ಪಂಜಾಬ್ನಲ್ಲಿ ವಿಶ್ವಾಸ ಮತ ಗೆದ್ದುಕೊಂಡ ಸಿಎಂ ಭಗವಂತ್ ಮಾನ್ ಸರ್ಕಾರ
ನವದೆಹಲಿ, ಅಕ್ಟೋಬರ್ 03: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದಿದೆ. ಸೋಮವಾರ ಇದೇ ವೇಳೆ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಿಂದ ಸಭಾತ್ಯಾಗ ಮಾಡಿದರು. ಕೈ ಎತ್ತುವ ಮೂಲಕ ವಿಧಾನಸಭೆಯಲ್ಲಿ ಮತದಾನ ನಡೆಸಲಾಯಿತು.
93 ಶಾಸಕರು ಯಾವುದೇ ವಿರೋಧಾಭಾಸಗಳಿಲ್ಲದೇ ವಿಶ್ವಾಸ ಮತವನ್ನು ಬೆಂಬಲಿಸಿದರು, ಇದರಿಂದ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸೆಪ್ಟೆಂಬರ್ 27ರಂದು ಮುಖ್ಯಮಂತ್ರಿ ಭಗವಂತ್ ಮಾನ್ ವಿಶ್ವಾಸ ನಿರ್ಣಯವನ್ನು ಮಂಡಿಸಿದರು.
ಎಎಪಿಗೆ ಸೊನ್ನೆ, ಬಿಜೆಪಿಗೆ ಬಹುಮತ- ಸಂಚಲನ ಮೂಡಿಸಿದ ಗುಜರಾತ್ ಚುನಾವಣೆ ಸಮೀಕ್ಷೆ!
ಸೋಮವಾರ ನಡೆದ ಚರ್ಚೆಯಲ್ಲಿ ಎಎಪಿ ಶಾಸಕಿ ಶೀತಲ್ ಅಂಗುರಾಲ್ ಮೊದಲಿಗರಾಗಿದ್ದರು. ಆದರೆ, ಚರ್ಚೆ ಆರಂಭವಾಗುತ್ತಿದ್ದಂತೆ ಶೂನ್ಯವೇಳೆಯಲ್ಲಿ ಮಾತನಾಡಲು ಮತ್ತು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಸ್ಪೀಕರ್ ಅವರಿಗೆ ಸಮಯ ನೀಡಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್ ಶಾಸಕರು ಸಭಾತ್ಯಾಗ ಮಾಡಿದರು. ಎಎಪಿ ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯವನ್ನು ತರುವ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಅಶ್ವಿನಿ ಶರ್ಮಾ ಮತ್ತು ಜಂಗಿ ಲಾಲ್ ಮಹಾಜನ್ ಅಧಿವೇಶನವನ್ನು ಬಹಿಷ್ಕರಿಸಿದರು.
ಪಂಜಾಬಿನಲ್ಲಿ "ಆಪರೇಷನ್ ಕಮಲ"
ಇತ್ತೀಚೆಗಷ್ಟೇ ಬಿಜೆಪಿ ಪರವಾಗಿ ತಮ್ಮನ್ನು ಭೇಟಿಯಾಗುವುದಾಗಿ ಹೇಳಿಕೊಂಡ ಮೂವರು ವ್ಯಕ್ತಿಗಳು ತಮ್ಮನ್ನು ಭೇಟಿಯಾಗಿ ಹಣ ಮತ್ತು ಸ್ಥಾನಮಾನದ ಆಮಿಷ ಒಡ್ಡಿದ್ದರು ಎಂದು ಅಂಗುರಲ್ ಹೇಳಿಕೊಂಡಿದ್ದಾರೆ. "ಅಲ್ಲದೇ ಈ ವೇಳೆ ಮಾತನಾಡಿದ ಕರೆ ರೆಕಾರ್ಡಿಂಗ್, ಮೊಬೈಲ್ ಸಂಖ್ಯೆ ಸೇರಿದಂತೆ ಎಲ್ಲ ವಿವರಗಳನ್ನು ರಾಜ್ಯ ವಿಜಿಲೆನ್ಸ್ ಬ್ಯೂರೋಗೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಈ ಒಪ್ಪಂದಕ್ಕೆ ಮುದ್ರೆ ಹಾಕುವುದಕ್ಕೆ ಒಪ್ಪಿಕೊಂಡಿರುವವರನ್ನು ಬಿಜೆಪಿ ನಾಯಕನ ಕಡೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ಅವರು ಯಾವುದೇ ತಂತ್ರಗಳನ್ನು ಬಳಸಬಹುದು, ಆದರೆ ಭಗವಂತ್ ಮಾನ್ ಮತ್ತು ಅರವಿಂದ್ ಕೇಜ್ರಿವಾಲ್ ತಂಡವು ಪ್ರಾಮಾಣಿಕವಾಗಿದೆ," ಎಂದು ಅವರು ಹೇಳಿದರು.
ಕಾಂಗ್ರೆಸ್ ವರ್ತನೆ ಬಿಜೆಪಿ ಬಿ ಟೀಮ್ ರೀತಿಯಲ್ಲಿ ಇದೆ
ಕಾಂಗ್ರೆಸ್ ವಿರುದ್ಧವೂ ಅಂಗುರಲ್ ಮತ್ತು ಕೆಲವು ಆಪ್ ಶಾಸಕರು ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಪಕ್ಷವು ಬಿಜೆಪಿಯ ಬಿ ಟೀಮ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ದೂಷಿಸಿದ್ದಾರೆ. ಎಎಪಿ ಶಾಸಕ ದಿನೇಶ್ ಚಡ್ಡಾ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. "ಕರ್ನಾಟಕ, ಮಧ್ಯಪ್ರದೇಶ ಮತ್ತು ಗೋವಾದಲ್ಲಿ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ," ಎಂದರು.
ಎಎಪಿಯ ಹಿರಿಯ ಶಾಸಕಿ ಬಲ್ಜಿಂದರ್ ಕೌರ್, "ಆಪರೇಷನ್ ಕಮಲ" ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕೇಸರಿ ಪಕ್ಷವು "ಹಣಬಲ" ಆಧಾರದ ಮೇಲೆ ಎಲ್ಲೆಡೆ ಸರ್ಕಾರ ರಚಿಸಬಹುದು ಎಂದು ಭಾವಿಸುತ್ತದೆ. ಆದರೆ ಮೊದಲು ದೆಹಲಿಯಲ್ಲಿ ಮತ್ತು ಈಗ ಪಂಜಾಬ್ನಲ್ಲಿ ಅವರ ಕಾರ್ಯಾಚರಣೆ ವಿಫಲವಾಗಿದೆ ಎಂದು ಹೇಳಿದರು.
ಆಪ್ ಶಾಸಕರಿಗೆ 25 ಕೋಟಿ ರೂಪಾಯಿ ಆಮಿಷವೊಡ್ಡಿತ್ತಾ ಬಿಜೆಪಿ?
ಪಂಜಾಬ್ನಲ್ಲಿ "ಆಪರೇಷನ್ ಕಮಲ" ಅಡಿಯಲ್ಲಿ ಆರು ತಿಂಗಳ ಹಳೆಯ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿಯು ಸಕ್ರಿಯವಾಗಿದೆ. ಆದ್ದರಿಂದಲೇ ಕನಿಷ್ಠ 10 ಆಪ್ ಶಾಸಕರಿಗೆ ತಲಾ 25 ಕೋಟಿ ರೂಪಾಯಿಗಳ ಆಮಿಷವೊಡ್ಡಲಾಗಿತ್ತು ಎಂದು ಎಎಪಿ ಈ ಹಿಂದೆ ಹೇಳಿಕೊಂಡಿತ್ತು. ಪಂಜಾಬ್ ಅಸೆಂಬ್ಲಿ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್, ಸೋಮವಾರ ವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಎರಡು ಗಂಟೆಗಳ ಸಮಯವನ್ನು ನಿಗದಿಪಡಿಸಿದ್ದರು.
117 ಸದಸ್ಯರ ವಿಧಾನಸಭೆಯಲ್ಲಿ ಪ್ರತಿ ಪಕ್ಷಕ್ಕೆ ಅದರ ಶಾಸಕರ ಸಂಖ್ಯೆಯ ಆಧಾರದ ಮೇಲೆ ಸಮಯವನ್ನು ನಿಗದಿಪಡಿಸಲಾಗಿದೆ. ಈ ಕುರಿತು ಚರ್ಚೆಗೆ ಎರಡು ಗಂಟೆ ಸಮಯ ನಿಗದಿಪಡಿಸಲಾಗಿದೆ. ಎಎಪಿ ಶಾಸಕರಿಗೆ ಒಂದು ಗಂಟೆ ಮೂವತ್ತನಾಲ್ಕು ನಿಮಿಷಗಳು, ಕಾಂಗ್ರೆಸ್ಗೆ 19 ನಿಮಿಷಗಳು, ಎಸ್ಎಡಿಗೆ ಮೂರು ನಿಮಿಷಗಳು, ಬಿಜೆಪಿಗೆ ಎರಡು ನಿಮಿಷಗಳು, ಬಿಎಸ್ಪಿಗೆ ಒಂದು ನಿಮಿಷ ಮತ್ತು ಸ್ವತಂತ್ರ ಶಾಸಕರಿಗೆ ಒಂದು ನಿಮಿಷ," ಎಂದು ಸ್ಪೀಕರ್ ಸಂಧ್ವನ್ ಹೇಳಿದ್ದರು. ಪಂಜಾಬ್ ವಿಧಾನಸಭೆಯಲ್ಲಿ ಎಎಪಿ 92, ಕಾಂಗ್ರೆಸ್ 18, ಎಸ್ಎಡಿ 3, ಬಿಜೆಪಿ 2, ಬಿಎಸ್ಪಿ ಮತ್ತು ಒಬ್ಬ ಸ್ವತಂತ್ರ ಶಾಸಕ ತಲಾ 1 ಸ್ಥಾನಗಳನ್ನು ಹೊಂದಿದೆ.
ಬಿಜೆಪಿಗೆ ಅಹಂಕಾರಿ ಎಂದಿದ್ದ ಭಗವಂತ್ ಮಾನ್
ಕಳೆದ ಸೆಪ್ಟೆಂಬರ್ 27ರಂದು ವಿಧಾನಸಭೆ ಅಧಿವೇಶನದ ಆರಂಭದ ದಿನದಂದು ಮುಖ್ಯಮಂತ್ರಿ ಭಗವಂತ್ ಮಾನ್ ಈ ಪ್ರಸ್ತಾಪವನ್ನು ಮಂಡಿಸಿದರು. ಬಿಜೆಪಿಯು 'ಆಪರೇಷನ್ ಕಮಲ' ಮತ್ತು ಕೇಸರಿ ಪಕ್ಷದೊಂದಿಗೆ ಕೈಜೋಡಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ್ದರು. ಇದೇ ವೇಳೆ ಭಗವಂತ್ ಮನ್ ಬಿಜೆಪಿಯನ್ನು "ಅಹಂಕಾರಿ" ಎಂದು ಕರೆದಿದ್ದು, ಎಲ್ಲೆಡೆ ತಮ್ಮದೇ ಸರ್ಕಾರ ಇರಬೇಕು ಎಂದು ಬಿಜೆಪಿ ಏಕೆ ಭಾವಿಸುತ್ತದೆ ಎಂದು ಪ್ರಶ್ನೆ ಮಾಡಿದ್ದರು. ಪಂಜಾಬ್ನ ಎಎಪಿ ಶಾಸಕರಿಗೆ ಕರೆಗಳು ಬಂದಿದ್ದು, ಸರ್ಕಾರವನ್ನು ಉರುಳಿಸಲು ಹಣವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಎಎಪಿ ಶಾಸಕರು ಮಾರಾಟಕ್ಕಿಲ್ಲ ಎಂದು ಹರಿ ಹಾಯ್ದರು.
ವಿಧಾನಸಭೆಯ ಅಧಿವೇಶನವನ್ನು ನಡೆಸುವ ಕುರಿತು ರಾಜಭವನ ಮತ್ತು ಎಎಪಿ ಸರ್ಕಾರದ ನಡುವೆ ದಿನಗಳ ವಾಗ್ವಾದದ ನಂತರ ಸೆಪ್ಟೆಂಬರ್ 27ರಂದು ಸದನವನ್ನು ಕರೆಯಲು ರಾಜ್ಯಪಾಲರು ಭಾನುವಾರ ಒಪ್ಪಿಗೆ ನೀಡಿದ್ದರು. ತದನಂತರ ಅಧಿವೇಶನವನ್ನು ಕರೆಯಲಾಯಿತು. ಈ ಹಿಂದೆ ಎಎಪಿ ಸರ್ಕಾರ ವಿಶ್ವಾಸಮತ ಯಾಚನೆಯನ್ನು ತರಲು ಬಯಸಿದಾಗ ರಾಜ್ಯಪಾಲರು ಸೆಪ್ಟೆಂಬರ್ 22ರಂದು ವಿಶೇಷ ಅಧಿವೇಶನ ನಡೆಸಲು ಅನುಮತಿಯನ್ನು ಹಿಂಪಡೆದಿದ್ದರು.