ಕೊರೊನಾ ಸೋಂಕಿನಿಂದ ಚಿಪ್ಕೊ ಚಳವಳಿ ನಾಯಕ ಸುಂದರ್ಲಾಲ್ ಬಹುಗುಣ ನಿಧನ
ನವದೆಹಲಿ, ಮೇ 21: ಚಿಪ್ಕೊ ಚಳವಳಿಯ ನಾಯಕ ಹಾಗೂ ಖ್ಯಾತ ಪರಿಸರವಾದಿ ಸುಂದರ್ ಲಾಲ್ ಬಹುಗುಣ ಅವರು ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಮೇ 8ರಂದು ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ರಿಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ್ಯುಮೋನಿಯಾ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಶುಕ್ರವಾರ ಮಧ್ಯಾಹ್ನ ನಿಧನರಾಗಿರುವುದಾಗಿ ರಿಷಿಕೇಶ ಏಮ್ಸ್ ಆಸ್ಪತ್ರೆ ದೃಢಪಡಿಸಿದೆ.
1927ರ ಜನವರಿಯಲ್ಲಿ ಉತ್ತರಾಖಂಡದಲ್ಲಿ ಜನಿಸಿದ ಸುಂದರಲಾಲ್ ಬಹುಗುಣ ಅವರು ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಕುರಿತು ಚಳವಳಿ ನಡೆಸಿದವರು. ದೇಶಾದ್ಯಂತ ಪರಿಸರ ರಕ್ಷಣೆ ಕುರಿತು ಹಲವು ಆಂದೋಲನಕ್ಕೆ ಸಾಕ್ಷಿಯಾದವರು.

ಬೃಹತ್ ಅಣೆಕಟ್ಟು, ಕೈಗಾರಿಕೆ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ಅರಣ್ಯ ನಾಶ ಆಗುತ್ತಿರುವುದರ ವಿರುದ್ಧ ದನಿಯೆತ್ತಿದರು. 1973ರಲ್ಲಿ ಚಿಪ್ಕೊ ಚಳವಳಿ ಆರಂಭವಾಗಿದ್ದು, 1977ರಲ್ಲಿ ಉತ್ತರಪ್ರದೇಶದಲ್ಲಿ ಈ ಚಳವಳಿಗೆ ಪರಿಸರವಾದಿ ಸುಂದರ್ ಲಾಲ್ ಬಹುಗುಣ ನಾಂದಿ ಹಾಡಿದ್ದರು.
1981ರಲ್ಲಿ ಪದ್ಮಶ್ರೀ ಹಾಗೂ 2009ರಲ್ಲಿ ಇವರಿಗೆ ಪದ್ಮವಿಭೂಷಣ ಗೌರವ ದೊರೆತಿತ್ತು.












Click it and Unblock the Notifications