ಮತ್ತೊಂದು ಆಘಾತಕಾರಿ ಘಟನೆ: ಚೀನಾದಿಂದ ಅರುಣಾಚಲ ಪ್ರದೇಶದ ಐವರು ಭಾರತೀಯರ ಅಪಹರಣ
ಕೋಲ್ಕತಾ, ಸೆಪ್ಟೆಂಬರ್ 5: ಪೂರ್ವ ಲಡಾಖ್ನ ಗಡಿಯಲ್ಲಿ ಚೀನಾದೊಂದಿಗೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವಾಗಲೇ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಸೈನಿಕರು ಅರುಣಾಚಲ ಪ್ರದೇಶದಿಂದ ಐದು ಮಂದಿಯನ್ನು ಅಪಹರಣ ಮಾಡಿದ್ದಾರೆ ಎಂದು ಅಲ್ಲಿನ ಕಾಂಗ್ರೆಸ್ ಶಾಸಕ ನಿನೊಂಗ್ ಎರಿಂಗ್ ಆರೋಪಿಸಿದ್ದಾರೆ.
ಮೀನುಗಾರಿಕೆಗೆ ತೆರಳಿದ್ದ ಐದು ಮಂದಿ ಗ್ರಾಮಸ್ಥರನ್ನು ಚೀನಾದ ಸೇನೆ ಅಪಹರಣ ಮಾಡಿದೆ ಎಂದು ಪಾಸಿಘಾಟ್ ವೆಸ್ಟ್ನ ಶಾಸಕ ನಿನೊಂಗ್ ಅವರು ಹೇಳಿದ್ದಾರೆ. ತನು ಬಾಕರ್, ಪ್ರಸಾತ್ ರಿಂಗ್ಲಿಂಗ್, ಗರು ಡಿರಿ, ಡೊಂಗ್ಟು ಎಬಿಯಾ ಮತ್ತು ಟೊಚ್ ಸಿಂಗ್ಕಮ್ ಎಂಬುವವರನ್ನು ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿನ ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ಸೆರಾ 7 ಪ್ರದೇಶದಿಂದ ಅಪಹರಿಸಲಾಗಿದೆ.
ಲಡಾಖ್ ಮತ್ತು ದೋಕ್ಲಂ ಬಳಿಕ ಚೀನಾದ ಪಡೆಗಳು ಅರುಣಾಚಲ ಪ್ರದೇಶದಲ್ಲಿ ಒಳನುಸುಳಲು ಆರಂಭಿಸಿವೆ. ಎಲ್ಎಸಿಯನ್ನು ಕೂಡ ದಾಟಿ ಬಂದಿವೆ ಎಂದು ನಿನೊಂಗ್ ಆರೋಪ ಮಾಡಿದ್ದಾರೆ. ಇದು ಬಹಳ ದುರದೃಷ್ಟಕರ ಘಟನೆ. ಎರಡನೆಯ ಬಾರಿ ಇಂತಹ ಘಟನೆ ನಡೆದಿದೆ ಎಂದು ವಿಷಾದಿಸಿದ್ದಾರೆ. ಮುಂದೆ ಓದಿ.

ಚೀನಾಕ್ಕೆ ತಕ್ಕ ಉತ್ತರ ಕೊಡಬೇಕು
ಅರುಣಾಚಲ ಪ್ರದೇಶದಲ್ಲಿ ಚೀನೀ ಪಡೆಗಳು ನುಸುಳುತ್ತಿವೆ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಪೇಮಾ ಖಂಡು ಅವರಿಗೆ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ಕೆಲವು ತಿಂಗಳ ಹಿಂದೆಯೂ ಇದೇ ರೀತಿ ಘಟನೆ ನಡೆದಿತ್ತು. ಚೀನಾ ಸೇನೆಗೆ ಸರಿಯಾದ ಉತ್ತರ ನೀಡಬೇಕಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಹೋದರ ನೀಡಿದ ಮಾಹಿತಿ
ಪ್ರಕಾಶ್ ರಿಂಗ್ಲಿಂಗ್ ಎಂಬುವವರು ತಮ್ಮ ಸಹೋದರ ಪ್ರಸಾತ್ ರಿಂಗ್ಲಿಂಗ್ ಮತ್ತು ಇತರೆ ನಾಲ್ವರು ಯುವಕರನ್ನು ಚೀನಾ ಸೈನಿಕರು ಅಪಹರಣ ಮಾಡಿದ್ದಾಗಿ ಫೇಸ್ಬುಕ್ನಲ್ಲಿ ಬರೆದಿದ್ದರು. ಅವರನ್ನು ಚೀನಾ ಪಡೆಗಳಿಂದ ಬಿಡಿಸಿಕೊಂಡು ಕರೆತರಲು ಸೇನಾಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಇದನ್ನು ನಿನೊಂಗ್ ಹಂಚಿಕೊಂಡಿದ್ದಾರೆ.

ಗಮನ ಬದಲಿಸುವ ಉದ್ದೇಶ
ಭಾರತ ಸರ್ಕಾರ ಈ ಪ್ರಕರಣದಲ್ಲಿ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಇದು ನಮ್ಮ ಪೂರ್ವಜರ ಭೂಮಿ. ಇದರ ಮೇಲೆ ಹಕ್ಕು ಹೊಂದಲು ನಮ್ಮ ಜನರಿಗೆ ಎಲ್ಲ ಅಧಿಕಾರವಿದೆ ಎಂದಿರುವ ನಿನೊಂಗ್, ಭಾರತದ ಗಮನವನ್ನು ಲಡಾಖ್ನಿಂದ ಅರುಣಾಚಲ ಪ್ರದೇಶದತ್ತ ತಿರುಗಿಸಲು ಚೀನಾ ಬಯಸಿದೆ ಎಂದಿದ್ದಾರೆ.

ಗಡಿಯಲ್ಲಿ ಚೀನೀ ಪಡೆಗಳ ಜಮಾವಣೆ
ಅರುಣಾಚಲ ಪ್ರದೇಶದ ಗಡಿಯಲ್ಲಿ ಬಹುತೇಕ ಭೂಮಿಗೆ ಕಾವಲು ಇಲ್ಲ. ನೂರಾರು ಕಿ.ಮೀ. ಮತ್ತು ಅತ್ಯಂತ ಒಳಭಾಗದ ಪ್ರದೇಶಗಳಲ್ಲಿ ಯಾವುದೇ ರಕ್ಷಣೆ ಇಲ್ಲ. ಈ ಪ್ರದೇಶಗಳಿಗೆ ತಲುಪಲು ಕೆಲವೊಮ್ಮೆ 15 ದಿನ ಬೇಕಾಗುತ್ತದೆ. ಐಟಿಬಿಪಿ ಇಲ್ಲಿ ಕಾವಲು ಕಾಯುತ್ತಿದ್ದು, ಭಾರತೀಯ ಸೇನೆ ಅವರಿಗೆ ನೆರವಾಗಿದೆ. ನಾವು ಎಚ್ಚರಿಕೆಯಿಂದ ಇದ್ದೇವೆ. ಗಡಿಯಲ್ಲಿ ಹೆಚ್ಚಿನ ಪ್ರಮಾಣದ ಫಿರಂಗಿ ಚಲನೆ ಮತ್ತು ಹೆಚ್ಚುವರಿ ಪಡೆಗಳ ನಿಯೋಜನೆ ಮಾಡಲಾಗಿದೆ. ಈ ಬಗ್ಗೆ ಕೂಡಲೇ ಕೇಂದ್ರ ಸರ್ಕಾರ ಗಮನ ಹರಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications