ಗುಜರಾತ್ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭ: ಬೊಮ್ಮಾಯಿ ಭಾಗಿ
ಅಹಮದಾಬಾದ್ ಡಿಸೆಂಬರ್ 12: ಇಂದು ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಈ ಸಮಾರಂಭದಲ್ಲಿ ಭಾಗಿಯಾಗಲು ಗುಜರಾತ್ ತಲುಪಿದ್ದಾರೆ.
ದೇಶದಲ್ಲಿ ಹೆಚ್ಚು ಕುತೂಹಲವನ್ನು ಕೆರಳಿದ್ದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಇದರ ಬೆನ್ನಲ್ಲೆ ಇಂದು ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕರಿಸಲಿದ್ದು ಬೃಹತ್ ಸಮಾರಂಭವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ದೇಶದ ವಿವಿದೆಡೆಯಿಂದ ಗಣ್ಯರು ಭಾಗವಹಿಸಲಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಸಮಾರಂಭವದಲ್ಲಿ ಪಾಲ್ಗೊಳ್ಳಲಿದ್ದು ಈಗಾಗಲೇ ಗುಜರಾತ್ ತಲುಪಿದ್ದಾರೆ.
Gujarat CM oath ceremony Live: ಇಂದು ಗುಜರಾತ್ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕಾರ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, 'ಗುಜರಾತ್ ಅದ್ಭುತವಾಗಿ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗುಜತಾತ್ ಜನಾದೇಶದೊಂದಿಗೆ ಮುಂದಿನ ಹಂತಕ್ಕೆ ಅಭಿವೃದ್ಧಿ ಹೊಂದಲು ಸಿದ್ಧವಾಗಿದೆ. ಕರ್ನಾಟಕ ಪುನರಾವರ್ತಿತ ಗುಜರಾತ್ ಆಗಲಿದೆ' ಎಂದು ಹೇಳಿದರು.
ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಭೂಪೇಂದ್ರ ಪಟೇಲ್ ಅವರು ಇಂದು(ಡಿಸೆಂಬರ್ 12)ಸತತ ಎರಡನೇ ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಗಾಂಧಿನಗರದ ಹೊಸ ಸೆಕ್ರೆಟರಿಯೇಟ್ ಬಳಿಯ ಹೆಲಿಪ್ಯಾಡ್ ಮೈದಾನದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು 18ನೇ ಮುಖ್ಯಮಂತ್ರಿಯಾಗಲಿರುವ ಭೂಪೇಂದ್ರ ಪಟೇಲ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಪಟೇಲ್ ಅವರು ಸೆಪ್ಟೆಂಬರ್ 13, 2021 ರಂದು ಗುಜರಾತ್ನ 17 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಂದು ಎರಡನೇ ಬಾರಿ ಭೂಪೇಂದ್ರ ಪಟೇಲ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿ 2022 ರ ಚುನಾವಣೆಯಲ್ಲಿ ಸತತ 7ನೇ ಬಾರಿಗೆ ಭರ್ಜರಿ ಗೆಲುವಿನೊಂದಿಗೆ ಗುಜರಾತ್ನಲ್ಲಿ ಇತಿಹಾಸವನ್ನು ಸೃಷ್ಟಿಸಿತು. ತಮ್ಮದೇ ದಾಖಲೆಯನ್ನು ಮುರಿದು ಪಟೇಲ್ ಮತ್ತೊಮ್ಮೆ 2022ರ ಚುನಾವಣೆಯಲ್ಲಿ ಘಟ್ಲೋಡಿಯಾ ಕ್ಷೇತ್ರದಿಂದ 1,91,000 ಮತಗಳ ಭರ್ಜರಿ ಅಂತರದಿಂದ ಗೆದ್ದರು.
ಇಂದು ಭೂಪೇಂದ್ರ ಪಟೇಲ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ನೇತೃತ್ವದ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. 182 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗೆದ್ದುಕೊಂಡಿದ್ದು, ರಾಜ್ಯದಲ್ಲಿ ಇದುವರೆಗಿನ ಇದು ಅತ್ಯಧಿಕ ಮತದಾನವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ 17 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಕೇವಲ 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇನ್ನೂ ಮೂರು ಸ್ಥಾನಗಳು ಸ್ವತಂತ್ರ ಅಭ್ಯರ್ಥಿಗಳ ಪಾಲಾಗಿದ್ದು, ಸಮಾಜವಾದಿ ಪಕ್ಷ (ಎಸ್ಪಿ) ರಾಜ್ಯದಲ್ಲಿ ಏಕೈಕ ಸ್ಥಾನವನ್ನು ಗೆದ್ದಿದೆ.