ರೈತರು ಕೂಡಿಟ್ಟ 100 ಕೆ.ಜಿಗೂ ಅಧಿಕ ಸಗಣಿ ಕಳ್ಳತನ!
ರಾಯ್ ಪುರ್, ಆ. 10: ಗ್ರಾಮೀಣ ಜನ, ಹೈನುಗಾರಿಕೆ, ರೈತರಿಗೆ ಆರ್ಥಿಕ ಉತ್ತೇಜನ ನೀಡುವ ಸಲುವಾಗಿ ಛತ್ತೀಸ್ ಗಢ ಸರ್ಕಾರವು ಜಾರಿಗೆ ತಂದಿರುವ ಗೋಧಾನ್ ನ್ಯಾಯ್ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ರೈತರು ಸಂಗ್ರಹಿಸಿಟ್ಟಿದ್ದ 100ಕ್ಕೂ ಅಧಿಕ ಕೆ.ಜಿ ಸಗಣಿ ಕಳ್ಳತನವಾಗಿದೆ.
ಸಾವಯವ, ಎರೆ ಹುಳು ಗೊಬ್ಬರ ಉತ್ಪಾದನೆಗೆ ಮುಂದಾಗಿರುವ ಸರ್ಕಾರ, ದನಗಾಹಿಗಳಿಂದ ಸಗಣಿ ಸಂಗ್ರಹಿಸತೊಡಗಿತ್ತು. ಒಂದು ಕೆ.ಜಿ ಸಗಣಿಗೆ 2 ರೂ.ನಂತೆ ಖರೀದಿಸಲು ಛತ್ತೀಸ್ ಗಢ ಸರ್ಕಾರ ಬೆಲೆ ನಿಗದಿ ಮಾಡಿತ್ತು. ಜುಲೆೈ 20ರಂದು ಹರೇಲಿ ಹಬ್ಬದ ಅಂಗವಾಗಿ ಗೋಧನ್ ನ್ಯಾಯ ಯೋಜನೆ ಅನ್ವಯ ಸಗಣಿ ಖರೀದಿಗೆ ಚಾಲನೆ ನೀಡಲಾಗಿತ್ತು.
ಇದರಂತೆ, ರೈತರು ಕೂಡಾ ನೂರಾರು ಕೆಜಿ ಸಗಣಿ ಸಂಗ್ರಹಿಸಿದ್ದರು. ಆದರೆ, ಕೊರಿಯಾ ಜಿಲ್ಲೆಯ ರೊಹಿ ಎಂಬ ಗ್ರಾಮದ ಇಬ್ಬರು ರೈತ ಕುಟುಂಬ ಸಂಗ್ರಹಿಸಿದ್ದ ಸಗಣಿ ನಾಪತ್ತೆಯಾಗಿದೆ. ಲಲ್ಲಾ ರಾಮ್ ಹಾಗೂ ಸೆಮ್ ಲಾಲ್ ಎಂಬ ರೈತರು ಗೋಧನ್ ಸಮಿತಿಯಲ್ಲಿ ನೋಂದಾಯಿಸಿಕೊಂಡು ಸಗಣಿ ಸಂಗ್ರಹಕ್ಕೆ ಮುಂದಾಗಿದ್ದರು. ಆದರೆ, ಈಗ ಸಗಣಿ ಕಾಣದಿರುವುದಕ್ಕೆ ಕಂಗಲಾಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಹರೇಲಿ ಹಬ್ಬದಿಂದ ಆರಂಭಗೊಂಡು ಸಗಣಿ ಸಂಗ್ರಹ ಬೃಹತ್ ಪ್ರಮಾಣದಲ್ಲಿ ಆಗಲಿದ್ದು, ಸಾವಿರಾರು ಟನ್ ಸಗಣಿ ಸಂಗ್ರಹಿಸಿ, ಸಾವಯವ ಗೊಬ್ಬರ ಉತ್ಪಾದನೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಸದ್ಯದ ಮಾಹಿತಿಯಂತೆ ಇಲ್ಲಿನ ಕಾಂಗ್ರೆಸ್ ಸರ್ಕಾರವು 46000 ದನಗಾಹಿಗಳ ಖಾತೆಗೆ 1.65 ಕೋಟಿ ರು ಮೊತ್ತ ಪಾವತಿಸಿದೆ. 2408 ದನಗಾಹಿಗಳು ಗ್ರಾಮೀಣ ಭಾಗದಲ್ಲಿ 377 ಮಂದಿ ನಗರ ಪ್ರದೇಶದಲ್ಲಿ ಈ ಯೋಜನೆಯ ಭಾಗವಾಗಿದ್ದಾರೆ. ಸಗಣಿ ಸಂಗ್ರಹಕ್ಕೆ ಮಹಿಳಾ ಸ್ವಯ ಸಹಾಯ ಸಂಘದವರನ್ನು ಬಳಸಿಕೊಳ್ಳಲಾಗಿದೆ. 11360 ಗ್ರಾಮ ಪಂಚಾಯಿತಿ, 20, 000 ಹಳ್ಳಿಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, 5000ಕ್ಕೂ ಅಧಿಕ ಗೊಬ್ಬರ ಉತ್ಪಾದನೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಕೇಂದ್ರಗಳಿಂದ ಉತ್ಪಾದನೆಯಾಗುವ ಸಾವಯವ ಗೊಬ್ಬರವನ್ನು 8 ರು ಪ್ರತಿ ಕೆಜಿಯಂತೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.












Click it and Unblock the Notifications