ಕಪ್ಪು ಹಣ ಘೋಷಣೆಗೆ ಅವಕಾಶ, ತಪ್ಪಿದ್ರೆ ಜೈಲುವಾಸ
ನವದೆಹಲಿ, ಜೂನ್ 01: ಕಪ್ಪು ಹಣ ಹೊಂದಿರುವವರಿಗೆ ಘೋಷಣೆ ಅವಧಿ ಮತ್ತು ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಜೂನ್ 1ರಿಂದ 4 ತಿಂಗಳ ಅವಧಿಯಲ್ಲಿ (ನವೆಂಬರ್ 30) ಕಪ್ಪು ಹಣ ಹೊಂದಿರುವವರು ಸ್ವಯಂ ಪ್ರೇರಿತವಾಗಿ ಘೋಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.
ಈ ರೀತಿ ಸ್ವಯಂಪ್ರೇರಿತವಾಗಿ ಕಪ್ಪು ಹಣ ಘೋಷಣೆ ಮಾಡಿಕೊಂಡವರು ಶೇ.45ರಷ್ಟು ತೆರಿಗೆ ಹಾಗೂ ದಂಡವನ್ನು ನವೆಂಬರ್ನೊಳಗೆ ಪಾವತಿಸಬೇಕಾಗುತ್ತದೆ. ಹೀಗೆ ಮಾಡಿದರೆ ಅವರು ಕಾನೂನು ಕುಣಿಕೆಯಿಂದ ಮುಕ್ತಿ ಹೊಂದಬಹುದು.[ಕಪ್ಪು ಹಣ ಖಾತೆ: ಒಟ್ಟು 2,428 ಕೋಟಿ ರು ಆದಾಯ ಸಂಗ್ರಹ]
ಆದರೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದ್ದು ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಗಳು ಹಣ ಪಾವತಿ ಮಾಡಿ ಹೊರಬರಲು ಅವಕಾಶ ಇಲ್ಲ.
ಈ ಬಗ್ಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಕೆ ನೀಡಿದ್ದು, ಘೋಷಣೆ ಮಾಡಿಕೊಳ್ಳುವ ವ್ಯಕ್ತಿಗಳ ಒಟ್ಟು ಆದಾಯಕ್ಕೂ ಈ ಹಣಕ್ಕೂ ಸಂಬಂಧ ಇರುವುದಿಲ್ಲ ಎಂದು ತಿಳಿಸಿದ್ದಾರೆ.[ಸ್ವಿಸ್ ಬ್ಯಾಂಕಲ್ಲಿ ಅತ್ತೆ-ಸೊಸೆಯರ ಭರ್ಜರಿ ಜುಗಲಬಂದಿ]
ಒಟ್ಟಿನಲ್ಲಿ ವಿದೇಶದಲ್ಲಿದ್ದ ಕಪ್ಪು ಹಣ ತರಲು ಮುಂದಾಗಿದ್ದ ಕೇಂದ್ರ ಸರ್ಕಾರ ಅದೇ ನೀತಿಯನ್ನು ಇದೀಗ ದೇಶದ ಒಳಗೂ ವಿಸ್ತರಣೆ ಮಾಡಿದೆ. ಆದರೆ ಮುಂದಿನ ದಿನಗಳಲ್ಲಿ ಯಾರು ಘೋಷಣೆ ಮಾಡಲಿದ್ದಾರೆ. ಮಾಡಿಕೊಂಡರೆ ಶೇ. 45 ತೆರಿಗೆ ತುಂಬಬೇಕಾಗುತ್ತದೆ ಎಂಬ ಅಂಶಗಳು ಮಹತ್ವದ್ದಾಗಿದೆ. ಅವಧಿಯೊಳಗೆ ಘೋಷಣೆ ಮಾಡಿಕೊಳ್ಳದವರಿಗೆ ಜಪ್ತಿ ಭೀತಿ ಎದುರಾಗಲಿದೆ.