ಭೂತಾನ್ನ ಮತ್ತಷ್ಟು ಪ್ರದೇಶ ಆಕ್ರಮಿಸುತ್ತಿದೆ ಚೀನಾ
ನವದೆಹಲಿ, ಸೆಪ್ಟೆಂಬರ್ 14: ಲಡಾಖ್ ಮತ್ತು ದಕ್ಷಿಣ ಚೀನಾ ಸಮುದ್ರ ಪ್ರದೇಶಗಳಲ್ಲಿ ಅತಿಕ್ರಮಣದ ಚಟುವಟಿಕೆ ನಡೆಸಿದ ಬಳಿಕ ಚೀನಾ ಕಣ್ಣು ಈಗ ನೆರೆಯ ಭೂತಾನ್ ಮೇಲೆ ಬಿದ್ದಿದೆ. ಭೂತಾನ್ನ ಪಶ್ಚಿಮ ಹಾಗೂ ಕೇಂದ್ರ ಭಾಗಗಳ ಗಡಿಯಲ್ಲಿ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಭೂತಾನ್ ಜತೆಗಿನ ಗಡಿ ಮಾತುಕತೆಯ 25ನೇ ಸುತ್ತಿನಲ್ಲಿ ಅದು ತನಗೆ ಅನುಕೂಲಕರವಾದ ವಾತಾವರಣಗಳನ್ನು ನಿರ್ಮಿಸಿಕೊಳ್ಳುತ್ತಿದೆ ಎನ್ನಲಾಗಿದೆ.
ಭೂತಾನ್ನ ಪ್ರಮುಖ ಪ್ರದೇಶಗಳಲ್ಲಿ ಒಂದಾದ ಥಿಂಪು, ಚೀನಾ ಸೇನೆಯ ಅತ್ಯಧಿಕ ಬೆದರಿಕೆ ಎದುರಿಸುತ್ತಿದೆ. ಈಗಾಗಲೇ ಚೀನಾವು ಭೂತಾನ್ಗೆ ಸೇರಿದ ಪಶ್ಚಿಮ ಭಾಗಗಳನ್ನು ಒತ್ತುವರಿ ಮಾಡಿಕೊಂಡಿದೆ. ಇದರ ಜತೆಗೆ ಕೇಂದ್ರ ಭೂತಾನ್ನಲ್ಲಿಯೂ ಅತಿಕ್ರಮಣದ ಚಟುವಟಿಕೆಗಳಿಗೆ ಸೇನೆಯನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ. ಮುಂಬರುವ ಸಂಧಾನ ಮಾತುಕತೆಯಲ್ಲಿ ಅದು ತನ್ನ ಪ್ರಾಬಲ್ಯವನ್ನು ಮೆರೆಯಲು ಎಲ್ಲ ಸಿದ್ಧತೆ ನಡೆಸಿದೆ.
2017ರಲ್ಲಿ ದೋಕ್ಲಂ ಪ್ರದೇಶದಲ್ಲಿನ 73 ದಿನಗಳ ಸೇನಾ ಬಿಕ್ಕಟ್ಟನ್ನು ನಿವಾರಿಸಲು ಪಿಎಲ್ಎ ವಿರುದ್ಧದ ಭೂತಾನ್ ನಿಲುವಿಗೆ ಭಾರತ ಸಹಾಯ ಮಾಡಿದ್ದರೂ, ಈ ಭಾಗದಲ್ಲಿನ ಎರಡು ಮಿತ್ರದೇಶಗಳ ಸೇನೆಗಳನ್ನು ಪರೀಕ್ಷಿಸುವ ಕೆಟ್ಟಬುದ್ಧಿಯನ್ನು ಚೀನಾ ಸೇನೆ ಇನ್ನೂ ನಿಲ್ಲಿಸಿಲ್ಲ. ಮುಂದೆ ಓದಿ.

ಭಾರತಕ್ಕೂ ಅಪಾಯಕಾರಿ
ಭಾರತಕ್ಕೆ ಭೂತಾನ್ನ ಸುರಕ್ಷತೆ ಬಹಳ ಮುಖ್ಯವಾಗಿದೆ. ಭಾರತದ ಸಿಲಿಗುರಿ ಕಾರಿಡಾರ್ ಮಗ್ಗುಲಿನಲ್ಲಿಯೇ ಭೂತಾನ್ ಅಂಟಿಕೊಂಡಂತೆ ಇದ್ದು, ಭಾರತದ ರಾಷ್ಟ್ರೀಯ ಭದ್ರತೆಗೆ ಕೇಂದ್ರವಾಗಿದೆ. ಚೀನಾದೊಂದಿಗೆ ಭೂತಾನ್ ಮಾಡಿಕೊಳ್ಳುವ ಯಾವುದೇ ಪ್ರಾದೇಶಕ ರಾಜಿಯು ಈ ಭಾಗದ ಭಾರತದ ರಕ್ಷಣಾ ಕಾರ್ಯಗಳ ಮೇಲೆ ಅಡ್ಡಪರಿಣಾಮ ಬೀರುತ್ತದೆ.

ಭೂತಾನ್ ಸೇನೆಗೆ ಅವಕಾಶವಿಲ್ಲ
ಭೂತಾನ್ನ ಕೇಂದ್ರ ಭಾಗದಲ್ಲಿ 495 ಚದರ ಕಿ.ಮೀ ಹಾಗೂ ಪಶ್ಚಿಮ ಭಾಗದಲ್ಲಿ 318 ಚದರ ಕಿ.ಮೀ ಪ್ರದೇಶವು ತನ್ನದು ಎಂದು ಚೀನಾ ಪ್ರತಿಪಾದಿಸಿದೆ. ಭೂತಾನ್ನ ಶಾಂತಿಯುತ ನಿಲುವನ್ನು ಕೆಣಕಲು ಉದ್ದೇಶಪೂರ್ವಕವಾಗಿಯೇ ಅದು ತನ್ನ ಪ್ರಾದೇಶಿಕ ವಿಸ್ತೀರ್ಣವನ್ನು ವಿಸ್ತರಿಸಲು ನೀತಿಗಳನ್ನು ಪ್ರಯೋಗಿಸುತ್ತಿದೆ. ಭೂತಾನ್ನ ಭಾಗಗಳಲ್ಲಿ ರಸ್ತೆಗಳ ನಿರ್ಮಾಣ, ಕಟ್ಟಡ ನಿರ್ಮಾಣ ಮತ್ತು ಸೇನಾ ಮೂಲಸೌಕರ್ಯಗಳ ಸುಧಾರಣೆಯ ಚಟುವಟಿಕೆಗಳನ್ನು ನಡೆಸುತ್ತಿದೆ. ತೀವ್ರಮಟ್ಟದಲ್ಲಿ ಗಸ್ತು ತಿರುಗುವ ಮೂಲಕ ಈ ಪ್ರದೇಶಗಳಲ್ಲಿ ರಾಯಲ್ ಭೂತಾನ್ ಆರ್ಮಿ ಪ್ರವೇಶ ಮಾಡದಂತೆ ತಡೆಯುತ್ತಿದೆ.

ಭೂತಾನ್ ಒಳಗೆ ಚೀನಾ ಚಟುವಟಿಕೆ
2017ರ ದೋಕ್ಲಂ ಬಿಕ್ಕಟ್ಟಿನ ನಂತರ ಚೀನಾ ಸೇನೆಯು ಪಶ್ಚಿಮ ಭೂತಾನ್ನ ಐದು ಪ್ರದೇಶಗಳ ಒಳಗೆ ನುಸುಳಿವೆ. ಭೂತಾನ್ನ ಚುಂಬಿ ಕಣಿವೆಯ ಸುಮಾರು 40 ಕಿ.ಮೀ. ಒಳಭಾಗದಲ್ಲಿ ತನ್ನ ಗಡಿಯನ್ನು ವಿಸ್ತರಿಸಿದೆ. ಇದೆಲ್ಲವೂ ತನ್ನದೆಂದು ಅದು ವಾದಿಸುತ್ತಿದೆ. ಅದಕ್ಕೆ ಪೂರಕವಾಗಿ ಅಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಮತ್ತೊಂದು ಜಾಗದ ಮೇಲೆ ಚೀನಾ ಕಣ್ಣು
ಇಷ್ಟಕ್ಕೇ ಚೀನಾ ಸುಮ್ಮನಾಗಿಲ್ಲ. ಭೂತಾನ್ನ ಸಾಕ್ಟೆಂಗ್ ವನ್ಯಜೀವಿ ಪ್ರದೇಶ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಜೂನ್ನಲ್ಲಿ ಎಚ್ಚರಿಕೆ ನೀಡಿದೆ. ಇದು ವಿವಾದಿತ ಗಡಿ ಪ್ರದೇಶದಲ್ಲಿದೆ ಎಂದು ಹೇಳಿದೆ. ಭಾರತ ಮತ್ತು ಚೀನಾದ ಗಡಿ ಹೊಂದಿಕೊಂಡಂತೆ 750 ಚದರ ಕಿ.ಮೀ. ಹರಡಿರುವ ಪೂರ್ವ ತ್ರಾಷಿಗಾಂಗ್ ಡೊಂಗ್ಖಾಗ್ ಪ್ರದೇಶದಲ್ಲಿನ ಚೀನಾದ ಈ ಹೊಸ ವರಸೆ ಭಾರತಕ್ಕೂ ಚಿಂತೆಯ ವಿಷಯ. ಏಕೆಂದರೆ ಈ ವನ್ಯಜೀವಿ ಸಂರಕ್ಷಿತಾರಣ್ಯವು ಚೀನಾವು ತನ್ನದೆಂದು ಪ್ರತಿಪಾದಿಸುತ್ತಿರುವ ಅರುಣಾಚಲ ಪ್ರದೇಶಕ್ಕೂ ಹಬ್ಬಿದೆ. ಹಿಂದೆಂದೂ ಚೀನಾ ಈ ಭಾಗವನ್ನು ತನ್ನದು ಎಂದು ಹೇಳಿಕೊಂಡಿರಲಿಲ್ಲ. ಈ ಹೊಸ ಬೆಳವಣಿಗೆ ಭೂತಾನ್ಗೆ ಅಚ್ಚರಿ ಮೂಡಿಸಿದೆ.












Click it and Unblock the Notifications