 20 ಮತದಾನ ನಡೆಯಲಿದ್ದು, ಫಲಿತಾಂಶ ಡಿಸೆಂಬರ್ 11, 2018 ರಂದು ಹೊರಬೀಳಲಿದೆ.












Click it and Unblock the Notifications