ಈ ಸಮಯದಲ್ಲಿ ಕೊಲಿಜಿಯಂ ಸಭೆ ಏಕೆ? ಸಿಜೆಐ ನಿರ್ಧಾರಕ್ಕೆ ನ್ಯಾಯಮೂರ್ತಿಗಳ ಆಕ್ಷೇಪ
ನವದೆಹಲಿ, ಏಪ್ರಿಲ್ 8: ಸುಪ್ರೀಂಕೋರ್ಟ್ಗೆ ಹೊಸದಾಗಿ ನ್ಯಾಯಮೂರ್ತಿಗಳನ್ನು ಪದೋನ್ನತಿ ಮಾಡುವ ಸಂಬಂಧ ಚರ್ಚಿಸಲು ಗುರುವಾರ ಕೊಲಿಜಿಯಂ ಸಭೆ ನಡೆಸುವ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಅವರ ನಿರ್ಧಾರಕ್ಕೆ ಸುಪ್ರೀಂಕೋರ್ಟ್ನ ಕನಿಷ್ಠ ಇಬ್ಬರು ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸುಪ್ರೀಂಕೋರ್ಟ್ನ ಮುಂದಿನ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಈಗಾಗಲೇ ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ. ಹೀಗಿರುವಾಗ ಇನ್ನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರುವ ಹಾಲಿ ಸಿಜೆಐ ಯಾವುದೇ ಶಿಫಾರಸುಗಳನ್ನು ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂಕೋರ್ಟ್ನ ಅತಿ ಹಿರಿಯ ನ್ಯಾಯಮೂರ್ತಿ ಎನ್ವಿ ರಮಣ ಅವರನ್ನು ಮುಂದಿನ ಸಿಜೆಐ ಆಗಿ ಏಪ್ರಿಲ್ 6ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಧಿಕೃತವಾಗಿ ನೇಮಕ ಮಾಡಿದ್ದರು. ಏಪ್ರಿಲ್ 23ರಂದು ಎಸ್ಎ ಬೋಬ್ಡೆ ನಿವೃತ್ತರಾಗಲಿದ್ದು, ಅದರ ಮರುದಿನ ಎನ್ವಿ ರಮಣ ಅಧಿಕಾರ ಸ್ವೀಕರಿಸಲಿದ್ದಾರೆ.

ಕೋವಿಂದ್ ಅವರು ಸಿಜೆಯ ನೇಮಕದ ಆದೇಶ ಹೊರಡಿಸುವುದಕ್ಕೂ ಮುನ್ನ ಕೊಲಿಜಿಯಂ ಸಭೆಯನ್ನು ನಿಗದಿ ಮಾಡಲಾಗಿತ್ತು. ಆದರೆ ಅಧಿಸೂಚನೆ ಹೊರಡಿಸಿದ ಬಳಿಕ ಆಕ್ಷೇಪಗಳು ವ್ಯಕ್ತವಾದರೂ ಸಭೆ ನಡೆಸುವ ತಮ್ಮ ನಿರ್ಧಾರದಿಂದ ಸಿಜೆಐ ಬೋಬ್ಡೆ ಹಿಂದೆ ಸರಿದಿಲ್ಲ ಎನ್ನಲಾಗಿದೆ.
ಐವರು ನ್ಯಾಯಮೂರ್ತಿಗಳ ಕೊಲಿಜಿಯಂ, ಸುಪ್ರೀಂಕೋರ್ಟ್ಗೆ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡುತ್ತದೆ. ಸಿಜೆಐ ಬೋಬ್ಡೆ, ಮುಂದಿನ ಸಿಜೆಐ ಎನ್ವಿ ರಮಣ ಅವರಲ್ಲದೆ, ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ನಾರಿಮನ್, ಉದಯ್ ಯು ಲಲಿತ್ ಮತ್ತು ಎಎಂ ಖಾನ್ವಿಲ್ಕರ್ ಅವರು ಕೊಲಿಜಿಯಂನಲ್ಲಿದ್ದಾರೆ.
ಸುಪ್ರೀಂಕೋರ್ಟ್ಗೆ ಕನಿಷ್ಠ ಆರು ನ್ಯಾಯಮೂರ್ತಿಗಳ ನೇಮಕಾತಿ ಬಾಕಿ ಇದೆ. ತ್ರಿಪುರಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಖಿಲ್ ಖುರೇಷಿ ಅವರನ್ನು ಸುಪ್ರೀಂಕೋರ್ಟ್ಗೆ ಪದೋನ್ನತಿಗೊಳಿಸುವ ಶಿಫಾರಸು ಮಾಡಲು ಈ ಸಭೆ ಕರೆಯಲಾಗಿದೆ. ಆದರೆ ಖುರೇಷಿ ಅವರ ನೇಮಕಕ್ಕೆ ಸರ್ಕಾರದಿಂದ ಪ್ರತಿರೋಧ ಬರುವ ಸಾಧ್ಯತೆ ಇರುವುದರಿಂದ ಅವರ ಹೆಸರು ಶಿಫಾರಸು ಮಾಡಲು ಕೆಲವು ನ್ಯಾಯಮೂರ್ತಿಗಳು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಖುರೇಷಿ ಅವರನ್ನು ತ್ರಿಪುರಾ ಹೈಕೋರ್ಟ್ ಸಿಜೆಯನ್ನಾಗಿ ನೇಮಿಸುವಾಗಲೂ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಈ ವಿಚಾರದಲ್ಲಿ ಚೆಂಡನ್ನು ಕೇಂದ್ರದ ಅಂಗಳದಲ್ಲಿ ಬಿಡಬೇಕು ಎಂದು ಕೊಲಿಜಿಯಂಅನ್ನು ಕೆಲವರು ಒತ್ತಾಯಿಸಿದ್ದಾರೆ.
ಆದರೆ ಕೊಲಿಜಿಯಂನಲ್ಲಿ ಉಂಟಾಗಿರುವ ಈ ಗೊಂದಲವು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಬಿವಿ ನಾಗರತ್ನ ಸೇರಿದಂತೆ ಸುಪ್ರೀಂಕೋರ್ಟ್ಗೆ ಪದೋನ್ನತಿ ಪಡೆಯಲು ಯೋಗ್ಯರಾಗಿರುವ ಇತರೆ ನ್ಯಾಯಮೂರ್ತಿಗಳ ಹೆಸರು ಶಿಫಾರಸು ಮಾಡಲು ಅಡ್ಡಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಬಿವಿ ನಾಗರತ್ನ ಅವರು ಸುಪ್ರೀಂಕೋರ್ಟ್ಗೆ ಪದೋನ್ನತಿ ಪಡೆದರೆ ಅವರು ದೇಶದ ಮೊದಲ ಮಹಿಳಾ ಸಿಜೆಐ ಎನಿಸಿಕೊಳ್ಳುವ ಅವಕಾಶವಿದೆ.
ಸುಪ್ರೀಂಕೋರ್ಟ್ಗೆ ಐವರು ನ್ಯಾಯಮೂರ್ತಿಗಳ ಕೊರತೆ ಇದ್ದರೂ, ಹಾಲಿ ಸಿಜೆಐ ಎಸ್ಎ ಬೋಬ್ಡೆ ಅವರ 14 ತಿಂಗಳ ಅಧಿಕಾರಾವಧಿಯಲ್ಲಿ ಸರ್ಕಾರಕ್ಕೆ ಯಾವುದೇ ಹೆಸರನ್ನು ಶಿಫಾರಸು ಮಾಡಿರಲಿಲ್ಲ.












Click it and Unblock the Notifications