ಹಾರ್ದಿಕ್ ಪಟೇಲ್ ಗೆ ಮೂರು ಆಯ್ಕೆ ನೀಡಿದ ಕಾಂಗ್ರೆಸ್
Recommended Video

ಅಹಮದಾಬಾದ್, ನವೆಂಬರ್ 9: ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಾಸ್) ಮುಖ್ಯಸ್ಥ ಹಾರ್ದಿಕ್ ಪಟೇಲ್ ನಿಯೋಗ ಮತ್ತು ಕಾಂಗ್ರೆಸ್ ನಿಯೋಗದ ನಡುವೆ ಬುಧವಾರ ಮಹತ್ವದ ಮಾತುಕತೆ ನಡೆದಿದೆ. ಈ ವೇಳೆ ಹಾರ್ದಿಕ್ ಪಟೇಲ್ ನೇತೃತ್ವದ ನಿಯೋಗಕ್ಕೆ ಕಾಂಗ್ರೆಸ್ ಮೂರು ಆಯ್ಕೆಗಳನ್ನು ನೀಡಿದೆ.
ಮೀಸಲಾತಿ ಬೇಡಿಕೆ ಸಂಬಂಧ ಕಾಂಗ್ರೆಸ್ ನೀಡಿರುವ ಆಯ್ಕೆಯನ್ನು ತಮ್ಮ ನಾಯಕರು ಮತ್ತು ಕಾನೂನು ತಜ್ಞರ ಜತೆ ಸಮಾಲೋಚನೆ ಮಾಡಿ ನಿರ್ಧರಿಸುವುದಾಗಿ ಹಾರ್ದಿಕ್ ಪಟೇಲ್ ಬಣದವರು ಹೇಳಿದ್ದಾರೆ.
ರಾತ್ರಿ 11.30ರಿಂದ 2 ಗಂಟೆವರಗೆ ನಡೆದ ಸಭೆಯಲ್ಲಿ ಮೂರು ಆಯ್ಕೆಗಳನ್ನು ನೀಡಲಾಗಿದೆ. ಸಭೆಯ ನಂತರ ಮಾಡನಾಡಿದ ಪಾಸ್ ಸಂಚಾಲಕ ದಿನೇಶ್ ಬಂಭಾನಿಯಾ, "ಶೈಕ್ಷಣಿಕ ಸಂಸ್ಥೆಗಳು ಮತ್ತು ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ಸಂಬಂಧ ನಮಗೆ ಕಾಂಗ್ರೆಸ್ ಪಕ್ಷ ಮೂರು ಆಯ್ಕೆಗಳನ್ನು ನೀಡಿದೆ," ಎಂದಿದ್ದಾರೆ.

ಗೌಪ್ಯ ಆಯ್ಕೆ
ಆದರೆ ಕಾಂಗ್ರೆಸ್ ನೀಡಿದ ಆಯ್ಕೆಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ. ಹಾರ್ದಿಕ್ ಪಟೇಲ್, ನಮ್ಮ ಸಮುದಾಯದ ನಾಯಕರು ಮತ್ತು ಕಾನೂನು ತಜ್ಞರ ಜತೆ ಸಮಾಲೋಚನೆ ಮಾಡುವವರೆಗೆ ಈ ವಿಷಯವನ್ನು ಗೌಪ್ಯವಾಗಿಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಪಾಟೀದಾರರಿಗೆ ಎಲ್ಲಿ ಮೀಸಲಾತಿ?
ಕಾಂಗ್ರೆಸ್ ಯಾವುದೇ ಕಾರಣಕ್ಕೂ ಎಸ್.ಸಿ, ಎಸ್.ಟಿ ಮತ್ತು ಒಬಿಸಿಗೆ ನೀಡಿದ 49 ಶೇಕಡಾ ಮೀಸಲಾತಿಯನ್ನು ಮುಟ್ಟಿಲ್ಲ. ಇದನ್ನು ಮೀರಿ ಮೀಸಲಾತಿ ನೀಡುವ ಆಯ್ಕೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ನೀಡುವ ಕಾಂಗ್ರೆಸ್ ಆಹ್ವಾನವನ್ನು ನಾವು ತಿರಸ್ಕರಿಸಿದ್ದೇವೆ. ಕಾರಣ ಇದು ಸಂವಿಧಾನಿಕ ಮಾನ್ಯತೆ ಪಡೆಯುವುದಿಲ್ಲ ಎಂದು ಬಂಭಾನಿಯಾ ಹೇಳಿದ್ದಾರೆ.

ಸಾಂವಿಧಾನಾತ್ಮಕ ಮೀಸಲಾತಿ
ಸಭೆ ನಂತರ ಮಾತನಾಡಿದ ಕಪಿಲ್ ಸಿಬಲ್, "ಕಾಂಗ್ರೆಸ್ ಮತ್ತು ಪಾಸ್ ನಡುವಿನ ಸಭೆಯ ನಂತರ ಇಬ್ಬರೂ ಜತೆ ಸೇರಿ ಏನಾದರೂ ಮಾಡಬಹುದು ಎಂಬ ನಂಬಿಕೆ ಹುಟ್ಟಿದೆ," ಎಂದು ಹೇಳಿದ್ದಾರೆ.
ನಾವು ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ ಮತ್ತು ಸಂವಿಧಾನಾತ್ಮಕವಾಗಿ ಮೀಸಲಾತಿ ನೀಡುತ್ತೇವೆ ಎಂದು ಸಿಬಲ್ ಹೇಳಿದ್ದಾರೆ.

ಎರಡು-ಮೂರು ದಿನದಲ್ಲಿ ಮತ್ತೆ ಭೇಟಿ
ಮುಂದಿನ ಎರಡು ಮೂರು ದಿನಗಳಲ್ಲಿ ನಾವು ಮತ್ತೆ ಭೇಟಿಯಾಗಲಿದ್ದೇವೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಎರಡು ಮೂರು ದಿನದಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದು ಅವರು ಹೇಳಿದ್ದಾರೆ.
ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14ರಂದು ಮತದಾನ ನಡೆಯಲಿದ್ದು ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದೆ.












Click it and Unblock the Notifications