ವಂಚನೆ ಪ್ರಕರಣ: ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಸುಕೇಶ್!
ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಸುಕೇಶ್ ಚಂದ್ರಶೇಖರ್ ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಎನ್ನುವ ವಿಚಾರ ಬಹಿರಂಗಗೊಂಡಿದೆ.
ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಸುಕೇಶ್ ಚಂದ್ರಶೇಖರ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಾಲಿವುಡ್ ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್, ನಿಕ್ಕಿ ತಾಂಬೋಲಿ, ಸೋಫಿಯಾ ಸಿಂಗ್ ಮತ್ತು ಅರುಷಾ ಪಾಟೀಲ್ ಜೊತೆಗೆ ಚಾಹತ್ ಖನ್ನಾ ಅವರ ಹೆಸರು ಕೂಡ ಬೆಳಕಿಗೆ ಬಂದಿದೆ. ಈ ಪೈಕಿ ಹಲವು ನಟಿಯರು ಜೈಲಿನಲ್ಲಿ ಸುಕೇಶ್ ಅವರನ್ನು ಭೇಟಿಯಾದ ಚರ್ಚೆಯೂ ಜೋರಾಗಿದೆ. ಇದೀಗ ನಟಿ ಚಾಹತ್ ಖನ್ನಾ ಅವರು ಸುಖೇಶ್ ಚಂದ್ರಶೇಖರ್ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.
ಈ ಹಿಂದೆ ಶ್ರೀಲಂಕಾದ ಪ್ರಜೆಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ತನ್ನನ್ನು ಮದುವೆಯಾಗಲು ಬಯಸಿರುವುದಾಗಿ ವಿಚಾರಣೆ ವೇಳೆ ಸುಕೇಶ್ ಚಂದ್ರಶೇಖರ್ ಹೇಳಿಕೊಂಡಿದ್ದರು. ಆದರೀಗ ಸುಕೇಶ್ ಮೇಲೆ ನಟಿ ಚಾಹತ್ ಖನ್ನಾ ಕೂಡ ಇದೇ ಆರೋಪವನ್ನು ಮಾಡಿದ್ದಾರೆ. ಜೈಲಿನಲ್ಲಿರುವ ಸುಕೇಶ್ ಚಾಹತ್ ಖನ್ನಾಗೆ ಪ್ರಪೋಸ್ ಮಾಡಿದ್ದನು. ಮದುವೆಯಾಗಲು ಇಚ್ಚಿಸಿರುವುದಾಗಿಯೂ ಹೇಳಿಕೊಂಡಿದ್ದರು ಎಂದು ಚಾಹತ್ ಖನ್ನಾ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ.
'ನನ್ನನ್ನು ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ'
ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹೇಳಿಕೆ ನೀಡುವಾಗ, ಚಾಹತ್ ಖನ್ನಾ ಅವರು ಸಂಪೂರ್ಣ ವಿಷಯ ಮತ್ತು ಸುಕೇಶ್ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಪ್ರಸ್ತಾಪಿಸಿದ್ದಾರೆ. ತಿಹಾರ್ ಜೈಲಿನಲ್ಲಿ ಸುಕೇಶ್ ತನ್ನನ್ನು ಬಯಸಿರುವುದಾಗಿ ನಟಿ ಬಹಿರಂಗಪಡಿಸಿದ್ದಾರೆ. ಜೈಲಿನಲ್ಲಿ ನನ್ನನ್ನು ಭೇಟಿ ಮಾಡಿ ವಂಚಿಸಲು ಸುಕೇಶ್ ಬಲೆ ಹೆಣೆದಿದ್ದರು ಎಂದು ಚಾಹತ್ ಖನ್ನಾ ಆರೋಪಿಸಿದ್ದಾರೆ. ನನ್ನನ್ನು ಮತ್ತೆ ಮತ್ತೆ ಈ ವಿಚಾರದಲ್ಲಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ತನ್ನ ಹೆಸರನ್ನು ಬಹಿರಂಗಪಡಿಸದಿರಲು ಡೀಲ್ ಮಾಡಿಕೊಳ್ಳುವುದಾಗಿ ಒತ್ತಾಯಿಸಲಾಗುತ್ತಿದೆ ಎಂದು ಖನ್ನಾ ಹೇಳಿಕೊಂಡಿದ್ದಾರೆ.
'ಮೊಣಕಾಲೂರಿ ಪ್ರೇಮ ಪ್ರಸ್ತಾಪ ಮಾಡಿದ ಸುಕೇಶ್ ...'
ಸುಕೇಶ್ ಚಂದ್ರಶೇಖರ್ ಮೊಣಕಾಲೂರಿ ನನ್ನ ಪ್ರಪೋಸ್ ಮಾಡಿದ್ದಾರೆ ಎಂದು ಶಾಹತ್ ಖನ್ನಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆಗ ಚಾಹತ್ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿದರೆ, ಸುಕೇಶ್ ತನ್ನ ಪತಿ ತನಗೆ ಸರಿಯಿಲ್ಲ. ನಾನು ನಿನ್ನ ಮಕ್ಕಳಿಗೆ ತಂದೆಯಾಗಿರುತ್ಥೇನೆ ಎಂದು ಹೇಳಿದರು ಎಂದು ನಟಿ ಆರೋಪಿಸಿದ್ದಾರೆ. ದಕ್ಷಿಣ ಟಿವಿ ಚಾನೆಲ್ನ ಮಾಲೀಕ ಮತ್ತು ದಿವಂಗತ ಜಯಲಲಿತಾ ಅವರ ಸೋದರಳಿಯ ಎಂದು ಸುಕೇಶ್ನನ್ನು ಚಾಹತ್ಗೆ ಪರಿಚಯಿಸಲಾಯಿತು ಎಂದು ಅವರು ಹೇಳಿದ್ದಾರೆ.
ಮದುವೆಯಾಗುವ ಇಚ್ಚೆಯನ್ನು ವ್ಯಕ್ತಪಡಿಸಿದ ಚಾಹತ್ ಖನ್ನಾ
ETimes ಜೊತೆಗಿನ ಸಂವಾದದಲ್ಲಿ, ಚಾಹತ್ ಖನ್ನಾ ಅವರು 'ಸುಕೇಶ್ ನನಗೆ ನನ್ನ ಅಭಿಮಾನಿ ಮತ್ತು ನನ್ನ ಟಿವಿ ಶೋ ಬಡೇ ಅಚೇ ಲಗ್ತೆ ಹೇ ಅನ್ನು ನೋಡಿದ್ದಾಗಿ' ಹೇಳಿದರು. ಇದಾದ ನಂತರ ಅವರು ನನ್ನನ್ನು ಭೇಟಿಯಾಗಲು ಬಯಸಿದ್ದರು. ನನಗೆ ಭಯವಾಯಿತು ಮತ್ತು ನನ್ನನ್ನು ಇಲ್ಲಿ ಜೈಲಿಗೆ ಏಕೆ ಕರೆದಿದ್ದೀರಿ ಎಂದು ಹೇಳಿದೆ. ನನ್ನ ಆರು ತಿಂಗಳ ಮಗು ಮನೆಯಲ್ಲಿದ್ದು ಯಾವುದೋ ಫಂಕ್ಷನ್ ಇದೆ ಎಂದುಕೊಂಡು ವಾಪಸ್ ಬರಲು ಮುಂದಾದೆ. ಆಗ ಸುಕೇಶ್ ನನ್ನ ಮುಂದೆ ಮೊಣಕಾಲೂರಿ ಪ್ರೇಮ ಪ್ರಸ್ತಾಪ ಮಾಡಿದರು. ಜೊತೆಗೆ ತಮ್ಮನ್ನು ಮದುವೆಯಾಗಲು ಇಚ್ಛಿಸಿರುವುದಾಗಿ ಹೇಳಿದರು ಎಂದು ಚಾಹತ್ ಖನ್ನಾ ಹೇಳಿದ್ದಾರೆ.
ಖನ್ನಾ ತಿಹಾರ್ ಜೈಲು ತಲುಪಿದ್ದು ಹೀಗೆ
ನಾನು ಸುಕೇಶ್ಗೆ 'ನನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಗೋಗರೆದರು. ಆದರೆ ನನ್ನ ಪತಿ ನನಗೆ ಸೂಕ್ತ ವ್ಯಕ್ತಿಯಲ್ಲ, ಅವರೇ ನನ್ನ ಮಕ್ಕಳಿಗೆ ತಂದೆಯಾಗುವುದಾಗಿ ಹೇಳಿದರು' ಎಂದು ಖನ್ನಾ ಹೇಳಿದ್ದಾರೆ. ಇದನ್ನು ಕೇಳಿದ ನನಗೆ ತುಂಬಾ ಬೇಸರವಾಯಿತು ಮತ್ತು ನಂತರ ಅಳಲು ಪ್ರಾರಂಭಿಸಿದೆ. ನಾನೂ ಕೂಡ ನರಳುತ್ತಿದ್ದೇನೆ ಮತ್ತು ನಾನು ಕೂಡ ಸಾಕಷ್ಟು ನೋವನ್ನು ಅನುಭವಿಸಿದ್ದೇನೆ ಎಂದು ಚಾಹತ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಏಂಜೆಲ್ ಎಂಬ ಮಹಿಳೆ ನನ್ನನ್ನು ಸುಕೇಶ್ ಬಳಿ ಕರೆದೊಯ್ದಳು ಎಂದು ಖನ್ನಾ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಸುಕೇಶ್ ಪ್ರಕರಣ ಸದ್ಯಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ. ಬಗೆದಷ್ಟು ಹೊಸ ಹೊಸ ವಿಚಾರಗಳು ಹೊರಬರುತ್ತಲೇ ಇವೆ. ಮುಂದೆ ಈ ಪ್ರಕರಣ ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎಂದು ಕಾದು ನೋಡಬೇಕಿದೆ.